ಉತ್ತರ ಕರ್ನಾಟಕದ ಏಕೈಕ ಕಲಾ ಶಾಲೆಗೆ ದುಸ್ಥಿತಿ!

KannadaprabhaNewsNetwork |  
Published : Aug 07, 2024, 01:02 AM IST
6ಡಿಡಬ್ಲೂಡಿ1ನಿರಂತರ ಮಳೆಯಿದಾಗಿ ಸರ್ಕಾರಿ ಕಲಾ ಶಾಲೆಯ ಗ್ಯಾಲರಿ ಮೇಲ್ಛಾವಣಿ ಹಸಿರುಗಟ್ಟಿದೆ. | Kannada Prabha

ಸಾರಾಂಶ

ಸರ್ಕಾರಿ ಕಲಾ ಶಾಲೆಯಲ್ಲಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಯುಸಿ ನಂತರ ನಾಲ್ಕು ವರ್ಷದ ಬ್ಯಾಚುಲರ್‌ ಆಫ್‌ ವಿಸುವಲ್‌ ಆರ್ಟ್ಸ್‌ ಕೋರ್ಸ್‌ ಕಲಿಯುತ್ತಿದ್ದಾರೆ. ಆದರೆ, ಅವರಿಗೆ ಯಾವುದೇ ಸೌಲಭ್ಯಗಳಿಲ್ಲ. ಈ ಬಗ್ಗೆ ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಆಡಳಿತ ವ್ಯವಸ್ಥೆ ಗಮನಕ್ಕೆ ತರಲಾಗಿದೆ. ಇಷ್ಟಾಗಿಯೂ ಯಾವುದೇ ಪ್ರಯೋಜನವಾಗಿಲ್ಲ.

ಬಸವರಾಜ ಹಿರೇಮಠ

ಧಾರವಾಡ:

ನೂರಾರು ಕಲಾವಿದರನ್ನು ಹುಟ್ಟುಹಾಕಿದ, ಸಾವಿರಾರು ಚಿತ್ರಕಲಾ ಪ್ರದರ್ಶನಕ್ಕೆ ಸಾಕ್ಷಿಯಾದ ಉತ್ತರ ಕರ್ನಾಟಕದ ಏಕೈಕ, ಧಾರವಾಡದಲ್ಲಿ ಇರುವ ಸರ್ಕಾರಿ ಕಲಾ ಶಾಲೆ ಇದೀಗ ಸರ್ಕಾರದ ನಿರ್ಲಕ್ಷ್ಯದಿಂದ ಸೊರಗುತ್ತಿದೆ.

ಚಿತ್ರ ಕಲಾವಿದರಿಗೆ ಸರ್ಕಾರಿ ವ್ಯವಸ್ಥೆಯಲ್ಲಿ ತಮ್ಮ ಚಿತ್ರಕಲೆ ಪ್ರದರ್ಶಿಸಲು ಇರುವ ಏಕೈಕ ಗ್ಯಾಲರಿ ಕಲಾ ಶಾಲೆ ಇದಾಗಿದೆ. ನಿರ್ವಹಣೆ ಕೊರತೆಯಿಂದ ಮಳೆ ನೀರು ಸೋರಿ ಗೋಡೆಗಳು ಬಿರುಕು ಬಿಟ್ಟಿವೆ, ಮೇಲ್ಚಾವಣಿ ಹಸಿರಾಗಿದೆ. 2007ರಲ್ಲಿ ಈ ಗ್ಯಾಲರಿ ನಿರ್ಮಿಸಿದ್ದ ಸರ್ಕಾರ ನಿರ್ವಹಣೆಗೆ ನಯಾಪೈಸೆ ನೀಡುತ್ತಿಲ್ಲ.

ಧಾರವಾಡ ಭಾಗದಲ್ಲಿ ಸಂಗೀತಗಾರರು, ಸಾಹಿತಿಗಳು ಇರುವಂತೆ ಚಿತ್ರಕಲಾವಿದರ ಸಂಖ್ಯೆಯೂ ಹೆಚ್ಚು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಇಲ್ಲಿದ್ದು, 1975ರಲ್ಲಿಯೇ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದ ಬಳಿ ಈ ಸರ್ಕಾರಿ ಕಲಾ ಶಾಲೆ ಆರಂಭಿಸಲಾಗಿದೆ. ಈ ಶಾಲೆಯ ಬಳಿಯೇ ಆರ್ಟ್‌ ಗ್ಯಾಲರಿ ಸಹ ನಿರ್ಮಿಸಲಾಗಿದೆ. ಆರಂಭದಲ್ಲಿ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿದ್ದ ಕಲಾ ಶಾಲೆ ನಂತರ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸದ್ಯ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿ ಸಂದರ್ಭದಲ್ಲಿ ಸುವ್ಯವಸ್ಥಿತವಾಗಿದ್ದ ಕಲಾ ಶಾಲೆ ಇದೀಗ ಅನಾಥ ಭಾವ ಎದುರಿಸುತ್ತಿದೆ.

