ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಗಳಾಗಿವೆ: ಬೆಲ್ಲದ ಆರೋಪ

KannadaprabhaNewsNetwork | Published : Jun 5, 2025 1:12 AM
ಕರ್ನಾಟಕದಲ್ಲಿ ಪ್ರಗತಿ ನಿಂತು ಹೋಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಮುಸ್ಲಿಮರ ತುಷ್ಟೀಕರಣವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಪಾಕಿಸ್ತಾನ ಪರ ಘೋಷಣೆ ಹಾಕಿದ ನಸೀರ್ ಅಹಮ್ಮದ್ ಬೆಂಬಲಿಗರನ್ನು ಕರೆದು ವಿಚಾರಣೆ ಮಾಡಿಲ್ಲ. ಅದೇ ಹಿಂದು ಕಾರ್ಯಕರ್ತರ ಮೇಲೆ ಕೇಸ್ ಹಾಕಲಾಗುತ್ತಿದೆ.

ಹುಬ್ಬಳ್ಳಿ: ರಾಜ್ಯದ ಪ್ರತಿಯೊಂದು ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದು ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಗಂಭೀರವಾಗಿ ಆರೋಪಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ- ಧಾರವಾಡದಲ್ಲಿ ಪೊಲೀಸರಿಗೆ ಯಾರೂ ಹೇಳುವವರು ಇಲ್ಲದಂತಾಗಿದೆ. ಇಂದಿರಾಗಾಂಧಿ ಸಮಯದಲ್ಲಿ ಎಮರ್ಜೆನ್ಸಿಯಲ್ಲಿ ಇದ್ದ ದೇಶ ಇದಲ್ಲ, ಹಿಂದು ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವ ಕೆಲಸವನ್ನು ನಿಲ್ಲಿಸಬೇಕು ಎಂದು ಹೇಳಿದರು.

ಕರ್ನಾಟಕದಲ್ಲಿ ಪ್ರಗತಿ ನಿಂತು ಹೋಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಮುಸ್ಲಿಮರ ತುಷ್ಟೀಕರಣವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಪಾಕಿಸ್ತಾನ ಪರ ಘೋಷಣೆ ಹಾಕಿದ ನಸೀರ್ ಅಹಮ್ಮದ್ ಬೆಂಬಲಿಗರನ್ನು ಕರೆದು ವಿಚಾರಣೆ ಮಾಡಿಲ್ಲ. ಅದೇ ಹಿಂದು ಕಾರ್ಯಕರ್ತರ ಮೇಲೆ ಕೇಸ್ ಹಾಕಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಯೊಬ್ಬ ಜಿಲ್ಲಾ ಉಸ್ತುವಾರಿ ಮಂತ್ರಿ ತಮ್ಮ ಜಿಲ್ಲೆಯಲ್ಲಿ ತನ್ನದೆ ಆದ ರಿಪಬ್ಲಿಕ್ ಮಾಡಿಕೊಂಡಿದ್ದಾರೆ. ಬೆಳಗಾವಿ ಲಕ್ಷ್ಮೀ ಹೆಬ್ಬಾಳ್ಕರ್ ರಿಪಬ್ಲಿಕ್ ಆಗಿದೆ. ಅವರ ದುರಾಡಳಿತ ಹೆಚ್ಚುತ್ತಿದೆ. ದಕ್ಷಿಣ ಕನ್ನಡದಲ್ಲಿ ಹಿಂದೂ ಸಂಘಟನಾಕಾರರನ್ನು ಗಡಿಪಾರು ಮಾಡಲು ಕಾಂಗ್ರೆಸ್ ನಾಯಕರೇ ದೊಡ್ಡ ಲಿಸ್ಟ್‌ ಮಾಡಿದ್ದಾರೆ. ಟೆರರ್ ಕ್ರಿಯೇಟ್ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.

ಆರ್‌ಸಿಬಿಗೆ ಅಭಿನಂದನೆ: 18 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್‌ ಫೈನಲ್‌ನಲ್ಲಿ ಗೆಲವು ಸಾಧಿಸಿ ಕಪ್‌ ತನ್ನದಾಗಿಸಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಶಾಸಕ ಅರವಿಂದ ಬೆಲ್ಲದ, ಪಂದ್ಯದ ಮೊದಲ ಎಸೆತದಿಂದಲೂ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಿತು. ತಂಡದ ಸಂಘಟಿತ ಪ್ರದರ್ಶನಕ್ಕೆ ಜಯ ದೊರೆತಿದೆ. ಆರ್‌ಸಿಬಿ ತಂಡಕ್ಕೆ ಅಭಿನಂದನೆ ಎಂದರು.ಶೋಕಯಾತ್ರೆಗೆ ಕಾಂಗ್ರೆಸ್‌ ಹೊಣೆ: 18 ವರ್ಷಗಳ ಬಳಿಕ ಆರ್‌ಸಿಬಿ ತಂಡ ಐಪಿಎಲ್‌ ಕಪ್‌ ಗೆದ್ದು ಬಂದ ವೇಳೆಯಲ್ಲಿ ಸಂಭ್ರಮ ಆಗುವ ಬದಲು ಕಾಂಗ್ರೆಸ್‌ ಸರ್ಕಾರದ ವೈಫಲ್ಯ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಅಸಮರ್ಥ ಆಡಳಿತದಿಂದಾಗಿ ಕರಾಳ ದಿನವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಖೇದ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಸಂಭವಿಸಿದ ನೂಕುನುಗ್ಗಲಿನಲ್ಲಿ ಅಮಾಯಕರು ಸಾವನ್ನಪ್ಪಿದ್ದಾರೆ. ಆರ್‌ಸಿಬಿ ತಂಡದ ವಿಜಯಯಾತ್ರೆ, ಕಾಂಗ್ರೆಸ್‌ ಸರ್ಕಾರದಿಂದ ಶೋಕಯಾತ್ರೆಯಾಗಿ ಪರಿವರ್ತಿತವಾಗಿದೆ. ಈ ಅಮಾಯಕರ ಸಾವುಗಳಿಗೆ ಕಾಂಗ್ರೆಸ್‌ ಸರ್ಕಾರವೇ ನೇರ ಹೊಣೆ.ವಿಜಯಯಾತ್ರೆಯನ್ನು, ಸನ್ಮಾನ ಸಮಾರಂಭವನ್ನು ಪೂರ್ವ ಸಿದ್ಧತೆಗಳೊಂದಿಗೆ, ಹೆಚ್ಚು ಭದ್ರತೆಯೊಂದಿಗೆ ಸರ್ಕಾರ ಆಯೋಜಿಸಬಹುದಿತ್ತು. ಆದರೆ, ರಾಜಕೀಯ ಸ್ವಾರ್ಥಕ್ಕಾಗಿ ಅಮಾಯಕರ ಬಲಿ ಪಡೆದು, ಸರ್ಕಾರ ಬೇಳೆ ಬೇಯಿಸಿಕೊಳ್ಳುತ್ತಿದೆ. ಗೆಲುವಿನ ಸಂಭ್ರಮದಲ್ಲಿ ಮಿಂದೇಳಿ ಅಡ್ಡಿ ಇಲ್ಲ. ಆದರೆ, ಅಭಿಮಾನಿಗಳ ಸಾಗರವೇ ಹರಿದುಬಂದ ಸಂದರ್ಭದಲ್ಲಿ ಮುನ್ನೆಚ್ಚರಿಕೆಯಿಂದ ಇರಬೇಕಿತ್ತು ಎಂದು ಬೆಲ್ಲದ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.