ಕನ್ನಡಪ್ರಭ ವಾರ್ತೆ ಕಲಬುರಗಿ
ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿಷಾದ ಹಾಗೂ ದಿಗ್ಭ್ರಮೆ ಹೊರಹಾಕಿರುವ ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಬೆ ವಿಪಕ್ಷ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ, ಬೇಗ ವಿಮಾನ ಬಿಡಬೇಕೆಂಬ ಒತ್ತಡ ಇತ್ತು ಎಂಬ ಮಾಹಿತಿ ಇದೆ, ಇಂತಹ ಏನೇ ದೋಷಗಳಿದ್ದರೂ ತನಿಖೆಯಲ್ಲಿ ಹೊರಬರಲಿ, ಹಾಲಿ, ನಿವೃತ್ತ ಸುಪ್ರೀಂ ನ್ಯಾಯಾಧೀಶರಿಂದ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.ವಿಮಾನ ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಏಕಾಏಕಿ ವಿಮಾನ ಪತನವಾಗಿದೆ. ಅಹಮದಾಬಾದ್ ಹವಾಯಿ ಅಡ್ಡಾ ಸಮೀಪವೇ ದುರಂತವಾಗಿದೆ. ಜನ ವಾಸ ಮಾಡುವ ಸ್ಥಳದಲ್ಲಿ ಬಿದ್ದು ಬೆಂಕಿ ಹತ್ತಿ ಹಲವಾರು ಜನ ಮೃತಪಟ್ಟಿದ್ದಾರೆ. ಇದು ದೊಡ್ಡ ದುರಂತ, ನಮಗೆ ಏನೂ ಹೇಳಬೇಕು ಅಂತ ಅರ್ಥವಾಗುತ್ತಿಲ್ಲ ಎಂದರು.
ವಿಮಾನದಲ್ಲಿ ಭಾರತೀಯರು, ಬ್ರಿಟಿಷ್ ಪ್ರಜೆಗಳು ಇದ್ದರು. ನೂರಾರು ಸಾವುನೋವಾಗಿದೆ ಎಂಬ ಮಾಹಿತಿ ಬರುತ್ತಿದೆ. ಈ ಘಟನೆಯಿಂದ ನಮಗೆ ಬಹಳಷ್ಟು ದುಖಃ ಆಗಿದೆ. ಕಾಂಗ್ರೆಸ್ ಪಕ್ಷದವರಿಗೆ ಹೇಳುತ್ತೇನೆ, ದುರಂತದಲ್ಲಿ ಮೃತಪಟ್ಟವರಿಗೆ ಏನೆಲ್ಲಾ ಸಹಾಯ ಸಹಕಾರ ನೀಡಬೇಕು ಅದನ್ನೆಲ್ಲ ನೀಡುವಂತೆ ಸೂಚಿಸುತ್ತೇನೆ ಎಂದರು.ಗಾಯಗೊಂಡವರಿಗೆ ಆದಷ್ಟು ಬೇಗ ತುರ್ತು ಚಿಕಿತ್ಸೆ ಕೊಡಬೇಕು. ಸ್ಥಳದಲ್ಲಿ ಸಾರ್ವಜನಿಕ ಆಸ್ತಿ, ಜೀವ ಹಾನಿಗೆ ಸರ್ಕಾರ ಪರಿಹಾರ ಕೊಡಬೇಕು. ಅದರ ಜವಾಬ್ದಾರಿ ಸರ್ಕಾರ ಹೊತ್ತುಕೊಂಡು ಕ್ರಮ ಕೈಗೊಳ್ಳಬೇಕು. ದುರಂತದ ಬಗ್ಗೆ ತನಿಖೆ ಮಾಡಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.
ಮಾಹಿತಿ ಪ್ರಕಾರ ಬೇಗ ವಿಮಾನ ಬಿಡುವ ಒತ್ತಡ ಇತ್ತು ಅಂತ ಮಾಹಿತಿ ಇದೆ. ಅದರ ಬಗ್ಗೆಯೂ ತನಿಖೆ ಮಾಡಬೇಕು.ಇಂತಹ ಸಂದರ್ಭದಲ್ಲಿ ಯಾರೂ ಸುಳ್ಳು ಹೇಳೋದೂ ಬೇಡ. ವಿಮಾನ ಪತನದ ಬಗ್ಗೆ ವಿಸ್ತೃತ ತನಿಖೆ ಮಾಡಬೇಕು.
ಪೈಲಟ್ ತಪ್ಪಿನಿಂದ ದುರಂತ ಆಯ್ತಾ ಅಥವಾ ಯಾವುದರಿಂದ ಆಯ್ತು ಅಂತ ಸಂಪೂರ್ಣ ತನಿಖೆ ಆಗಬೇಕು.ನಿಷ್ಪಕ್ಷಪಾತವಾಗಿ, ಉನ್ನತ ಹಂತದಲ್ಲಿ ಈ ತನಿಖೆ ನಡೆಯಬೇಕು. ಆಗ ಮಾತ್ರ ಪೈಲಟ್ ತಪ್ಪೋ, ತಾಂತ್ರಿಕ ದೋಷವೋ, ಮತ್ತೇನೂ ಅನ್ನೋದು ಗೊತ್ತಾಗುತ್ತೆ. ಮೃತರಿಗೆ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದರು.