ಭಾಲ್ಕಿ: ವಿದ್ಯಾರ್ಥಿ ಜೀವನ ತಪಸ್ಸಿನಂತಿದೆ. ವಿದ್ಯಾರ್ಥಿಗಳು ಎಷ್ಟೇ ಎತ್ತರಕ್ಕೆ ಬೆಳೆದರೂ ಪ್ರಯತ್ನ ನಿಲ್ಲಿಸಬಾರದು. ನಿರಂತರ ಪ್ರಯತ್ನದಿಂದ ಮುನ್ನಡೆ ಸಾಧ್ಯ ಎಂದು ಡೈಮಂಡ ಪಿಯು ಕಾಲೇಜಿನ ಪ್ರಾಚಾರ್ಯ ಮಸ್ತಾನವಲಿ ನುಡಿದರು.
ಡೈಮಂಡ್ ಪಿಯು ಕಾಲೇಜಿನಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ, ಅತ್ಯುನ್ನತ ಹುದ್ದೆಯಲ್ಲಿರುವುದು ನಮ್ಮೆಲ್ಲರ ಮೆಚ್ಚುಗೆಗೆ ಕಾರಣವಾಗಿದೆ ಎಂದು ನುಡಿದರು.
ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಭೊಸಲೆ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿವಿಧ ಶಾಲೆಗಳ 7500 ವಿದ್ಯಾರ್ಥಿಗಳು, ಭಾಲ್ಕಿಯ ಡೈಮಂಡ ಕಾಲೇಜಿನಲ್ಲಿ ನಡೆದ ಶಿಷ್ಯವೇತನ ಪರೀಕ್ಷೆ ಬರೆದಿದ್ದರು. ಅವರಲ್ಲಿ 25 ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದು ಉಚಿತ ವ್ಯಾಸಂಗಕ್ಕೆ ಆಯ್ಕೆಯಾಗಿದ್ದಾರೆ. ಹೀಗಾಗಿ ಇವರೆಲ್ಲರಿಗೂ ಕಾಲೇಜಿನಿಂದ ಇಂದು ಗೌರವಿಸಲಾಗುತ್ತಿದ್ದು, ಇವರೆಲ್ಲರೂ ಮುಂದೆಯೂ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿ ಕಾಲೇಜಿನ ಕೀರ್ತಿ ಹೆಚ್ಚಿಸುವರು ಎನ್ನುವ ವಿಶ್ವಾಸ ನಮಗಿದೆ ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಂದೆ, ತಾಯಿ, ಗುರು, ಹಿರಿಯರನ್ನು ಗೌರವಿಸಿ ವಿದ್ಯಾಭ್ಯಾಸ ಮುಂದುವರೆಸಬೇಕು ಅಂದಾಗ ಮಾತ್ರ ಉನ್ನತ ಗುರಿ ಮುಟ್ಟಲು ಸಾಧ್ಯ. ಗುರಿ ಮಹತ್ವದ್ದಾಗಿದ್ದು, ಸಾಧಿಸುವ ಛಲ ಹೊಂದಿರಬೇಕು ಎಂದು ಹೇಳಿದರು.