ಹಿರಿಯರ ಸುರಕ್ಷತೆಗೆ ಪೊಲೀಸರ ''''ಆಸರೆ''''

KannadaprabhaNewsNetwork |  
Published : Mar 16, 2026, 01:00 AM IST
ಹುಬ್ಬಳ್ಳಿಯ ಕೇಶ್ವಾಪುರ ಭಾಗದಲ್ಲಿ ಬೀಟ್‌ ಪೊಲೀಸ್‌ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಹಿರಿಯರ ಮಾಹಿತಿ ಪಡೆದುಕೊಳ್ಳುತ್ತಿರುವುದು. | Kannada Prabha

ಸಾರಾಂಶ

ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ಹಾಗೂ ಹಿರಿಯ ನಾಗರಿಕರ ಕಾಳಜಿಯ ದೃಷ್ಟಿಯಿಂದ ರಾಜ್ಯ ಪೊಲೀಸ್ ಇಲಾಖೆ ಈ ಯೋಜನೆ ಜಾರಿಗೆ ತಂದಿದೆ. ಇದರನ್ವಯ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂಟಿಯಾಗಿ ವಾಸವಾಗಿರುವ ವೃದ್ಧರ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಅವರಿಗೆ ಬೇಕಾದ ಅಗತ್ಯ ಕಾನೂನು ನೆರವು ನೀಡುವ ಜತೆಗೆ ಮಾನವೀಯತೆಯ ಸಹಾಯಹಸ್ತ ನೀಡಲು ಮುಂದಾಗಿದ್ದಾರೆ.

ಅಜೀಜಅಹ್ಮದ ಬಳಗಾನೂರ

ಹುಬ್ಬ‍ಳ್ಳಿ:

ಸಂಧ್ಯಾಕಾಲದಲ್ಲಿ ಒಂಟಿತನ ಅನುಭವಿಸುತ್ತಿರುವ ಹಿರಿಯ ನಾಗರಿಕರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ತುಂಬಲು ಪೊಲೀಸ್‌ ಇಲಾಖೆ ''''''''ಆಸರೆ'''''''' ಎಂಬ ವಿನೂತನ ಕಾರ್ಯಕ್ರಮ ಜಾರಿಗೊಳಿಸಿದ್ದು, ಎರಡ್ಮೂರು ತಿಂಗಳಿಂದ ಮಹಾನಗರ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ.

ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ಹಾಗೂ ಹಿರಿಯ ನಾಗರಿಕರ ಕಾಳಜಿಯ ದೃಷ್ಟಿಯಿಂದ ರಾಜ್ಯ ಪೊಲೀಸ್ ಇಲಾಖೆ ಈ ಯೋಜನೆ ಜಾರಿಗೆ ತಂದಿದೆ. ಇದರನ್ವಯ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂಟಿಯಾಗಿ ವಾಸವಾಗಿರುವ ವೃದ್ಧರ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಅವರಿಗೆ ಬೇಕಾದ ಅಗತ್ಯ ಕಾನೂನು ನೆರವು ನೀಡುವ ಜತೆಗೆ ಮಾನವೀಯತೆಯ ಸಹಾಯಹಸ್ತ ನೀಡಲು ಮುಂದಾಗಿದ್ದಾರೆ.

ಹು-ಧಾ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯಲ್ಲಿ ಕಳೆದ 2 ತಿಂಗಳಿಂದ ಮನೆ-ಮನೆ ಸಮೀಕ್ಷೆ ನಡೆಸಿ 7025 ಜನರನ್ನು "ಆಸರೆ "ಯಡಿ ಗುರುತಿಸಲಾಗಿದೆ.

ಏನೆಲ್ಲ ಮಾಹಿತಿ?:

ಅಪರಾಧ ಕೃತ್ಯ ನಡೆಯದಂತೆ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಕಳ್ಳತನ, ದರೋಡೆ ಕೃತ್ಯ ನಡೆದಾಗ ತುರ್ತು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ನೀಡಲಾಗುತ್ತಿದೆ. ಅಹಿತಕರ ಘಟನೆ ನಡೆಯದಂತೆ ಸಿಸಿ ಕ್ಯಾಮೆರಾ, ಅಪಾಯದ ಸೈರನ್‌ ಅಳವಡಿಕೆ ಸಹಿತ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆಯೂ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ.

