ಮಾನ್ವಿ: ಕೌಟುಂಬಿಕ ಕಲಹದಿಂದ ಬೇಸತ್ತು ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಮನವೊಲಿಸಿ ಕೆಳಗಿಳಿಸಿದ ಪ್ರಸಂಗ ಗುರುವಾರ ನಡೆಯಿತು. ಪಟ್ಟಣದ ಕುಂಬಾರ ಓಣಿಯ ಯುವಕ ಅಮ್ಜದ್ ಖಾನ್ (35) ಟವರ್ ಏರಿದ ವ್ಯಕ್ತಿಯಾಗಿದ್ದಾನೆ. ಹಲವು ದಿನಗಳಿಂದ ಕೌಟಂಬಿಕ ಕಲಹ ಹಾಗೂ ಕೆಲ ವ್ಯಕ್ತಿಗಳಿಂದ ವೈಯಕ್ತಿಕ ನಿಂದನೆಗಳನ್ನು ಎದುರಿಸುತ್ತಿದ್ದ ಅಮ್ಜದ್ ಖಾನ್ ಗುರುವಾರ ಬೆಳಗ್ಗೆ ಮೊಬೈಲ್ ಟವರ್ ಹತ್ತಿದ್ದ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದನು. ಈ ಕುರಿತು ಮಾಹಿತಿ ಪಡೆದ ಪೊಲೀಸರು, ಅಗ್ನಿಶಾಮಕ ದಳ, ಪುರಸಭೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸತತ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ, ಅಮ್ಜದ್ ಖಾನ್ ಮನವೊಲಿಸಿ ಕೆಳಗಿಳಿಸುವಲ್ಲಿ ಯಶಸ್ಸಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪಿಐ ವೀರಭದ್ರಯ್ಯ ಸ್ವಾಮಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.