ಕನ್ನಡಪ್ರಭ ವಾರ್ತೆ ಹೊಸಕೋಟೆ
ದಶಕಗಳ ಹಿಂದೆ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಬಡವರ ಪರವಾಗಿ ಕೆಲಸ ಮಾಡಲು ಇಚ್ಛಾಶಕ್ತಿ ಹೊಂದಿದ್ದರು. ಆದರೆ ಪ್ರಸ್ತುತ ವ್ಯವಸ್ಥೆಯಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಬಡವರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಕರ್ನಾಟಕ ರಿಪಬ್ಲಿಕನ್ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಬೆಳತೂರು ವೆಂಕಟೇಶ್ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ಮಹಿಳಾ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲವಾರು ದಶಕಗಳಿಂದ ಕರ್ನಾಟಕ ರಿಪಬ್ಲಿಕ್ ಸೇನೆಯ ಮೂಲಕ ಕೆಲಸ ಮಾಡಿ, ಬಳಿಕ ಕರ್ನಾಟಕ ರಿಪಬ್ಲಿಕನ್ ಸಂಘಟನೆ ಪ್ರಾರಂಭ ಮಾಡುವುದರ ಮೂಲಕ ಬಡವರ ಧ್ವನಿಯಾಗಿ ಕೆಲಸ ಮಾಡಲಾಗುತ್ತಿದೆ. ಗ್ರಾಮ ಶಾಖೆ ಪ್ರಾರಂಭಿಸಿ ಹೋರಾಟದ ಮೂಲಕ ಬಡವರಿಗೆ ಧ್ವನಿಯಾಗಿ ನಿವೇಶನ, ಮನೆ ಕೊಡಿಸುವ ಕೆಲಸ ಮಾಡುವುದು ಸಂಘಟನೆಯ ಉದ್ದೇಶವಾಗಿದೆ. ಸ್ವತಂತ್ರ ಬಂದು ದಶಕಗಳು ಕಳೆದರೂ ಸಹ ಸ್ವಂತ ಸೂರಿಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ಮಾಡುವ ಬಡವರು ಸಾಕಷ್ಟು ಇದ್ದಾರೆ. ಆದರೂ ಕೂಡ ಸರ್ಕಾರಿ ಜಮೀನುಗಳು ಉಳ್ಳವರ ಪಾಲಾಗುತ್ತಿವೆ ಹೊರತು, ಬಡವರಿಗೆ ದಕ್ಕುತ್ತಿಲ್ಲ. ಈ ನಿಟ್ಟಿನಲ್ಲಿ ಸಂಘಟನೆ ಬಲಿಷ್ಠವಾಗಿ ಕೆಲಸ ಮಾಡಲಿದೆ ಎಂದರು.ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶಕುಂತಲಮ್ಮ ಮಾತನಾಡಿ, ಚುನಾವಣೆ ವೇಳೆ ಹಣ ಪಡೆದು ರಾಜಕಾರಣಿಗಳಿಗೆ ಮತ ಹಾಕುತ್ತೇವೆ. ನಮ್ಮಿಂದ ಮತ ಪಡೆದು ಗೆದ್ದ ಅವರು ನಮ್ಮ ಕಷ್ಟವನ್ನು ಕೇಳಲ್ಲ. ಆದ್ದರಿಂದ ಮತ ಮಾರಿಕೊಳ್ಳದೇ ನಮ್ಮ ಹಕ್ಕನ್ನು ಚಲಾಯಿಸಿದರೆ ರಾಜಕಾರಣಿಗಳನ್ನು ಧೈರ್ಯವಾಗಿ ಪ್ರತಿಯೊಬ್ಬರೂ ಪ್ರಶ್ನೆ ಮಾಡಬಹುದು ಎಂದರು.
ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾಗಿ ಲಕ್ಷ್ಮೀ, ಕಾರ್ಯದರ್ಶಿಯಾಗಿ ದೇವಿ, ಉಪಾಧ್ಯಕ್ಷರಾಗಿ ಮಂಗಲಮ್ಮ, ದಿಲ್ ಶಾದ್, ಸಂಘಟನಾ ಕಾರ್ಯದರ್ಶಿಯಾಗಿ ನಜೀಬ್ ಅವರನ್ನು ನೇಮಕ ಮಾಡಲಾಯಿತು.ಕರ್ನಾಟಕ ರಿಪಬ್ಲಿಕನ್ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಕ್ಕನಾರಾಯಣ, ಖಜಾಂಚಿ ಎಸ್. ಕುಮಾರ್, ಯುವ ಘಟಕ ರಾಜ್ಯಾಧ್ಯಕ್ಷ ಅಂಜಿನಾಪುರ ಎಂ ವೆಂಕಟೇಶ್, ಉಪಾಧ್ಯಕ್ಷ ಎನ್.ಟಿ. ವಿಜಯಕುಮಾರ್, ಗ್ರಾಮಾಂತರ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಶಿರೀಷಾ ಹಾಜರಿದ್ದರು.