ದೊಡ್ಡಬಳ್ಳಾಪುರ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ 14 ನಿರ್ದೇಶಕ ಸ್ಥಾನಗಳಿಗೆ ಫೆ.16ರಂದು ಚುನಾವಣೆ ನಡೆಯಲಿದೆ. ಆದರೆ, ಎಸ್.ಎಸ್ ಘಾಟಿ ಮೀಸಲು ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಪರಿಶಿಷ್ಟ ಸಮುದಾಯದ ಮತದಾರರನ್ನು ಅನರ್ಹ ಮಾಡುವ ಮೂಲಕ ಚುನಾವಣೆಯಲ್ಲಿ ಸ್ವರ್ಧಿಸುವ ಹಕ್ಕನ್ನು ಕಸಿಯುವ ಪ್ರಯತ್ನ ನಡೆದಿದೆ ಎಂದು ದಲಿತ ಮುಖಂಡ ಎಂ.ಸುಬ್ರಮಣ್ಯ ಆರೋಪಿಸಿದರು.
ಫೆ.16ರಂದು ದೊಡ್ಡಬಳ್ಳಾಪುರ ಪಿಎಲ್ಡಿ ಬ್ಯಾಂಕ್ ನ 14 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಎಸ್ಎಸ್ ಘಾಟಿ ಮೀಸಲು ಕ್ಷೇತ್ರದಲ್ಲಿನ ನಿರ್ದೇಶಕ ಸ್ಥಾನದ ಅಕಾಂಕ್ಷಿಗಳಾಗಿದ್ದ ಮಂಜುಳಮ್ಮ, ನಾಗರಾಜು ನಾಯ್ಕ್ ಮತ್ತು 12 ಮತದಾರರನ್ನು ಅನರ್ಹ ಮಾಡಿದ್ದಾರೆ. ಇದರ ವಿರುದ್ಧ ಹೈಕೋರ್ಟ್ ಮೊರೆ ಹೋಗಿ, ಅರ್ಹ ಮತದಾರರಾಗಿ ಆದೇಶ ಮಾಡಿಸಿಕೊಂಡು ಬರಲಾಗಿದೆ. ಆದಾಗ್ಯೂ ಇವರಿಗೆ ಮತದಾನ ಮಾಡಲು ಮಾತ್ರ ಅರ್ಹತೆ ಇದ್ದು ಚುನಾವಣೆಯಲ್ಲಿ ನಿಲ್ಲಲು ಅರ್ಹತೆ ಇಲ್ಲವೆಂದು ಹೇಳಿ, ಸಲ್ಲಿಸಿರುವ ನಾಮಪತ್ರ ತಿರಸ್ಕರಿಸಿದ್ದಾರೆ ಎಂದು ದೂರಿದರು.
ಚುನಾವಣಾ ಅಧಿಕಾರಿಗಳಿಗೆ ಬ್ಯಾಂಕ್ ನ ಅರ್ಹ ಮತ್ತು ಅನರ್ಹ ಮತದಾರರ ಪಟ್ಟಿಯನ್ನು ಕೊಡುವಂತೆ ಮನವಿ ಮಾಡಿದ್ದೇವೆ. ಹಾಗೆಯೇ ಚುನಾವಣೆಗೆ ಸ್ವರ್ಧೆ ಮಾಡದೆ ಇರಲು ಯಾವುದೇ ನ್ಯಾಯಾಲಯದ ಆದೇಶ ಸೇರಿದಂತೆ ಸಹಕಾರ ಸಂಘಗಳ ಅಧಿನಿಯಮ, ಬ್ಯಾಂಕ್ ಬೈಲಾ, ಬ್ಯಾಂಕ್ ನಡವಳಿ ಇದ್ದಲ್ಲಿ ಅದರ ನಕಲು ಕೊಡುವಂತೆ ಕೇಳಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ದಾಖಲೆಗಳನ್ನ ಕೊಟ್ಟಿಲ್ಲ. ಪರಿಶಿಷ್ಟರ ಸಾಮಾಜಿಕ ಹಕ್ಕುಗಳ ದಮನ ವಿರುದ್ಧ ಕಾನೂನು ಹೋರಾಟ ಅನಿವಾರ್ಯವಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ನಾಗರಾಜು ಬಚ್ಚಹಳ್ಳಿ, ನಾಗರಾಜು ನಾಯ್ಕ್ ಎಸ್, ಅಭಿಲಾಷ್, ಶೀಧರ್, ಮಂಜುನಾಥ್, ಪ್ರದೀಪ್ ಉಪಸ್ಥಿತರಿದ್ದರು.
11ಕೆಡಿಬಿಪಿ2-ದೊಡ್ಡಬಳ್ಳಾಪುರ ಪಿಎಲ್ಡಿ ಬ್ಯಾಂಕ್ ಚುನಾವಣೆ ನಾಮಪತ್ರ ತಿರಸ್ಕೃತ ಹಿನ್ನೆಲೆ ಮುಖಂಡ ಸುಬ್ರಹ್ಮಣ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.