ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಅಂಗಸಂಸ್ಥೆ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್, ಆರ್ಟ್ಸ್ ಅಂಡ್ ಹ್ಯೂಮ್ಯಾನಿಟೀಸ್ (ಮಿಶ) ಹಾಗೂ ಇಂಟರ್ನ್ಯಾಶನಲ್ ಸೊಸೈಟಿ ಆಫ್ ಏಷಿಯನ್ ಆಂಡ್ ಕಂಪಾರಿಟಿವ್ ಫಿಲಾಸಫಿ (ಎಸ್ಎಸಿಪಿ)ಗಳ ಸಹಭಾಗಿತ್ವದಲ್ಲಿ 4 ದಿನಗಳ ಅಂತರಾಷ್ಟ್ರೀಯ ಸಮಾವೇಶವು ಮಾಹೆಯ ಗಂಗೂಬಾಯಿ ಹಾನಗಲ್ ಸಭಾಗೃಹದಲ್ಲಿ ಗುರುವಾರ ಆರಂಭವಾಯಿತು.ಹೀಲಿಂಗ್ ಇನ್ ಟೈಮ್ಸ್ ಆಫ್ ಪ್ರಿಕ್ಯಾರಿಟಿ : ಏಷ್ಯನ್ ಆಂಟ್ ಕಂಪಾರಿಟಿವ್ ಎಪ್ರೊಚಸ್ ಎಂಬುದು ಈ ಸಮಾವೇಶದ ಕೇಂದ್ರ ವಿಷಯವಾಗಿದ್ದು ಇದರಲ್ಲಿ 30 ಮಂದಿ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಮಾಹೆ ಕುಲಪತಿ ಡಾ. ಶರತ್ ರಾವ್ ಅವರು ಈ ಸಮಾವೇಶವನ್ನು ಉದ್ಘಾಟಿಸಿ ‘ಗುಣಮುಖತೆ (ಹೀಲಿಂಗ್) ಎಂಬುದು ಕೇವಲ ದೈಹಿಕವಾಗಿ ಆದರೆ ಮಾತ್ರ ಸಾಲದು. ಅದಕ್ಕೆ ಮಾನಸಿಕವಾದ, ಆಧ್ಯಾತ್ಮಿಕವಾದ ಆಯಾಮವೂ ಇದೆ’ ಎಂದರಲ್ಲದೇ, ’ವೈಯಕ್ತಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ರಕ್ಷಿಸುವಲ್ಲಿ ತತ್ತ್ವಜ್ಞಾನ ಚಿಂತನೆಗಳು ಮಹತ್ವಪೂರ್ಣವಾಗುತ್ತವೆ’ ಎಂದರು.
ಸಮಾವೇಶದ ಸಂಯೋಜಕರಲ್ಲೊಬ್ಬರಾದ ಮಿಶದ ತತ್ತ್ವಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕಾರ್ಲ್ ಸ್ಟೀಫನ್ ಬೋಥಿಲೆಟ್, ತತ್ತ್ವಜ್ಞಾನ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ಕುಮಾರ್ ಎನ್. ಆಚಾರ್ಯ, ಸಹಾಯಕ ಪ್ರಾಧ್ಯಾಪಕರಾದ ಕೊಲ್ಯಾಣಿ ಗುಪ್ತ ಉಪಸ್ಥಿತರಿದ್ದರು.