ಜನಸಂಖ್ಯಾ ಸ್ಫೋಟದಿಂದ ಸಮಾನ ಹಕ್ಕುಗಳ ಕಲ್ಪಿಸಲಾಗುತ್ತಿಲ್ಲ : ನ್ಯಾ. ಹನುಮಂತಪ್ಪ

KannadaprabhaNewsNetwork | Published : Jul 12, 2024 1:36 AM

ಸಾರಾಂಶ

ಚಿಕ್ಕಮಗಳೂರು, ಸಂವಿಧಾನದ ಆಶಯದಂತೆ ಎಲ್ಲರಿಗೂ ಸಮಾನ ಹಕ್ಕುಗಳ ಅವಕಾಶ ಕಲ್ಪಿಸಲು ಜನಸಂಖ್ಯಾ ಸ್ಫೋಟದಿಂದ ಆಗುತ್ತಿಲ್ಲ ಇದರಿಂದ ಮುಂದಿನ ದಿನಗಳಲ್ಲಿ ಸಾಮಾಜಿಕ ಗಲಭೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ವಿ.ಹನುಮಂತಪ್ಪ ಎಚ್ಚರಿಸಿದರು.

ನಗರದ ಐಡಿಎಸ್‌ಜಿ ಕಾಲೇಜು ಆವರಣದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಂವಿಧಾನದ ಆಶಯದಂತೆ ಎಲ್ಲರಿಗೂ ಸಮಾನ ಹಕ್ಕುಗಳ ಅವಕಾಶ ಕಲ್ಪಿಸಲು ಜನಸಂಖ್ಯಾ ಸ್ಫೋಟದಿಂದ ಆಗುತ್ತಿಲ್ಲ ಇದರಿಂದ ಮುಂದಿನ ದಿನಗಳಲ್ಲಿ ಸಾಮಾಜಿಕ ಗಲಭೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ವಿ.ಹನುಮಂತಪ್ಪ ಎಚ್ಚರಿಸಿದರು.ಗುರುವಾರ ನಗರದ ಐಡಿಎಸ್‌ಜಿ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರಕ್ಷಕ ಇಲಾಖೆ, ವಾರ್ತಾ ಹಾಗೂ ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಜನಸಂಖ್ಯೆ ಹೆಚ್ಚಳ ಒಂದು ರೀತಿ ಸಂಪತ್ತು, ಆದರೆ, ಅದಕ್ಕೆ ಬೇಕಾದ ಭೂಮಿ ಮಾತ್ರ ಒಂದೇ ಆಗಿದೆ. ಜನಸಂಖ್ಯೆಗನು ಗುಣ ವಾಗಿ ಭೂಮಿ ಅಭಿವೃದ್ಧಿ ಹೊಂದುತ್ತಿಲ್ಲ, ರಾಜ್ಯದಲ್ಲಿ ಆಹಾರ ಉತ್ಪಾದನೆ ಕಡಿಮೆಯಾಗುತ್ತಿದೆ. ಇಂದು ಹೊಸ ಹೊಸ ಆವಿಷ್ಕಾರಗಳಿಗೆ ತಕ್ಕಂತೆ ಆಹಾರ ಉತ್ಪಾದನೆ ಸಾಧ್ಯವಾಗಿದ್ದರೂ ಭೂಮಿ ಕೊರತೆ ಯಿಂದ ಅದು ಸಾಧ್ಯವಾಗುತ್ತಿಲ್ಲ, ಮನುಷ್ಯನಿಗೆ ಎಲ್ಲಕ್ಕಿಂತ ಮೊದಲು ಬೇಕಿರುವುದು ಆಹಾರ. ಉತ್ಪಾದನೆ ಅಗತ್ಯವಾಗಿ ಆಗಬೇಕು, ಜನಸಂಖ್ಯೆ ಹೆಚ್ಚಿದಷ್ಟು ಸಮಸ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಯುವ ಜನಾಂಗ ಎಚ್ಚರಿಕೆಯಿಂದ ಎಲ್ಲರ ಅವಶ್ಯಕತೆ ಪೂರೈಸಲು ಮುಂದಾಗ ಬೇಕೆಂದರು.

ಜನಸಂಖ್ಯಾ ಸ್ಫೋಟದಿಂದ ಭೂ ವ್ಯಾಜ್ಯಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಮಾಡುತ್ತಿದೆ. ಸರ್ಕಾರ ಎಷ್ಟೇ ಕಾಯ್ದೆ ನಿಯಮಗಳನ್ನು ಈ ರೀತಿ ಕಾರ್ಯಕ್ರಮ ರೂಪಿಸಿದರೂ ನಾಗರಿಕರು ಬದಲಾಗದ ಹೊರತು ಇವು ಪುಸ್ತಕದಲ್ಲಿರುವ ಯೋಜನೆಗಳಾಗುತ್ತವೆ. ಫಲಪ್ರದವಾಗುವುದು ಕಡಿಮೆ ಎಂದು ತಿಳಿಸಿದರು.

