ಬಿಜೆಪಿ ಸಮಾವೇಶದಲ್ಲಿ ಪಿಕ್‌ಪಾಕೆಟ್‌: 13 ಮಂದಿ ಬಂಧನ

KannadaprabhaNewsNetwork |  
Published : Apr 04, 2024, 01:01 AM IST
೩೨ | Kannada Prabha

ಸಾರಾಂಶ

ಕಳೆದ ತಿಂಗಳು ಕುಶಾಲನಗರ ಮತ್ತು ಮಡಿಕೇರಿ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಲಕ್ಷಾಂತರ ರು. ನಗದು ಪಿಕ್ ಪಾಕೆಟ್ ಮಾಡಿರುವ ಪ್ರಕರಣದ 13 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 12 ಮೊಬೈಲ್, ಎರಡು ಕಾರುಗಳು, ರು. 2,65,960 ನಗದು ವಶಪಡಿಸಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಮತ್ತು ಮಡಿಕೇರಿ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಲಕ್ಷಾಂತರ ರು. ನಗದು ಪಿಕ್ ಪಾಕೆಟ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪೊಲೀಸರು 13 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕುಶಾಲನಗರದಲ್ಲಿ ಕಳವು ಮಾಡಿದ ಸಂದರ್ಭದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು, ಮತ್ತು ಸ್ಥಳೀಯ ಪತ್ರಕರ್ತರು ಸೆರೆಹಿಡಿದ ಹಲವು ವಿಡಿಯೋ ಕ್ಲಿಪ್ ಗಳನ್ನು ಆಧರಿಸಿ ಪೊಲೀಸರ ತಂಡ ಭದ್ರಾವತಿಯ ಜಯಣ್ಣ, ಪುಟ್ಟರಾಜು, ನಾಗರಾಜ, ವೆಂಕಟೇಶ್, ರಾಮು, ಉಮೇಶ , ಜಯಣ್ಣ, ಭೋಜಪ್ಪ, ಮೆಹಬೂಬ್ ಸುಭಾನ್, ಬೆಂಗಳೂರಿನ ಹೆಬ್ಬಗೋಡಿಯ ಹರೀಶ್ , ನೆಲಮಂಗಲದ ರಂಗಣ್ಣ, ಭದ್ರಾವತಿಯ ಗಿರೀಶ, ಬಾಲು ಅವರನ್ನು ಬಂಧಿಸಿದೆ. ಬಂಧಿತರಿಂದ 12 ಮೊಬೈಲ್, ಎರಡು ಕಾರುಗಳು, ರು. 2,65,960 ನಗದು ವಶಪಡಿಸಿಕೊಳ್ಳಲಾಗಿದೆ.

ಮಾ.27ರಂದು ಕುಶಾಲನಗರದಲ್ಲಿ ಬಿಜೆಪಿ ಸಮಾವೇಶ ನಡೆಯುವ ಸಂದರ್ಭದಲ್ಲಿ ಕುಶಾಲನಗರದ ನಿವಾಸಿಗಳಾದ ಎಂ.ಎಂ. ಚರಣ್, ಡಿ.ಎಚ್. ಚಂದ್ರಶೇಖರ್, ಎಚ್.ಮಣಿ ಅವರ ಜೇಬುಗಳಿಂದ ಅಪರಿಚಿತ ವ್ಯಕ್ತಿಗಳು ಕಳವು ಮಾಡಿರುವ ಬಗ್ಗೆ ಕುಶಾಲನಗರದಲ್ಲಿ ದೂರು ದಾಖಲಾಗಿತ್ತು.

ಅದೇ ದಿನ ಮಡಿಕೇರಿ ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ರಂಗಸಮುದ್ರ ನಿವಾಸಿ ನಿತಿನ್, ವಿರಾಜಪೇಟೆ ನಿವಾಸಿ ಯೋಗೇಶ್ ಮತ್ತು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಜೇಬುಗಳಿಂದಲೂ ಅಪರಿಚಿತ ವ್ಯಕ್ತಿಗಳು ಹಣ ಲಪಟಾಯಿಸಿ ಪರಾರಿಯಾಗಿದ್ದರು. ಪ್ರತ್ಯೇಕವಾಗಿ ಮೂರು ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ಸುಮಾರು ರು. 2 ಲಕ್ಷ ನಗದು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ಕಾರ್ಯಾಚರಣೆ ತಂಡ ರಚಿಸಲಾಗಿತ್ತು.

ಕೊಡಗು ಜಿಲ್ಲಾ ಪೊಲೀಸ್ ಅಧಿಕಾರಿ ರಾಮರಾಜನ್ ನಿರ್ದೇಶನದಂತೆ ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ನೇತೃತ್ವದಲ್ಲಿ ಕುಶಾಲನಗರ ಟೌನ್ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಕಾಶ್, ಠಾಣಾಧಿಕಾರಿಗಳಾದ ಬಿ.ಎಸ್. ಉಮಾ ಮತ್ತು ಅಪರಾಧ ತನಿಖಾ ವಿಭಾಗದ ಸಿಬ್ಬಂದಿ ವಿಶೇಷ ತಂಡ ರಾಜ್ಯದ ವಿವಿಧ ಕಡೆಗಳಿಗೆ ಸಂಚರಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಸಿಬ್ಬಂದಿಯನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಪ್ರಶಂಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು ಕ್ಲೈಮ್ಯಾಕ್ಸ್‌ನತ್ತ : ಜಾರಕಿಹೊಳಿ
ಸರ್ಕಾರಿ ಕಾಮಗಾರಿಗೆ ಅನುಮತಿಸಲು ಲಂಚ ಸ್ವೀಕಾರ- ಶಾಸಕ ಲೋಕಾ ಬಲೆಗೆ!