ಕಾಲೇಜು ಶಿಕ್ಷಣ ಇಲಾಖೆಯು ಕಲಾ ಶಾಲೆಯನ್ನು ತೀವ್ರವಾಗಿ ಕಡೆಗಣಿಸಿದೆ. ಗ್ಯಾಲರಿ ನಿರ್ವಹಣೆ ಇಲ್ಲ, ಶಾಲೆಗೆ ಒಬ್ಬ ಮುಖ್ಯಸ್ಥರು ಹಾಗೂ ಓರ್ವ ಪ್ರಾಧ್ಯಾಪಕರನ್ನು ಹೊರತುಪಡಿಸಿ ಕಾಯಂ ಹುದ್ದೆಗಳಿಲ್ಲ. ಗುತ್ತಿಗೆ ಆಧಾರದಲ್ಲಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು, ಪ್ಯೂನ್‌, ಕ್ಲರ್ಕ್‌ ಯಾರೂ ಇಲ್ಲ. ತುಮಕೂರು ಬಿಟ್ಟರೆ ರಾಜ್ಯದಲ್ಲಿ ಧಾರವಾಡದಲ್ಲಿ ಇರುವ ಸರ್ಕಾರಿ ಕಲಾ ಶಾಲೆ ಉಳಿಸುಕೊಳ್ಳುವಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿ ಚಿತ್ರಕಲಾ ಕೋರ್ಸ್‌ ಓದುತ್ತಿದ್ದು, ಅವರು ಕಟ್ಟಿರುವ ಪ್ರವೇಶ ಶುಲ್ಕವಾಗಲಿ, ಕಲಾ ಗ್ಯಾಲರಿ ಬಾಡಿಗೆ ಹಣ ಶಾಲೆಯ ಪ್ರಾಚಾರ್ಯರ ಅಕೌಂಟ್‌ಗೆ ಹೋಗುತ್ತದೆಯೇ ಹೊರತು ನಿರ್ವಹಣೆಗೆ ಒಂದು ರುಪಾಯಿ ಸಹ ಮರಳಿ ಶಾಲೆಗೆ ಬರುತ್ತಿಲ್ಲ. ಆರ್ಥಿಕ ವ್ಯವಹಾರ ಮಾಡಲು ಶಾಲೆಯ ಮುಖ್ಯಸ್ಥರಿಗೆ ಯಾವುದೇ ಹಕ್ಕಿಲ್ಲ. ಹೀಗಾಗಿ ಸ್ವಚ್ಛತೆ, ಶೌಚಾಲಯ ನಿರ್ವಹಣೆ ಸೇರಿ ಕಾಲೇಜು ನಿರ್ವಹಣೆಯೇ ದುಸ್ತರವಾಗಿದೆ.

ಸರ್ಕಾರಿ ಕಲಾ ಶಾಲೆಯಲ್ಲಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಯುಸಿ ನಂತರ ನಾಲ್ಕು ವರ್ಷದ ಬ್ಯಾಚುಲರ್‌ ಆಫ್‌ ವಿಸುವಲ್‌ ಆರ್ಟ್ಸ್‌ ಕೋರ್ಸ್‌ ಕಲಿಯುತ್ತಿದ್ದಾರೆ. ಆದರೆ, ಅವರಿಗೆ ಯಾವುದೇ ಸೌಲಭ್ಯಗಳಿಲ್ಲ. ಈ ಬಗ್ಗೆ ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಆಡಳಿತ ವ್ಯವಸ್ಥೆ ಗಮನಕ್ಕೆ ತರಲಾಗಿದೆ. ಇಷ್ಟಾಗಿಯೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಮಳೆ ಬಂದಾಗ ಗ್ಯಾಲರಿ ಸೋರುತ್ತಿದೆ. ಬಾಡಿಗೆ ಕೊಟ್ಟು ಪ್ರದರ್ಶನ ಹಮ್ಮಿಕೊಂಡ ಕಲಾವಿದರು ಪ್ರಶ್ನಿಸುತ್ತಿದ್ದಾರೆ. ಕಲಾಕೃತಿಗಳಿಗೂ ಧಕ್ಕೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 2018ರಿಂದ ಗ್ಯಾಲರಿ ಸುಣ್ಣ-ಬಣ್ಣ ಕಂಡಿಲ್ಲ. ವಿದ್ಯುತ್‌ ಬಿಲ್‌, ನೀರು, ಇಂಟರ್‌ನೆಟ್‌ ಬಿಲ್‌ ತುಂಬಿಲ್ಲ. ಕಲಾ ಶಾಲೆ, ಗ್ಯಾಲರಿ ನಿರ್ವಹಣೆಗೆ ಸಾಕು ಸಾಕಾಗಿ ಹೋಗಿದೆ ಎಂದು ಶಾಲೆಯ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.

ಕಲಾ ಶಾಲೆಯ ಪರಿಸ್ಥಿತಿ ನೋಡಿದ್ದು ತಮಗೂ ಬೇಸರ ತರಿಸಿದೆ. ಈ ಕುರಿತು ಅಕಾಡೆಮಿಯಿಂದ ಸರ್ಕಾರಕ್ಕೆ ಪತ್ರ ಬರೆದು ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಕರಿಯಪ್ಪ ಹಂಚಿಮನಿ ಪ್ರತಿಕ್ರಯಿಸಿದರು. ಚಿತ್ರ ಪ್ರದರ್ಶನ ಉದ್ಘಾಟನೆ ವೇಳೆ ಕಲಾ ಗ್ಯಾಲರಿ ವೀಕ್ಷಣೆ ಮಾಡಿದ್ದು ಮಳೆಗೆ ಸೋರುವುದು, ಬಿರುಕು ಬಿಟ್ಟಿರುವ ಗೋಡೆಗಳನ್ನು ನೋಡಿದ್ದೇನೆ. ಗ್ಯಾಲರಿ ಮುಖ್ಯಸ್ಥರಿಂದ ಮಾಹಿತಿ ಸಹ ಪಡೆದಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಪ್ರತಿಷ್ಠಿತ ಕಲಾ ಗ್ಯಾಲರಿ ಅಭಿವೃದ್ಧಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಓರಿಯನ್‌ ಧರೆಗಿಳಿಯೋದು ಹೇಗೆ ?
ಗೃಹಲಕ್ಷ್ಮೀ ಹಣ ಸಾಲದ ಕಂತಿಗೆ ಕಡಿತ ಮಾಡಂಗಿಲ್ಲ : ಸಿಎಂ