ಸಾಮೂಹಿಕ ವಿವಾಹದಿಂದ ಬಡವರು ಸಾಲದ ಹೊರೆಯಿಂದ ಮುಕ್ತ

KannadaprabhaNewsNetwork | Published : May 19, 2025 12:12 AM
Follow Us

ಸಾರಾಂಶ

ಸಮಾಜದಲ್ಲಿ ಸತ್ಕಾರ್ಯ ಮಾಡುವವರಿಗಿಂತ, ಪಾಪದ ಕಾರ್ಯ ಮಾಡುವವರ ಸಂಖ್ಯೆ ಇಂದು ಹೆಚ್ಚುತ್ತಿದೆ

ಕುಕನೂರು: ಸಾಲ ಮಾಡಿ, ಹೊಲ ಮಾರಿ ಮದುವೆ ಮಾಡುವ ಬದಲು ಸಾಮೂಹಿಕ ವಿವಾಹದಲ್ಲಿ ಸರಳ ರೀತಿಯಲ್ಲಿ ಮದುವೆಯಾಗಿ ಆಡಂಬರಕ್ಕಿಂತ ಅನ್ಯೋನತೆಯಾಗಿ ಬದುಕುವುದೇ ದಂಪತಿಗಳಿಗೆ ಆಭರಣ ಎಂದು ಇಟಗಿಯ ಶ್ರೀಶಿವಶರಣ ಗದಿಗೆಪ್ಪಜ್ಜನವರು ಹೇಳಿದರು.

ತಾಲೂಕಿನ ಶಿರೂರು ಗ್ರಾಮದಲ್ಲಿ ಶ್ರೀದುರ್ಗಾದೇವಿ ಹಾಗೂ ಮಲಿಯಮ್ಮದೇವಿ ಜಾತ್ರಾ ಮಹೋತ್ಸವ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತ್ಯುತ್ಸವದ ಅಂಗವಾಗಿ ಜರುಗಿದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು,

ಸಮಾಜದಲ್ಲಿ ಸತ್ಕಾರ್ಯ ಮಾಡುವವರಿಗಿಂತ, ಪಾಪದ ಕಾರ್ಯ ಮಾಡುವವರ ಸಂಖ್ಯೆ ಇಂದು ಹೆಚ್ಚುತ್ತಿದೆ. ಜನ್ಮ ತಳೆದ ಪ್ರತಿಯೊಬ್ಬ ಜೀವಿಯು ತನ್ನ ಜೀವಿತಾವದಿಯಲ್ಲಿ ಸತ್ಕಾರ್ಯ ಮಾಡಿ ಪುಣ್ಯದ ಮಾರ್ಗದೆಡೆಗೆ ಸಾಗಬೇಕು ಎಂದರು.

ಗಜೇಂದ್ರಗಡ ಮುಸ್ಲಿಂ ಸಮಾಜದ ಗುರುಗಳಾದ ಸೈಯ್ಯದ ನಿಜಾಮುದ್ದೀನ ಶಾ ಮಾತನಾಡಿ, ಸಾಮೂಹಿಕ ವಿವಾಹ ಎಂದರೆ ಬಡ ಜನರ ಮದುವೆಗಳಲ್ಲ, ಅವು ಭಾಗ್ಯವಂತರ ಮದುವೆಗಳು ಎಂದರು.

ಪವಿತ್ರ ಧಾರ್ಮಿಕ ಕ್ಷೇತ್ರವಾದ ಶಿರೂರು ಗ್ರಾಮದಲ್ಲಿ ಸರ್ವ ಸಮಾಜದವರು ಒಡಗೂಡಿ ಇಂತಹ ಕಲ್ಯಾಣ ಮಾಡುತ್ತಾ 26 ವರ್ಷ ಪೂರೈಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಮಹನೀಯರ ಜಯಂತಿ ಹಾಗೂ ಶ್ರೀ ದೇವಿಯರ ಜಾತ್ರಾಮಹೋತ್ಸವದಂದು ನೂತನ ದಾಂಪತ್ಯಕ್ಕೆ ಪಾದಾರ್ಪಣೆ ಮಾಡಿದ ದಂಪತಿಗಳು ಭಾಗ್ಯಶಾಲಿಗಳಾಗಿದ್ದು, ನಿಮ್ಮ ಜೀವನ ಪಯಣ ಪ್ರತಿಯೊಬ್ಬರಿಗೆ ಮಾದರಿಯಾಗಲಿ ಎಂದರು.

ಸಾನಿಧ್ಯವನ್ನು ಸವಡಿ ಮರುಳಸಿದ್ದೇಶ್ವರ ಸ್ವಾಮಿಗಳು, ರಾಜೂರು ಸದ್ಗುರು ರಾಮಾನಂದ ಶಿವಮುನಿ, ಗುರುಮೂರ್ತಿ ಸ್ವಾಮಿ ರಾಜೂರು, ಹಜರತ್ ಸೈಯ್ಯದ ಸೂಫಿ ಶರಣ ಹುಸೇನ ಸಾಹೇಬ ನಿಡಗೋಳ, ಮಳೆಯಯ್ಯ ಸ್ವಾಮಿಗಳು ಬಿಸರಹಳ್ಳಿ, ನಾಗರಾಜ ಸ್ವಾಮಿಗಳು ಹಿರೇಸಿಂದೋಗಿ, ಹಾಲಪ್ಪ ಸ್ವಾಮಿ, ದೇವಸ್ಥಾನದ ಅರ್ಚಕರಾದ ಬಸವರಾಜ ಪೂಜಾರ, ಹುಚ್ಚಪ್ಪ ಪೂಜಾರ ಇನ್ನೂ ಅನೇಕ ಶಿವಶರಣರು ಸಾನ್ನಿಧ್ಯ ವಹಿಸಿದ್ದರು.

ಶಿವಬಸಯ್ಯ ಮುತ್ತಿನಪೆಂಡಿಮಠ ಹಾಗೂ ಈಶಪ್ಪ ಶಿರೂರು ನಿರೂಪಿಸಿದರು. ಎಚ್.ಎನ್.ಬಡಿಗೇರ, ಚಿನ್ನಪ್ಪ ತಳವಾರ, ಶಂಕರ ಗೌಡ ಹಾಳಕೇರಿ, ಶ್ರೀಧರ ಬಡಿಗೇರ, ಲಕ್ಷ್ಮಣ ಹೊಸಮನಿ, ವೀರೇಂದ್ರ, ರವಿ ಹಿರೇಮನಿ, ದೇವೇಂದ್ರಪ್ಪ ವಾಲ್ಮೀಕಿ, ಮುತ್ತಣ್ಣ ಬಾರಿನ ಇತರರಿದ್ದರು.