ಸುಬ್ರಹ್ಮಣ್ಯ: ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಅ.28ರಂದು ಶನಿವಾರ ದೇವರ ದರ್ಶನಗಳಲ್ಲಿ ವ್ಯತ್ಯಯ ವಾಗಲಿದೆ. ಕುಕ್ಕೆ ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಭಕ್ತಾಧಿಗಳಿಗೆ ಶ್ರೀ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. 28ರಂದು ಶನಿವಾರ ರಾತ್ರಿ ಮಹಾಪೂಜೆ ಸಾಯಂಕಾಲ 6.30ಕ್ಕೆ ಮುಕ್ತಾಯಗೊಳ್ಳಲಿದೆ. ಆ ಬಳಿಕ ದೇವರ ದರುಶನಕ್ಕೆ ಅವಕಾಶ ಇರುವುದಿಲ್ಲ. ಅಲ್ಲದೆ ಈ ದಿನ ಸಂಜೆಯ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ. ರಾತ್ರಿ ಪ್ರಸಾದ ಬೋಜನ ಪ್ರಸಾದ ವಿತರಣೆ ಇರುವುದಿಲ್ಲ ಎಂದು ವಳದ ಪ್ರಕಟಣೆ ತಿಳಿಸಿದೆ. ಚಂದ್ರಗ್ರಹಣ: ಉಡುಪಿ ಕೃಷ್ಣಮಠದಲ್ಲಿ ನಾಳೆ ರಾತ್ರಿ ಊಟ ಇಲ್ಲ ಶನಿವಾರ ಸಂಭವಿಸಲಿರುವ ಚಂದ್ರಗ್ರಹಣದ ಪ್ರಯುಕ್ತ ಉಡುಪಿ ಕೃಷ್ಣಮಠದಲ್ಲಿ ನಿತ್ಯ ಪೂಜೆಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಆದರೆ ಶನಿವಾರ ಸಂಜೆ 5ರಿಂದ 6 ಗಂಟೆ ನಡುವೆ ನಡೆಯುವ ಭೋಜನ ಶಾಲೆಯ ಮುಖ್ಯಪ್ರಾಣ ದೇವರ ರಂಗಪೂಜೆಯು 4 ಗಂಟೆಯೊಳಗೆ ಸಂಪನ್ನಗೊಳ್ಳಲಿದೆ. ಈ ದಿನ ರಾತ್ರಿ ಊಟ ಇರುವುದಿಲ್ಲ. ಭಾನುವಾರದ ಮಧ್ಯಾಹ್ನ 11 ಗಂಟೆಗೆ ನಡೆಯುವ ಮಹಾಪೂಜೆಯು 10 ಗಂಟೆಗೆ ಮುಗಿಲಿದೆ. ಉಳಿದಂತೆ ಯಾವುದೇ ವ್ಯತ್ಯಾಸಗಳಿಲ್ಲ ಎಂದು ತಿಳಿಸಲಾಗಿದೆ. ಮುಕಾಂಬಿಕೆಗೆ ವಿಶೇಷ ಅಭಿಷೇಕ ಚಂದ್ರ ಗ್ರಹಣದ ಪ್ರಯುಕ್ತ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ದೈನಂದಿನ ಧಾರ್ಮಿಕ ಚಟುವಟಿಕೆಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ ಗ್ರಹಣ ಕಾಲದಲ್ಲಿ ಮೂಕಾಂಬಿಕೆಗೆ ವಿಶೇಷ ಅಭಿಷೇಕ ನಡೆಸಲಾಗುತ್ತದೆ. ಎಂದಿನಂತೆ ಶನಿವಾರ, ಭಾನುವಾರ ದೇವಿಯ ದರ್ಶನಕ್ಕೆ ಅವಕಾಶವಿದೆ, ಮಧ್ಯಾಹ್ನ ಮತ್ತು ರಾತ್ರಿಯ ಭೋಜನ ಪ್ರಸಾದ ಭಕ್ತರಿಗೆ ನೀಡಲಾಗುತ್ತದೆ