ಒಟ್ಟೂ 12,30,037 ಮತದಾರರು, 11,23,022 ಮ್ಯಾಪಿಂಗ್, 1,07,015 ಸ್ಥಳಾಂತರ, ದ್ವಿಪ್ರತಿ
ಜಿಲ್ಲೆಯಲ್ಲಿ ನಡೆದಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ, ಮ್ಯಾಪಿಂಗ್ ಆಗದಿರುವ ಮತದಾರರು ಮತ್ತು ಮ್ಯಾಪಿಂಗ್ನಲ್ಲಿ ತಾರ್ಕಿಕ ವ್ಯತ್ಯಾಸ ಹೊಂದಿರುವ ಮತದಾರರಿಗೆ ಹಾಗೂ ಅಗತ್ಯವಿರುವ ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ನೋಟಿಸ್ ಸ್ವೀಕರಿಸುವ ಮತದಾರರು ವಿಚಾರಣೆಗೆ ಖುದ್ದಾಗಿ ಹಾಜರಾಗುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ, ಜಿಲ್ಲೆಯ ರಾಜಕೀಯ ಪಕ್ಷಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಒಟ್ಟು ಮತದಾರರ ಸಂಖ್ಯೆ 12,30,037 ರಲ್ಲಿ 11,23,022 ಮಂದಿಯ ಮ್ಯಾಪಿಂಗ್ ಮುಗಿದಿದ್ದು, ಸ್ಥಳಾಂತರ, ವಲಸೆ, ಮರಣ, ದ್ವಿಪ್ರತಿಯ ಮತ್ತು ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ 1,07,015 ಮಂದಿಯನ್ನು ಗುರುತಿಸಲಾಗಿದ್ದು, ಇದರಲ್ಲಿ 65,330 ಮಂದಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಾಗಿದೆ. ಈ ಕುರಿತು ಸಂಬಂಧಪಟ್ಟ ಮತದಾರರು ಖುದ್ದು ಹಾಜರಾಗುವ ಬಗ್ಗೆ ಬಿ.ಎಲ್.ಓಗಳ ಮೂಲಕ ನೋಟಿಸ್ ನೀಡಲಾಗುವುದು. ನೋಟಿಸ್ ತಲುಪಿದ ಮತದಾರರು ಖುದ್ದಾಗಿ ವಿಚಾರಣಾ ದಿನಾಂಕದಂದು ನೋಟಿಸಲ್ಲಿ ನಮೂದಿಸಲಾದ ದಿನಾಂಕ/ಸ್ಥಳದಲ್ಲಿ ಸಮಯಕ್ಕೆ ವಿಚಾರಣೆಗೆ ಹಾಜರಾಗಿ ಸಂಬಂಧಪಟ್ಟ ದಾಖಲೆ ಸಲ್ಲಿಸಬೇಕಾಗಿರುತ್ತದೆ. ವಿಚಾರಣೆಗೆ ಹಾಜರಾಗದ ಮತದಾರರಿಗೆ ಪುನಃ ಇನ್ನೊಂದು ದಿನಾಂಕ ನಿಗದಿಪಡಿಸಿ ದಾಖಲೆಗಳೊಂದಿಗೆ ಹಾಜರಾಗಲು ಅವಕಾಶ ನೀಡಲಾಗುವುದು. ಗರಿಷ್ಠ 2 ವಿಚಾರಣಾ ದಿನಾಂಕ ನೀಡಲು ಮಾತ್ರ ಅವಕಾಶ ಇರುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 5,62,004 ಪುರುಷರು ಮತ್ತು 5,61,014 ಹಾಗೂ 4 ತೃತೀಯ ಲಿಂಗಿಗಳು ಸೇರಿ ಒಟ್ಟು 11,23,022 ಮತದಾರರಿದ್ದಾರೆ. ಮತಗಟ್ಟೆಗಳ ಪುರ್ನವಿಂಗಡಣೆ ಕಾರ್ಯದ ನಂತರ 78 ಹೊಸ ಮತಗಟ್ಟೆ ತೆರೆಯಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಮತಗಟ್ಟೆಗಳ ಸಂಖ್ಯೆ 1,523 ಆಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಕಲ್ಗುಟಕರ್, ರಮೇಶ್ ಮುದಗೇಕರ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸೂರಜ್ ನಾಯ್ಕ್ ಸೋನಿ, ವಕ್ತಾರ ಉದಯ ಭೋವಿ, ಕೃಷ್ಣ ಲಿಂಗಣಕರ್, ಜ್ಞಾನೇಶ್ವರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ ಇದ್ದರು.