ನರಸಿಂಹರಾಜಪುರ, ಕೇವಲ ಜನಪ್ರಿಯರಾಗುವುದು ಮುಖ್ಯವಲ್ಲ. ಮಾನವರಾಗುವುದು ಸಹ ಮುಖ್ಯ ಎಂದು ರೋಟರಿ ಜಿಲ್ಲೆ 3182ನ ಮಾಜಿ ಜಿಲ್ಲಾ ಗವರ್ನರ್ ಕುಂದಾಪುರದ ಅಭಿನಂದನ್ ಎ.ಶೆಟ್ಟಿ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಕೇವಲ ಜನಪ್ರಿಯರಾಗುವುದು ಮುಖ್ಯವಲ್ಲ. ಮಾನವರಾಗುವುದು ಸಹ ಮುಖ್ಯ ಎಂದು ರೋಟರಿ ಜಿಲ್ಲೆ 3182ನ ಮಾಜಿ ಜಿಲ್ಲಾ ಗವರ್ನರ್ ಕುಂದಾಪುರದ ಅಭಿನಂದನ್ ಎ.ಶೆಟ್ಟಿ ಕರೆ ನೀಡಿದರು.ಶನಿವಾರ ರಾತ್ರಿ ಇಲ್ಲಿನ ಸಹಾರ ಸಮುದಾಯಭವನದಲ್ಲಿ ನಡೆದ ರೋಟರಿ ಕ್ಲಬ್ ಮತ್ತು ಇನ್ನರ್ ವ್ಹೀಲ್ ನ ಪದವಿ ಸ್ವೀಕಾರ ಸಮಾರಂಭದಲ್ಲಿ ರೋಟರಿ ಕ್ಲಬ್ ನೂತನ ಅಧ್ಯಕ್ಷ ಜಿ.ಆರ್.ದಿವಾಕರ, ಕಾರ್ಯದರ್ಶಿ ಮಧು ವೆಂಕಟೇಶ್ ಹಾಗೂ ಇತರ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.ಪ್ರತಿಯೊಬ್ಬರು ಮಾನವರಾದಾಗ ಮಾತ್ರ ಎಲ್ಲವೂ ಸರಿಯಾಗಲು ಸಾಧ್ಯ. ಪ್ರತಿವರ್ಷ ರೋಟರಿಯಲ್ಲಿ ನಾಯಕತ್ವ, ಯೋಜನೆ, ಯೋಚನೆಗಳು ಬದಲಾಗುತ್ತವೆ. ಹೊಸ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಸಮಾಜಕ್ಕೆ ಮಾಡಬೇಕಾದ ಕೆಲಸಗಳು ಬದಲಾಗುವುದಿಲ್ಲ. ಜಗತ್ತಿಗೆ ಶುದ್ಧ ಕುಡಿಯುವ ನೀರು, ಪರಿಸರ, ಆರೋಗ್ಯ, ಶುಚಿತ್ವ ಕಾಪಾಡುವ ಚಿಂತನೆ ಬದಲಾಗುವುದಿಲ್ಲ. ನಮ್ಮ ಪರಿಶ್ರಮ, ಪ್ರಯತ್ನದಿಂದ ಯಶಸ್ಸುಲಭಿಸದೆ. ರೋಟರಿ ಜಗತ್ತಿಗೆ ಶಾಂತಿ, ಇನ್ನೊಬ್ಬರ ಮುಖದಲ್ಲಿ ನಗು ಮೂಡಿಸುವುದನ್ನು ಕಲಿಸುತ್ತದೆ ಎಂದರು.