ಸರ್ಕಾರದ ಉದ್ದೇಶ ಸದುಪಯೋಗಪಡಿಸಿಕೊಳ್ಳುವಲ್ಲಿ ಯುವ ಜನತೆ ಆಲೋಚಿಸಬೇಕು, ಜೊತೆಗೆ ಆಹಾರ, ನೀರು, ಬಟ್ಟೆ, ವಸತಿ, ನಿರುದ್ಯೋಗ, ಅರಣ್ಯ ನಾಶ ಮುಂತಾದ ಸಮಸ್ಯೆ ತಡೆಯುವಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಬೇಕು ಎಂದರು.ಉಪನ್ಯಾಸ ನೀಡಿದ ಅರ್ಥಶಾಸ್ತ್ರ ಸ್ನಾತ್ತಕೋತ್ತರ ವಿಭಾಗದ ಪ್ರೊ.ಲಕ್ಷ್ಮಿಕಾಂತ್, ಜನಸಂಖ್ಯಾ ಸ್ಫೋಟದಿಂದ ಇಡೀ ವಿಶ್ವ ಹಾಗೂ ರಾಷ್ಟ್ರವನ್ನು ಸಮಸ್ಯೆಗಳು ಕಿತ್ತು ತಿನ್ನುತ್ತಿವೆ. ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ಜನಸಂಖ್ಯೆ ಹೆಚ್ಚಳ ದಿಂದ ಬಡತನ, ನಿರುದ್ಯೋಗ, ಹಸಿವನ್ನು ಸ್ವತಂತ್ರ್ಯ ಬಂದು ಏಳುವರೆ ದಶಕಗಳಾದರೂ ನಿವಾರಿಸಲು ಸಾಧ್ಯವಾಗಿಲ್ಲ ಎಂದು ವಿಷಾಧಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಜನಪರ ಕಾರ್ಯಕ್ರಮ ಆಯೋಜಿಸಿದ್ದರೂ ಜನಸಂಖ್ಯಾ ಸ್ಫೋಟದಿಂದ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತಿಲ್ಲ ಎಂದರು.

ವಿಶ್ವ ಜನಸಂಖ್ಯಾ ದಿನಾಚರಣೆ ಮುಖ್ಯವಲ್ಲ, ಜನಸಂಖ್ಯೆ ತಡೆಗೆ ಅಗತ್ಯ ಕ್ರಮ ಅನುಸರಿಸ ಬೇಕಾಗಿರುವುದು ಅನಿವಾರ್ಯ. ವಿಶ್ವದಲ್ಲಿ 800 ಕೋಟಿ ಜನಸಂಖ್ಯೆ ಇದ್ದರೆ, ಭಾರತ 144.2 ಕೋಟಿ ಜನಸಂಖ್ಯೆ ಹೊಂದಿದ್ದು, ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.

ಜನಸಂಖ್ಯಾ ಸ್ಫೋಟದಿಂದ ಭಾರತದ ಅಭಿವೃದ್ಧಿಗೆ ಮಾರಕವಾಗಿದೆ. ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕವಾಗಿ ಏನೂ ಸಾಧಿಸಲಾಗದ ಪರಿಸ್ಥಿತಿಗೆ ಬಂದಿದ್ದೇವೆ ಎಂದು ವಿಷಾಧಿಸಿದರು.ಐಡಿಎಸ್‌ಜಿ ಕಾಲೇಜಿನ ಪ್ರಾಂಶುಪಾಲರಾದ ಕೆ.ಸಿ. ಚಾಂದಿನಿ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್‌ಬಾಬು, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಗೀತಾ ಉಪಸ್ಥಿತರಿದ್ದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿಕಲಾ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಎಂ.ಲೋಕೇಶ್ , ಲಲಿತ, ಸತೀಶ್ ಇದ್ದರು.

11 ಕೆಸಿಕೆಎಂ 7ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜು ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ನ್ಯಾ. ಹನುಮಂತಪ್ಪ ಉದ್ಘಾಟಿಸಿ ಮಾತನಾಡಿದರು. ಕೆ.ಸಿ. ಚಾಂದಿನಿ, ಪ್ರೋ. ಲಕ್ಷ್ಮೀಕಾಂತ್‌, ಡಾ. ಅಶ್ವತ್‌ಬಾಬು, ಡಾ. ಗೀತಾ ಇದ್ದರು.

Share this article