ಎಲ್ಲೆಡೆ ಸಾರ್ವಜನಿಕರನ್ನು ವಂಚಿಸುವ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಸಾರ್ವಜನಿಕರು ಯಾವುದೇ ವಂಚನೆಗಳಿಗೆ ಬಲಿಯಾಗದೆ ಅಪರಾಧಗಳನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಹಕರಿಸಬೇಕೆಂದು ಕೆಜಿಎಫ್ ಡಿವೈಎಸ್ಪಿ ಪಾಂಡುರಂಗ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಎಲ್ಲೆಡೆ ಸಾರ್ವಜನಿಕರನ್ನು ವಂಚಿಸುವ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಸಾರ್ವಜನಿಕರು ಯಾವುದೇ ವಂಚನೆಗಳಿಗೆ ಬಲಿಯಾಗದೆ ಅಪರಾಧಗಳನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಹಕರಿಸಬೇಕೆಂದು ಕೆಜಿಎಫ್ ಡಿವೈಎಸ್ಪಿ ಪಾಂಡುರಂಗ ಮನವಿ ಮಾಡಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಅಪರಾಧ ಪ್ರಕರಣಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಪರಿಚಿತರು ಕರೆ ಮಾಡಿ ನಿಮ್ಮ ಬ್ಯಾಂಕ್ ಅಕೌಂಟ್ ಲಾಕ್ ಹಾಗಿದೆ, ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಮರು ಚಾಲನೆ ಮಾಡಲು ಪಿನ್ ಸಂಖ್ಯೆ ಹೇಳಿ ಎಂದು ವಂಚಿಸುವರು, ಇಂತಹ ಕರೆಗಳಿಗೆ ಸ್ಪಂದಿಸಬಾರದು ಎಂದು ಸಲಹೆ ನೀಡಿದರು.
ಒಡವೆ ಲಾಕರ್ನಲ್ಲಿ ಇಡಿ:
ಮನೆಗೆ ಬೀಗ ಹಾಕಿಕೊಂಡು ಮದುವೆ, ಪ್ರವಾಸ. ದೇವಸ್ಥಾನ, ಇನ್ನಿತರೆ ಕಾರ್ಯಕ್ರಮಗಳಿಗೆ ಹೋಗುವಾಗ ಚಿನ್ನಾಭರಣಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಬ್ಯಾಂಕ್ ಲಾಕರ್ನಲ್ಲಿ ಇಡುವುದು ಸುರಕ್ಷಿತ. ಇಲ್ಲವಾದಲ್ಲಿ ಮನೆಯಲ್ಲಿ ಯಾರನ್ನಾದರೂ ಒಬ್ಬ ಸದಸ್ಯರನ್ನು ಬಿಟ್ಟು ಹೋಗುವುದು ಉತ್ತಮ. ಮನೆ ಕೆಲಸಗಾರರನ್ನು ಇಟ್ಟುಕೊಂಡಲ್ಲಿ ಅವರ ಪೂರ್ವಾಪರಗಳ ಬಗ್ಗೆ ತಿಳಿದುಕೊಂಡಿರಬೇಕೆಂದರು.
ಸಾರ್ವಜನಿಕ ಆಸ್ತಿ, ಪಾಸ್ತಿ- ಪ್ರಾಣ ರಕ್ಷಣೆಗಾಗಿ, ಅಪರಾಧ ಪತ್ತೆ ಮತ್ತು ತಡೆಯುವಿಕೆಗಾಗಿ ಪೊಲೀಸ್ ಪಡೆ ಸದಾ ಬದ್ಧವಾಗಿದೆ. ಅಪರಾಧ ಒಂದು ಸಾಮಾಜಿಕ ಪಿಡುಗು, ಅದನ್ನು ತೊಲಗಿಸಲು ಇರುವ ಏಕೈಕ ಮಂತ್ರ ಎಂದರೆ ಜಾಗೃತಿ ಮಾಡಿಸುವುದಾಗಿದೆ. ಈ ನಿಟ್ಟಿನಲ್ಲಿ ನಿಮ್ಮದಲ್ಲದ ವಸ್ತುಗಳಿಗೆ ಎಂದಿಗೂ ಆಸೆ ಪಡಬಾರದು ಎಂದು ಹೇಳಿದರು.
ವಂಚಕರ ಮಾತು ನಂಬಬೇಡಿ:
ನಿಧಿ ತೆಗೆಸಲು ವಾಮಾಚಾರ ಮಾಡಿಸುವ, ಹೆಚ್ಚಿನ ಕಮಿಷನ್ ಆಸೆ ತೋರಿಸಿ ನೋಟು ಬದಲಾಯಿಸುವ, ಹಳೆ ಕಾಲದ ಚಿನ್ನದ ಬಿಸ್ಕತ್ತುಗಳನ್ನು ಅಗ್ಗದ ಬೆಲೆಗೆ ಮಾರುವುದಾಗಿ ನಂಬಿಸುವ ಮೋಸಗಾರರನ್ನು ನಂಬಬೇಡಿ ಎಂದು ಹೇಳಿದರು. ಪೊಲೀಸ್ ಇನ್ಸ್ಪೆಕ್ಟರ್ ಆರ್.ದಯಾನಂದ್, ಸಬ್ ಇನ್ಸ್ಪೆಕ್ಟರ್ ರಾಜಣ್ಣ, ಸಿಬ್ಬಂದಿ ಸೀತಾರಾಮ್ ಸಿಂಗ್, ಎಸ್ಬಿ ಎಂ.ಮಂಜುನಾಥ್ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.