ಕಾರ್ಯದರ್ಶಿ ರಾಧಿಕ ಅರ್ಜುನ್ ಹಾಗೂ ಇತರ ಇನ್ನರ್ ವ್ಹೀಲ್ ಕ್ಲಬ್ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿದ 318ರ ಡಿಸ್ಟ್ರಿಕ್ಟ್ ಚೇರ್ಮನ್ ಬಾಳೆಹೊನ್ನೂರಿನ ವೈಶಾಲಿ ಕುಡ್ವ ಮಾತನಾಡಿ, ಬೇರೆಯವರಿಗೆ ನಾವು ಏನನ್ನು ನೀಡುತ್ತೇವೆಯೋ ಅದರ ಎರಡರಷ್ಟನ್ನು ನಾವು ಹಿಂದಕ್ಕೆ ಪಡೆಯುತ್ತೇವೆ. ಪ್ರಚಾರಕ್ಕಾಗಿ ಕಾರ್ಯಕ್ರಮ ಮಾಡಬಾರದು. ವೃದ್ಧರಿಗೆ, ಬಡಮಕ್ಕಳಿಗೆ ಅಗತ್ಯವಿದ್ದವರಿಗೆ ಸವಲತ್ತುಗಳನ್ನು ನೀಡಬೇಕು. ವಿಭಿನ್ನಕಾರ್ಯಕ್ರಮಗಳನ್ನು ಆಯೋಜಿಸಬೇಕು. ರೋಟರಿ ಕುಟುಂಬವರನ್ನು ಇನ್ನರ್ ವ್ಹೀಲ್ ಸಂಸ್ಥೆಗೆ ಸೇರಿಸಬೇಕು ಎಂದು ಸಲಹೆ ನೀಡಿದರು.
ರೋಟರಿ ಸಂಸ್ಥೆಯಿಂದ ನೀಡಿದ ಸನ್ಮಾನ ಸ್ವೀಕರಿಸಿದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ರೋಟರಿ ಸಂಸ್ಥೆ ಆರೋಗ್ಯ, ಶಿಕ್ಷಣ ಹಾಗೂ ಬಡವರಿಗೆ ಅನುಕೂಲವಾಗುವ ಜನಪರ ಕಾರ್ಯಕ್ರಮ ನೀಡುತ್ತಿರುವ ಅತ್ಯಂತ ಪ್ರತಿಷ್ಠಿತ ಸಂಸ್ಥೆ ಎಂದರು.
ವಲಯ 6ರ ಜೋನಲ್ ಲೆಪ್ಟಿನೆಂಟ್ ಎಚ್.ವಿ.ಮಂಜುನಾಥ್ ಮಾತನಾಡಿ, ಸರ್ಕಾರ ಮಾಡಲು ಸಾಧ್ಯವಾಗದ ಅನೇಕ ಕೆಲಸಗಳನ್ನು ರೋಟರಿ ಸಂಸ್ಥೆ ಮಾಡುತ್ತಿದೆ. ಸಂಸ್ಥೆಯಿಂದ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ನೂತನ ಅಧ್ಯಕ್ಷ ಜಿ.ಆರ್.ದಿವಾಕರ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಾಹಿತಿ ಭಾಗ್ಯ ನಂಜುಂಡಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ , ಕರುಣಾಲಯ ಆಶ್ರಮಕ್ಕೆ ವ್ಹೀಲ್ ಚೇರ್, ಬಡ ವಿದ್ಯಾರ್ಥಿನಿಗೆ ಸಹಾಯಧನ ನೀಡಲಾಯಿತು.
ಸಭೆಯಲ್ಲಿ, ರೋಟರಿ ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ಎನ್.ಕೆ.ಕಿರಣ್, ನೂತನ ಕಾರ್ಯದರ್ಶಿ ಮಧುವೆಂಕಟೇಶ್, ನಿರ್ಗಮಿತ ಕಾರ್ಯದರ್ಶಿ ಪಿ.ಎಸ್.ವಿದ್ಯಾನಂದಕುಮಾರ್,ಇನ್ನರ್ ವ್ಹೀಲ್ ನೂತನ ಅಧ್ಯಕ್ಷೆ ಬಿಂದು ವಿಜಯನ್, ನಿಕಟಪೂರ್ವ ಅಧ್ಯಕ್ಷೆ ರಶ್ಮಿದಯಾನಂದ್, ನೂತನ ಕಾರ್ಯದರ್ಶಿ ರಾಧಿಕಾ ಅರ್ಜುನ್, ನಿರ್ಗಮಿತ ಕಾರ್ಯದರ್ಶಿ ಶಾಮಲ ಸತೀಶ್, ಪ್ರಿಯ ವಿನಯ್, ಬಿ.ಟಿ.ವಿಜಯಕುಮಾರ್, ಡಾಕಮ್ಮ ಪರಮೇಶ್ವರ್, ಎನ್.ಎಲ್. ಮನೀಶ್,ಮಧು ವೆಂಕಟೇಶ್ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.