ತುರ್ತು ವೈದ್ಯಕೀಯ ಅಗತ್ಯತೆ ಇದ್ದಲ್ಲಿ, ಔಷಧೋಪಚಾರದ ನೆರವು ಬೇಕಿದ್ದರೂ ಆಯಾ ಬೀಟ್‌ ಪೊಲೀಸರಿಗೆ ಕರೆ ಮಾಡಿದರೆ ಅವರು ಬಂದು ಸಹಾಯ, ಸಹಕಾರ ನೀಡಲಿದ್ದಾರೆ. ಇದರೊಂದಿಗೆ ವೃದ್ಧಾಪ್ಯ ವೇತನ, ಪಡಿತರ ಚೀಟಿ, ಪಿಂಚಣಿ ಸೇರಿ ಸರ್ಕಾರದ ವಿವಿಧ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಾರೆ.

ಸಿಬ್ಬಂದಿ ಮೇಲೂ ನಿಗಾ:

ಪ್ರತಿ ಠಾಣೆಯಲ್ಲಿ ನಿಗದಿಗೊಳಿಸಿದ ಬೀಟ್ ಸಿಬ್ಬಂದಿಯ ಕರ್ತವ್ಯದ ಮೇಲೂ ನಿಗಾ ಇರಿಸಲಾಗಿದೆ. ಅವರು ಮನೆಗಳಿಗೆ ಭೇಟಿ ನೀಡಿ ನಿರ್ದಿಷ್ಟ ಕಡೆ ಇರಿಸಿದ್ದ ಲಾಗ್‌ ಬುಕ್‌ನಲ್ಲಿ ಬೀಟ್‌ ಸಿಬ್ಬಂದಿ ಸಹಿ ಮಾಡಬೇಕು. ಹಿರಿಯರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವ ಜತೆಗೆ ಅವರ ಸಮಸ್ಯೆ ಆಲಿಸಿ ಪರಿಹರಿಸಬೇಕೆಂದು ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ಸೂಚಿಸಿದ್ದಾರೆ.

ಮಾಹಿತಿ ಸಂಗ್ರಹ:

ಬೀಟ್ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿದಾಗ ಕುಟುಂಬದ ಸದಸ್ಯರ ಮಾಹಿತಿ ಪಡೆದು ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದಾದ ಸಹಾಯವಾಣಿ (112) ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳ ದೂರವಾಣಿ ಸಂಖ್ಯೆ ನೀಡುತ್ತಾರೆ. ವಂಚನೆ ಕಡಿವಾಣಕ್ಕೆ ಸಹಕಾರಿ...

ಮಕ್ಕಳು ವೃತ್ತಿಯಲ್ಲಿ ವಿವಿಧೆಡೆ ಕೆಲಸ ನಿರ್ವಹಿಸುವ ಹಿನ್ನೆಲೆ ಹಿರಿಯರು ಮನೆಯಲ್ಲಿ ಒಬ್ಬಂಟಿಯಾಗಿ ಇರುತ್ತಾರೆ. ಈ ವೇಳೆ ಅಪರಾಧ ಕೃತ್ಯ, ವಂಚನೆ ‌ನಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಆಸರೆ ಯೋಜನೆಯಡಿ ಅವರಿಗೆ ಸುರಕ್ಷತೆ ನೀಡುವ ಜತೆಗೆ ರಕ್ಷಣೆ ನೀಡುವುದು ಇದರ ಉದ್ದೇಶವಾಗಿದೆ. ಎರಡು ತಿಂಗಳಿಂದ ಹು-ಧಾ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯಲ್ಲಿ ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗಿದೆ. ಆಸರೆಯಡಿ ಈ ವರೆಗೆ 7025 ಜನರನ್ನು ಗುರುತಿಸಿದ್ದು ಅವರಿಗೆ ಸುರಕ್ಷತೆ, ಅಗತ್ಯ ಸಹಕಾರ ನೀಡಲಾಗುತ್ತಿದೆ.

ರವೀಶ ಸಿ.ಆರ್‌., ಡಿಸಿಪಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಸಬಲೀಕರಣ ಅಗತ್ಯ
ರಂಜಾನ್‌ನಿಂದ ಶಾಂತಿ, ಸೋದರತ್ವದ ಸಂದೇಶ: ಜಿಲ್ಲಾಧಿಕಾರಿ ಶ್ರೀರೂಪಾ