ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ: ಚಲುವರಾಯಸ್ವಾಮಿ

KannadaprabhaNewsNetwork |  
Published : Dec 22, 2023, 01:30 AM IST
೨೧ಕೆಎಂಎನ್‌ಡಿ-೧ಮಂಡ್ಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿ.ರಾಮಕೃಷ್ಣ ಅಭಿನಂದನಾ ಸಮಿತಿ, ಕರ್ನಾಟಕ ಸಂಘದ ವತಿಯಿಂದ ವಿಧಾನಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ಅವರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ವ್ಯಕ್ತಿತ್ವ ಗುರುತಿಸುವುದು ಹಣ, ಆಸ್ತಿ, ಐಶ್ವರ್ಯದಿಂದಲ್ಲ, ಅವರ ನಡವಳಿಕೆ ಮತ್ತು ಸಂಸ್ಕಾರ, ಗುಣದಿಂದ. ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಲ್ಲೂ ಸುಗುಣ ಮತ್ತು ದುರ್ಗಣಗಳಿರುವುದು ಸಹಜ ಆದರೆ, ನಾನು ಕಂಡಂತೆ ನನ್ನಂತಹ ಹತ್ತಾರು ಸಹವರ್ತಿಗಳಲ್ಲಿ ಬಿ.ರಾಮಕೃಷ್ಣ ಅವರಂತಹ ಸರಳ ಮತ್ತು ನೇರನಡೆನುಡಿಯ ವ್ಯಕ್ತಿತ್ವನ್ನು ಯಾರಲ್ಲಿಯೂ ಕಾಣಲು ಸಾಧ್ಯವಾಗಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಮಾಜದಲ್ಲಿ ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು. ವ್ಯಕ್ತಿಯ ವ್ಯಕ್ತಿತ್ವ ರೂಪಿಸುವುದು ಅವರ ನಡವಳಿಕೆ ಮತ್ತು ಸಂಸ್ಕಾರ, ಗುಣದಿಂದಲೇ ಹೊರತು ಹಣ, ಆಸ್ತಿ, ಐಶ್ವರ್ಯದಿಂದಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಪಾದಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬಿ.ರಾಮಕೃಷ್ಣ ಅಭಿನಂದನಾ ಸಮಿತಿ, ಕರ್ನಾಟಕ ಸಂಘದಿಂದ ಆಯೋಜಿಸಿದ್ದ ಗ್ರಂಥ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಸಾಮಾನ್ಯ ಕುಟುಂಬದಿಂದ ಅದರಲ್ಲೂ ಗ್ರಾಮೀಣ ಪ್ರದೇಶದಿಂದ ಬಂದ ಬಿ.ರಾಮಕೃಷ್ಣ ಅವರು ಇಂದು ಸಾವಿರಾರು ಮಕ್ಕಳಿಗೆ ಪ್ರಾಥಮಿಕದಿಂದ ಪದವಿಯವರೆಗೆ ಶಿಕ್ಷಣ ನೀಡುವಂತಹ ಸಂಸ್ಥೆಯೊಂದನ್ನು ಸ್ಥಾಪಿಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರಿಗೆ ಹಣ, ಆಸ್ತಿ ಮಾಡಬೇಕೆಂಬ ಮನಸ್ಸು ಇದ್ದಿದ್ದರೆ ಬೆಂಗಳೂರಿನಲ್ಲಿ ಅವರು ಹೊಂದಿರುವ ವಿಶಾಲ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಕೋಟ್ಯಂತರ ರುಪಾಯಿ ಸಂಪಾದಿಸಬಹುದಿತ್ತು, ಆದರೆ, ತವರಿನ ಜನತೆ ಶೈಕ್ಷಣಿಕವಾಗಿ ಮುಂದೆ ಬಂದಲ್ಲಿ ಅಭಿವೃದ್ಧಿ ಸಾಧಿಸಬಹುದು ಧ್ಯೇಯ ಇಟ್ಟುಕೊಂಡು ಕೆ.ಹೊನ್ನಲಗೆರೆಯಲ್ಲಿ ಆರ್.ಕೆ. ವಿದ್ಯಾಸಂಸ್ಥೆ ಸ್ಥಾಪಿಸುವ ಮೂಲಕ ಸಹಸ್ರಾರು ಕುಟುಂಬಗಳಿಗೆ ನೆರವಾಗಿದ್ದಾರೆ ಎಂದು ಬಣ್ಣಿಸಿದರು.

ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಲ್ಲೂ ಸುಗುಣ ಮತ್ತು ದುರ್ಗಣಗಳಿರುವುದು ಸಹಜ ಆದರೆ, ನಾನು ಕಂಡಂತೆ ನನ್ನಂತಹ ಹತ್ತಾರು ಸಹವರ್ತಿಗಳಲ್ಲಿ ಬಿ.ರಾಮಕೃಷ್ಣ ಅವರಂತಹ ಸರಳ ಮತ್ತು ನೇರನಡೆನುಡಿಯ ವ್ಯಕ್ತಿತ್ವನ್ನು ಯಾರಲ್ಲಿಯೂ ಕಾಣಲು ಸಾಧ್ಯವಾಗಿಲ್ಲ, ಇದಕ್ಕೆ ನಿದರ್ಶನವೆಂದರೆ ಕರ್ನಾಟಕ ಸಂಘದಲ್ಲಿ ನಿತ್ಯವೂ ಅನ್ನದಾಸೋಹ ನಡೆಸುತ್ತಿರುವುದು ಬಿ.ರಾಮಕೃಷ್ಣ ಅವರೇ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಅತ್ಯಲ್ಪ ಅಧಿಕಾರ ಅನುಭವಿಸಿದ್ದರೂ ಹೆಚ್ಚಿನ ಅಧಿಕಾರ ದಾಹ ಅವರಲ್ಲಿ ಕಂಡುಬಂದಿಲ್ಲ, ಮುಂದೆ ಅವರಿಗೆ ಅವಕಾಶಗಳು ಸಿಗಬಹುದು ಎಂಬ ಆಶಯ ನನ್ನದು ಎಂದರು.

ಕಾರ್ಯಕ್ರಮದಲ್ಲಿ ಬಿ.ರಾಮಕೃಷ್ಣ ಅವರ ಜೀವನ ವಿಚಾರವಾದ ಸ್ನೇಹಜೀವಿ ಹಾಗೂ ಅಭಿನಂದನಾ ಸಂಪುಟವಾದ ಸಾಧನ ಪಥ ಪುಸ್ತಕಗಳನ್ನು ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಬಿಡುಗಡೆಗೊಳಿಸಿದರು. ಬಳಿಕ ಡಾ.ರಾಜಪ್ಪ ದಳವಾಯಿ ಅವರಿಗೆ ಬಿ.ರಾಮಕೃಷ್ಣ ಸಾಹಿತ್ಯ ಪ್ರಶಸ್ತಿ ಹಾಗೂ ಗೂಡೆ ಹೊಸಹಳ್ಳಿ ಜವರಾಯಿಗೌಡ ಅವರಿಗೆ ಬಿ.ರಾಮಕೃಷ್ಣ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮನಂದನಾಥ ಸ್ವಾಮೀಜಿ ಸಾನಿಧ್ಯ ಮತ್ತು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪಿ.ರವಿಕುಮಾರ್, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ. ಶ್ರೀಕಂಠೇಗೌಡ, ಕೆ.ಬಿ.ಚಂದ್ರಶೇಖರ್, ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ, ರೈತ ಮುಖಂಡ ಪ್ರಸನ್ನ ಎನ್.ಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಭಾಗವಹಿಸಿದ್ದರು.

ಬಿ.ರಾಮಕೃಷ್ಣರಿಗೆ ಸೂಕ್ತಸ್ಥಾನ ದೊರೆಯಲಿ

ಕರ್ನಾಟಕ ವಿಧಾನ ಮಂಡಲದ ಗ್ರಂಥಾಲಯದಲ್ಲಿ ಬಿ.ರಾಮಕೃಷ್ಣ ಅವರು ಪರಿಷತ್ತಿನಲ್ಲಿ ಕೇಳಿ ಪಡೆದಿರುವ ಪ್ರಶ್ನೋತ್ತರಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿದರು.

ಪ್ರಚಾರದ ಗೀಳಿಗೆ ಬಾರದ ರಾಮಕೃಷ್ಣ ಅವರು ಸಾಮಾಜಿಕ ಕಳಕಳಿಯಿಂದ ಅದರಲ್ಲೂ ಗ್ರಾಮೀಣ ಮಕ್ಕಳ ಬಗ್ಗೆ ಅವರಿಗಿರುವ ಕಾಳಜಿ ಅವರ ಪ್ರಶ್ನೆಗಳಲ್ಲಿ ಕಂಡು ಬಂದಿತು. ಇಂತಹ ವ್ಯಕ್ತಿಗೆ ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯುತ ಹುದ್ದೆಗಳು ದಕ್ಕಿದಾಗ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಸಚಿವ ಚಲುವರಾಯಸ್ವಾಮಿ ಅವರು ಸಿಎಂ ಮತ್ತು ಡಿಸಿಎಂ ಅವರೊಂದಿಗೆ ಚರ್ಚಿಸಿ ನಿಗಮ ಮಂಡಳಿಗಳಲ್ಲಿ ಸೂಕ್ತಸ್ಥಾನ ದೊರಕಿಸಿಕೊಡಬೇಕು ಎಂದು ವೇದಿಕೆಯಲ್ಲಿಯೇ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