ಕನ್ನಡಪ್ರಭ ವಾರ್ತೆ ಕನಕಗಿರಿ
ತಾಲೂಕಿನಾದ್ಯಂತ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿನ ಮಕ್ಕಳ ಬಿಸಿಯೂಟಕ್ಕೆ ಕಳಪೆ ಮಟ್ಟದ ದಾಸ್ತಾನು ಪೂರೈಕೆಯಾಗಿದ್ದು, ಕಳೆದ ತಿಂಗಳಿಂದ ಮಕ್ಕಳು ಕಳಪೆ ಆಹಾರ ಸೇವಿಸುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ.ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ವ-ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಕಳಪೆ ಮಟ್ಟದ ದಾಸ್ತಾನು ಸರಬರಾಜು ಆಗಿರುವುದು ಚರ್ಚೆಗೆ ಗ್ರಾಸವಾಗಿದೆ. ಅಕ್ಕಿ, ಗೋಧಿ ಹಾಗೂ ಬೇಳೆಯಲ್ಲಿಯೂ ನುಸಿ ಹುಳುಗಳು ಕಾಣಿಸಿಕೊಂಡಿದ್ದು, ಇದೇ ಆಹಾರ ಧಾನ್ಯವನ್ನು ಮಕ್ಕಳಿಗೆ ಕಳೆದ ತಿಂಗಳಿಂದ ಮಧ್ಯಹ್ನದ ಬಿಸಿಯೂಟಕ್ಕೆ ಉಪಯೋಗಿಸಲಾಗುತ್ತಿದ್ದು, ಮಕ್ಕಳ ಆರೋಗ್ಯದಲ್ಲಿ ಹೆಚ್ಚು-ಕಡಿಮೆಯಾದರೆ ಯಾರು ಜವಾಬ್ದಾರಿ? ಎಂದು ಪಪಂ ಸದಸ್ಯ ಶೇಷಪ್ಪ ಪೂಜಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ತಾಲೂಕಿನಾದ್ಯಂತಹ ಎಲ್ಲ ಶಾಲೆಗಳಿಗೆ ಸಂಪೂರ್ಣ ಕಳಪೆ ಮತ್ತು ನುಸಿ ಹುಳು ಮಿಶ್ರಿತ ದಾಸ್ತಾನು ಪೂರೈಸಿದ್ದಲ್ಲದೇ ತಿಂಗಳ ಪರ್ಯಂತ ಮಕ್ಕಳಿಗೆ ನುಸಿ ಹುಳು ಮಿಶ್ರಿತ ಬಿಸಿಯೂಟ ಸೇವನೆಗೆ ಅಕ್ಷರ ದಾಸೋಹ ಯೋಜನಾ ಸಹಾಯಕ ನಿರ್ದೇಶಕ ರೋಷನ್ ಹಾಗೂ ಮುಖ್ಯೋಪಾಧ್ಯಾಯ ಸಂಗಮೇಶ ಹಿರೇಮಠ ಕಾರಣರಾಗಿದ್ದಾರೆ. ಸಚಿವರ ಕ್ಷೇತ್ರದಲ್ಲಿಯೇ ಈ ರೀತಿ ಅನ್ಯಾಯ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಫೆ.೧೧ರಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಿಗೆ ಕಳಪೆ ದಾಸ್ತಾನನ್ನು ಪೋಸ್ಟ್ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ಹೋರಾಟಗಾರ ಪಾಮಣ್ಣ ಅರಳಿಗನೂರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಕನಕಗಿರಿ ಉತ್ತರ ಕ್ಲಸ್ಟರ್ ವ್ಯಾಪ್ತಿಯ ಹಲವು ಶಿಕ್ಷಕರು ಶಾಲಾ ಅವಧಿಯಲ್ಲಿ ಇಲಾಖೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಿಂಗಳಿಗೊಮ್ಮೆ ಶಾಲಾ ಮೇಲುಸ್ತುವಾರಿ ಸಮಿತಿ ಸಭೆ ಹಮ್ಮಿಕೊಂಡು ಶಾಲಾಯ ಅಭಿವೃದ್ದಿಗೆ ಮುಂದಾಗಬೇಕು ಎಂದು ಎಸ್ಡಿಎಂಸಿ ಸದಸ್ಯ ಹನುಮಂತರೆಡ್ಡಿ ಮಹಲಿನಮನಿ ಒತ್ತಾಯಿಸಿದರು.
ಸಿಆರ್ಪಿ ಮಹೇಶ, ಇಸಿಒ ಆಂಜನೇಯಸ್ವಾಮಿ ಸೇರಿದಂತೆ ಶಾಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪಾಲಕರು ಇದ್ದರು.