ಭದ್ರಾವತಿ: ಜಾತಿ ಮೀರಿ ಜನರ ಪ್ರೀತಿ ಗಳಿಸಿದ ಸಮಾಜ ಸೇವಕ, ಕಲಾವಿದ ಹಫೀಜ್. ಈತ ಕೇವಲ ಕಲಾವಿದನಾಗಿರದೇ ವೃತ್ತಿಯ ನಡುವೆಯೇ ದುಡಿದ ಬಹುಪಾಲು ಹಣ ಸಮಾಜ ಸೇವೆಗೆ ವಿನಿಯೋಗಿಸಿದ ಮಾದರಿ ವ್ಯಕ್ತಿ ಆಗಿದ್ದಾರೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಹೇಳಿದರು. ನಗರದ ಬಿ.ಎಚ್. ರಸ್ತೆಯ ಕಾಮತ್ ಬೇಕರಿ ಮೇಲ್ಭಾಗದ ಸಭಾಂಗಣದಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಹಾಗೂ ತಾಲೂಕು ಕುಂಚ ಕಲಾವಿದರ ಸಂಘ ವತಿಯಿಂದ ಆಯೋಜಿಸಲಾಗಿದ್ದ ಕಲಾವಿದ ದಿವಂಗತ ಹಫೀಜ್ ಉರ್ ರೆಹಮಾನ್ ಸವಿನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಪ್ರಾಮಾಣಿಕ ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಶ್ರಮಿಸುತ್ತಿದೆ. ಕಲಾವಿದ ಹಫೀಜ್ ಕೇವಲ ಒಂದು ಸಮಾಜಕ್ಕೆ ಸೀಮಿತವಾಗದೇ ಎಲ್ಲ ವರ್ಗದವರ ಜೊತೆ ಬೆರೆತು, ಸಮಾಜ ಸೇವಕರಾಗಿ, ವೃತ್ತಿಯಲ್ಲಿ ಕ್ರಿಯಾಶೀಲತೆ ಮೆರೆಯುತ್ತಿದ್ದ ವ್ಯಕ್ತಿ ಎಂದರು.ಹಫೀಜ್ ಕುಂಚ ಕಲಾವಿದರಾದರೂ ಸಮಾಜ ಸೇವಕರಾಗಿ ಅನೇಕ ಜನಪರ ಕಾರ್ಯಗಳನ್ನು ನಿರ್ವಹಿಸಿದ ಸಾಂಸ್ಕೃತಿಕ ವ್ಯಕ್ತಿಯಾಗಿದ್ದರು. ಅಲ್ಲದೇ, 15ಕ್ಕೂ ಹೆಚ್ಚು ಕೆಲಸಗಾರರಿಗೆ ವೃತ್ತಿ ನೈಪುಣ್ಯತೆ ಕಲಿಸಿದ್ದರು. ಸ್ವಂತ ಉದ್ಯೋಗ ನಡೆಸಲು ತಿಳಿಸಿ, ಅನೇಕರ ಮಾರ್ಗದರ್ಶಕರಾಗಿದ್ದರು ಎಂದರು.
ಮುಖಂಡರಾದ ಫೀರ್ ಷರೀಫ್ ಮಾತನಾಡಿ, ಹಫೀಜ್ ರಾಜಕಾರಣಕ್ಕೆ ಹಾತೊರೆಯದ ನಿಸ್ವಾರ್ಥ ಸಮಾಜಸೇವಕ. ಈತ ಗಳಿಸಿರುವ ಜನಬಳಕೆಯ ಆತನ ಅಂತಸ್ತು. ಆಮಿಷಗಳಿಗೆ ಒಳಗಾಗದ ಸೌಜನ್ಯಯುತ ವ್ಯಕ್ತಿ ಎಂದರು.ಶಿಕ್ಷಕರಾದ ಹಾರೋನಹಳ್ಳಿ ಸ್ವಾಮಿ, ಎಚ್.ಜಿ. ನಾಗೇಶ್, ಧಾರ್ಮಿಕ ಗುರುಗಳು ಸೇರಿದಂತೆ ಅನೇಕರು ಹಫೀಜ್ ಜೀವನದ ಬಗ್ಗೆ ಸ್ಮರಿಸಿದರು.
ಕಾರ್ಮಿಕ ಮುಖಂಡರಾದ ಡಿ.ಸಿ.ಮಾಯಣ್ಣ, ಅನಂತ ರಾಮು, ಚಲನಚಿತ್ರ ನಟ ಹಾಗೂ ರಂಗಕರ್ಮಿ ಎಸ್.ಆಂಜನೇಯ, ಮುಖಂಡರಾದ ಅಮೀರ್ ಜಾನ್, ಶಶಿಕುಮಾರ್ ಗೌಡ, ಬಸವರಾಜಯ್ಯ, ಕುಂಚ ಕಲಾವಿದರಾದ ಸುಬ್ಬಣ್ಣ, ಮಹಮದ್ ಸಮೀವುಲ್ಲಾ, ಬಿ.ಗುರು, ವಿಷ್ಣು, ಹಲವರು ಹಾಜರಿದ್ದರು.- - - -ಡಿ5-ಬಿಡಿವಿಟಿ1:
ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಹಾಗೂ ತಾಲೂಕು ಕುಂಚ ಕಲಾವಿದರ ಸಂಘ ವತಿಯಿಂದ ಕಲಾವಿದ, ದಿವಂಗತ ಹಫೀಜ್ ಉರ್ ರೆಹಮಾನ್ ಸವಿನೆನಪು ಕಾರ್ಯಕ್ರಮ ನಡೆಯಿತು.