ಕನ್ನಡಪ್ರಭ ವಾರ್ತೆ ತುಮಕೂರು
ನಗರದಾದ್ಯಂತ ಜ.12 ರಂದು ತುಮಕೂರು ಮಹಾನಗರ ಪಾಲಿಕೆ ಮತ್ತು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಹಯೋಗದಲ್ಲಿ ‘ಸ್ವಚ್ಛ ಭಾರತ ಅಭಿಯಾನ 2’ದ ಭಾಗವಾಗಿ ನಗರದ 35 ವಾರ್ಡ್ಗಳಲ್ಲಿ ಸ್ವಚ್ಛತೆಗಾಗಿ ಪ್ಲಾಗಥಾನ್ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತರು ಹಾಗೂ ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಅಶ್ವಿಜ ಬಿ.ವಿ. ತಿಳಿಸಿದರು.ಪಾಲಿಕೆ ಕಚೇರಿಯಲ್ಲಿಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ಲಾಗಥಾನ್ ಎಂದರೆ ಜಾಗಿಂಗ್ ಮಾಡುತ್ತಲೇ ಕಸವನ್ನು ತೆಗೆಯುವುದು. ಮೊದಲು ಈ ಪ್ಲಾಗಥಾನ್ ಸ್ವೀಡನ್ ದೇಶದಲ್ಲಿ ಪ್ರಾರಂಭಗೊಂಡು ಎಲ್ಲಾ ಕಡೆಯಲ್ಲೂ ಈ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ತುಮಕೂರು ಮಹಾನಗರ ಪಾಲಿಕೆ ಮತ್ತು ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ನಗರದಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛ ಪರಿಸರದ ಬಗ್ಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜ.12 ರಂದು ಬೆಳಿಗ್ಗೆ 7.30 ರಿಂದ 9.30 ಗಂಟೆವರೆಗೆ ನಡೆಯಲಿದ್ದು, ‘ಪ್ಲಾಗಥಾನ್’ ಮೂಲಕ ನಗರದ 35 ವಾರ್ಡ್ಗಳಲ್ಲಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.
ಪ್ಲಾಗಥಾನ್ನಲ್ಲಿ ಭಾಗವಹಿಸಲು ನೋಂದಣಿ ಕೂಡ ಮಾಡಲಾಗಿದ್ದು, ಕ್ಯೂಆರ್ ಕೋಡ್ ಮೂಲಕ 540 ಜನ ನೋಂದಣಿ ಮಾಡಿಕೊಂಡಿದ್ದು, 1500 ಜನ ನೇರವಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇದಲ್ಲದೆ ಹಿತರಕ್ಷಣಾ ಸಮಿತಿಗಳು, ಸಂಘ-ಸಂಸ್ಥೆಗಳು, ಎನ್.ಜಿ.ಒ.ಗಳು, ಶಾಲಾ-ಕಾಲೇಜುಗಳ ಮಕ್ಕಳು, ಎನ್ಸಿಸಿ, ಎನ್ಎಸ್ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಅಭ್ಯರ್ಥಿಗಳು, ಹಿರಿಯ ನಾಗರಿಕರು ಮತ್ತು ನಗರದ ಎಲ್ಲಾ ನಾಗರಿಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.ಹೋಮ್ ಟೂ ಸ್ಕೂಲ್ ಎಂಬ ಹೊಸ ಅಭಿಯಾನವನ್ನು ಪ್ರಾರಂಭ ಮಾಡಿದ್ದು, ಇದರ ಉದ್ದೇಶ ಮಕ್ಕಳು ಶಾಲೆಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದನ್ನು ತಿಳಿದುಕೊಂಡು, ಮನೆಯಲ್ಲಿ ಪೋಷಕರಿಗೆ ಹಸಿ ಕಸ-ಒಣ ಕಸವನ್ನು ಬೇರ್ಪಡಿಸುವುದರ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದು ತಿಳಿಸಿದರು.
ನಗರದಲ್ಲಿರುವ ಬೀದಿನಾಯಿಗಳ ಹಾವಳಿ, ಪೈಪ್ಲೈನ್ ದುರಸ್ತಿ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಮಾಧ್ಯಮದವರೊಂದಿಗೆ ಚರ್ಚಿಸಿದರು.ಬಾಕ್ಸ್......ಪ್ಲಾಸ್ಟಿಕ್ ಬಾಟಲಿನಲ್ಲಿ ತುಮಕೂರು
ಮೊಟ್ಟ ಮೊದಲ ಬಾರಿಗೆ ತುಮಕೂರಿನಲ್ಲಿ ಜ.28 ರಂದು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸುಮಾರು 5 ಸಾವಿರ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಕನ್ನಡ ಅಕ್ಷರಗಳಲ್ಲಿ ತುಮಕೂರು ಎಂದು ಬರೆಯುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಲು ತಯಾರಿ ನಡೆಸುತ್ತಿದ್ದೇವೆ. ಪ್ಲಾಗಥಾನ್ ಕಾರ್ಯಕ್ರಮದಲ್ಲಿ ಸಂಗ್ರಹಿಸುವ ತ್ಯಾಜ್ಯ ಬಾಟಲಿಗಳನ್ನು ಇದಕ್ಕೆ ಬಳಸಲಾಗುತ್ತದೆ ಮತ್ತು ಎಲ್ಲಾ ವಾರ್ಡ್ಗಳಲ್ಲೂ ಈಗಾಗಲೇ ಸ್ವಚ್ಛತೆ ಕಾರ್ಯವನ್ನು ಆಯಾ ವಾರ್ಡಿನ ಕಾರ್ಪೊರೇಟರ್ಸ್ಗಳು ಮಾಡುತ್ತಿದ್ದು, ನಗರದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿವೆ ನಗರ ಪಾಲಿಕೆ ಮೇಯರ್ ಮೇಯರ್ ಪ್ರಭಾವತಿ ಸುಧೀಶ್ವರ್ ತಿಳಿಸಿದರು.