ಕನ್ನಡಪ್ರಭ ವಾರ್ತೆ ಬೆಳಗಾವಿ
ಸಂಭವನೀಯ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ಅಲ್ಲದೇ ಶೇ.88ರಷ್ಟು ಪಂಪ್ಸೆಟ್ ಅಳವಡಿಕೆ ಕಾರ್ಯಕ್ರಮವೂ ಪೂರ್ಣಗೊಂಡಿದೆ. ಹಲವೆಡೆ ಇರುವ ಕೊಳವೆಬಾವಿಗಳನ್ನು ಪುನಶ್ಚೇತನಗೊಳಿಸಲಾಗಿದೆ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹೇಳಿದರು.ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ವಾರ್ತಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಟ್ಟಾರೆಯಾಗಿ 2057ರ ಜನಸಂಖ್ಯೆ ಆಧರಿಸಿ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಲಾಗಿದೆ. ಮುಂಬರುವ ಎರಡ್ಮೂರು ವರ್ಷಗಳಲ್ಲಿ ಬಹುತೇಕ ವಾರ್ಡ್ಗಳಲ್ಲಿ ನಿರಂತರ ನೀರು ಪೂರೈಕೆ ಯೋಜನೆ ಸಂಪರ್ಕಗಳನ್ನು ಕಲ್ಪಿಸಲಾಗುತ್ತದೆ. ಕೇವಲ ಬಿಜೆಪಿ ನಗರಸೇವಕರ ವಾರ್ಡ್ಗಳಷ್ಟೇ ಅಲ್ಲ, ಮಹಾನಗರದ ಎಲ್ಲ 58 ವಾರ್ಡ್ಗಳ ಸಮಗ್ರ ಅಭಿವೃದ್ಧಿಗೆ ಪಕ್ಷಭೇದ ಮರೆತು ಶ್ರಮಿಸಬೇಕೆಂದು ಮೇಯರ್ ಹಾಗೂ ಉಪಮೇಯರ್ಗೆ ಸಲಹೆ ನೀಡಿದರು.
ರಾಜಕಾರಣವನ್ನು ದೂರವಿಟ್ಟು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದ ಅವರು, ರಾಜಕಾರಣಿಗಳನ್ನು ಹೊಗಳಿದರೆ ಅಭಿವೃದ್ಧಿ ಆಗುವುದಿಲ್ಲ. ರಾಜಕಾರಣಿಗಳ ತಪ್ಪುಗಳ ಮೇಲೆಯೂ ಬೆಳಕು ಚೆಲ್ಲುವ ಮೂಲಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಪತ್ರಕರ್ತರಿಗೆ ಸಲಹೆ ನೀಡಿದರು.ಮೇಯರ್ ಮಂಗೇಶ್ ಪವಾರ ಮಾತನಾಡಿ, ಸದ್ಯಕ್ಕೆ ಮಹಾನಗರದಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಯಿಲ್ಲ. ಕಳೆದ ಬಾರಿಗಿಂತಲೂ ಈ ಬಾರಿ ನೀರಿನ ಲಭ್ಯತೆ ಸಮರ್ಪಕವಾಗಿದೆ. ಆದರೆ, ವಿದ್ಯುತ್ ಸಮಸ್ಯೆ, ತಾಂತ್ರಿಕ ದೋಷ ಹಾಗೂ ಅಭಿವೃದ್ಧಿ ಕಾಮಗಾರಿಗಳಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಅಲ್ಲದೇ, ಉತ್ತರ ಮತ್ತು ದಕ್ಷಿಣ ಮತಕ್ಷತ್ರಗಳಿಗೆ ತಲಾ ಹದಿನಾಲ್ಕು ಟ್ಯಾಂಕರ್ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ಮಹಾನಗರದ ಅಭಿವೃದ್ಧಿಗೆ ನಾವು ಕಂಕಣಬದ್ಧರಾಗಿದ್ದೇವೆ. ಜಾತಿ, ಭಾಷೆ, ಭೇದಭಾವವನ್ನು ಮರೆತು ಅಭಿವೃದ್ಧಿ ಒತ್ತು ನೀಡಲಾಗಿದೆ. ಇಂತಹ ಸಂವಾದ ಕಾರ್ಯಕ್ರಮಗಳಿಂದ ನಮಗೆ ಜನರಿಗೆ ಸಮರ್ಪಕವಾಗಿ ಮೂಲಸೌಲಭ್ಯ ಒದಗಿಸಲು ಇಂತಹ ಸಂವಾದ ಸಹಕಾರ ಮುಖ್ಯ ಎಂದರು.ಉಪಮೇಯರ್ ವಾಣಿ ಜೋಶಿ ಮಾತನಾಡಿ, ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ನಾವು ಮಹಾನಗರದ ಎಲ್ಲ ವಾರ್ಡ್ಗಳ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದೇವೆ. ನಾವು ಮಾಡುವ ಒಳ್ಳೆಯ ಕೆಲಸಗಳನ್ನು ಜನತೆಗೆ ತಲುಪಿಸಲು ಮಾಧ್ಯಮದ ಸಹಕಾರವೂ ಅಗತ್ಯವಾಗಿದೆ. ಎಲ್ಲರೂ ಮಹಾನಗರದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸೋಣ ಎಂದರು.
ಸಂವಾದದಲ್ಲಿ ಇ-ಖಾತಾ, ಕಟ್ಟಡ ಪರವಾನಿಗೆ ಸಮಸ್ಯೆ, ನಗರದಲ್ಲಿ ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆ ಸೇರಿದಂತೆ ಹಲವಾರು ಗಂಭೀರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲಾಯಿತು. ಅಲ್ಲದೇ, ಸಮಸ್ಯೆಗಳ ಪರಿಹಾರಕ್ಕೆ ಶಾಸಕರು, ಮೇಯರ್, ಉಪಮೇಯರ್ ಭರವಸೆಯನ್ನೂ ನೀಡಿದರು.ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ, ನೂತನವಾಗಿ ಆಯ್ಕೆಯಾದ ಮೇಯರ್ ಮಂಗೇಶ್ ಪವಾರ, ಉಪಮೇಯರ್ ವಾಣಿ ಜೋಶಿ ಅವರನ್ನು ಬೆಳಗಾವಿ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.
ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಆಗಮಿಸಿದ್ದರು. ರವೀಂದ್ರ ಉಪ್ಪಾರ ಸ್ವಾಗತಿಸಿದರು. ಸುನಿತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ರಾಜು ಗವಳಿ, ಸಂಜಯ ಸೂರ್ಯವಂಶಿ, ಶ್ರೀಶೈಲ ಮಠದ, ನೌಶಾದ ಬಿಜಾಪುರ, ಸುರೇಶ ನೇರ್ಲಿ, ಕುಂತಿನಾಥ ಕಲಮನಿ, ಮಲ್ಲಿಕಾರ್ಜುನ ಮುಗಳಿ, ಎಚ್.ಯು.ನಾಗರಾಜ ಮೊದಲಾದವರು ಉಪಸ್ಥಿತರಿದ್ದರು.