ಕೊಪ್ಪ ರೋಟರಿ , ಅರಣ್ಯ ಇಲಾಖೆಯಿಂದ ಗಿಡನೆಡುವ ಕಾರ್ಯಕ್ರಮ
ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್ ಎಲ್. ಹೇಳಿದರು.
ಪಟ್ಟಣದ ಹೊರವಲಯದ ಹುಲುಮಕ್ಕಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಕೊಪ್ಪ ರೋಟರಿ ಕ್ಲಬ್ ಮತ್ತು ಅರಣ್ಯ ಇಲಾಖೆಯಿಂದ ರೋಟರಿ ಜಿಲ್ಲಾ ಯೋಜನೆ ಹಸಿರೀಕರಣಕ್ಕಾಗಿ ಗಿಡನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರ ಉಳಿದಾಗ ಭೂಮಿ ಮೇಲೆ ಜೀವರಾಶಿಗಳು ಬದುಕಲು ಸಾಧ್ಯ. ಅರಣ್ಯ ಉಳಿಸುವ ಹೊಣೆಗಾರಿಕೆ ಪ್ರತೀ ಪ್ರಜೆಗಳದ್ದಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಸಂಘ ಸಂಸ್ಥೆಗಳಿಂದ ನಡೆಯುತ್ತಿರುವುದು ಸ್ವಾಗತಾರ್ಹ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ದಿನೇಶ್ ಬಿ.ಎಸ್. ರೋಟರಿ ಸಂಸ್ಥೆ ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕವಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಪ್ರತೀ ವರ್ಷ ಗಿಡನೆಟ್ಟು ಬೆಳೆಸುತ್ತಿದೆ. ಪ್ರತೀ ವರ್ಷ ರೋಟರಿಯಿಂದ ಯಶಸ್ವಿ ಕಾರ್ಯಕ್ರಮ ನಡೆಯಲು ರೋಟರಿ ಸದಸ್ಯರ ಒಗ್ಗಟ್ಟಿನ ಸಹಕಾರ ಶ್ರಮದಿಂದ ಸಾಧ್ಯವಾಗುತ್ತಿದೆ ಎಂದರು.
ರೋಟರಿ ಕಾರ್ಯದರ್ಶಿ ಲಕ್ಷ್ಮೀಶ ಬಿ.ಎಸ್., ರೊ.ಉದಯ್ ಶಂಕರ್, ರೊ.ಜೆ.ಎಂ. ಶ್ರೀಹರ್ಷ ಸೇರಿದಂತೆ ರೋಟರಿ ಕ್ಲಬ್ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿದ್ದರು.