ಕೃಷಿಯಿಂದ ₹2.75 ಕೋಟಿ ಸಂಪಾದಿಸಿದ ಪ್ರಜ್ವಲ್‌ ರೇವಣ್ಣ: ನಾಮಪತ್ರದಲ್ಲಿ ಬಹಿರಂಗ

KannadaprabhaNewsNetwork |  
Published : Mar 29, 2024, 12:48 AM IST
28ಎಚ್ಎಸ್ಎನ್16 : ಜೆಡಿಎಸ್‌ ಶಾಸಕರೊಂದಿಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ಪ್ರಜ್ವಲ್‌ ರೇವಣ್ಣ. | Kannada Prabha

ಸಾರಾಂಶ

ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಕೃಷಿಯಿಂದ ಕಳೆದ 5 ವರ್ಷಗಳಲ್ಲಿ 2.75 ಕೋಟಿ ರು. ಸಂಪಾದಿಸಿದ್ದೇನೆ ಎಂದು ನಾಮಪತ್ರದಲ್ಲಿ ಸ್ವಯಂ ಘೋಷಿಸಿಕೊಂಡಿದ್ದಾರೆ.

ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಸಾಂಕೇತಿಕ ನಾಮಪತ್ರ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಹಾಸನ

ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಕೋಟಿಯ ಕುಳ ಎನ್ನುವುದು ನಾಮಪತ್ರದೊಂದಿಗೆ ಅವರು ಸಲ್ಲಿಸಿರುವ ಆಸ್ತಿ ವಿವರದಿಂದ ಬಹಿರಂಗವಾಗಿದೆ. ಜತೆಗೆ ಕೃಷಿಯಿಂದ ಕಳೆದ 5 ವರ್ಷಗಳಲ್ಲಿ 2.75 ಕೋಟಿ ರು. ಸಂಪಾದಿಸಿದ್ದೇನೆ ಎಂದು ಸ್ವಯಂ ಘೋಷಿಸಿಕೊಂಡಿದ್ದಾರೆ.

40 ಕೋಟಿ, 94 ಲಕ್ಷ ರು. ಮೌಲ್ಯದ ಚರ, ಸ್ಥಿರಾಸ್ಥಿ ಹೊಂದಿರುವ ಪ್ರಜ್ವಲ್ 5,44 ಕೋಟಿ ರು. ಚರ, 35.40 ಕೋಟಿ ರು. ಸ್ಥಿರ ಸೇರಿ 40.94 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ. ಸದ್ಯ 9.29 ಲಕ್ಷ ರು. ನಗದು ಹೊಂದಿರುವುದಾಗಿ ಪ್ರಜ್ವಲ್‌ ಪ್ರಮಾಣಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿ 56 ಲಕ್ಷ ರು. ನಗದು ಹೊಂದಿರುವ ಮೈತ್ರಿ ಅಭ್ಯರ್ಥಿ ಕಳೆದ ಐದು ವರ್ಷದಲ್ಲಿ ಕೃಷಿಯಿಂದ 2.75 ಕೋಟಿ ರು. ಆದಾಯ ಗಳಿಸಿದ್ದಾರೆ.

ಕೃಷಿಯೇತರ ಮೂಲದಿಂದ 1.33 ಕೋಟಿ ರು. ಆದಾಯ ಗಳಿಕೆಯಾಗಿದೆ. 31 ಹಸು, ನಾಲ್ಕು ಎತ್ತು, ಒಂದು ಟ್ರ್ಯಾಕ್ಟರ್ ಹೊಂದಿರುವ ಪ್ರಜ್ವಲ್ ರೇವಣ್ಣ ಬೆಂಗಳೂರು, ಮೈಸೂರು ಸೇರಿ ವಿವಿಧೆಡೆ ವಾಣಿಜ್ಯ ಕಟ್ಟಡ, ಹೊಳೆನರಸೀಪುರ ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ ಆಸ್ತಿ ಹೊಂದಿದ್ದಾರೆ. ಇವರು ಅತ್ತೆ ಅನುಸೂಯರಿಂದ 22 ಲಕ್ಷ ರು., ಅತ್ತೆ ಶೈಲಜಾರಿಂದ 10 ಲಕ್ಷ ರು. ಸಾಲ, ಅಜ್ಜಿ ಚನ್ನಮ್ಮರಿಂದಲೂ 23 ಲಕ್ಷ ರು. ಸಾಲ, ಕುಪೇಂದ್ರ ರೆಡ್ಡಿಯಿಂದ ಒಂದು ಲಕ್ಷ ರು. ಸಾಲ, ತಂದೆ ರೇವಣ್ಣರಿಂದ 86 ಲಕ್ಷ, ಸಹೋದರ ಡಾ.ಸೂರಜ್‌ ರೇವಣ್ಣ ಅವರಿಂದ 1 ಕೋಟಿ ರು. ಸಾಲ ಸೇರಿ ಒಟ್ಟು 4.48 ಕೋಟಿ ರು. ಸಾಲ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಸರ್ಕಾರಕ್ಕೆ 3.04 ಕೋಟಿ ರು. ತೆರಿಗೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿರುವ ಪ್ರಜ್ವಲ್‌ ಅವರು ತೆರಿಗೆ ಸಲ್ಲಿಕೆ ಬಗ್ಗೆ ಕಾನೂನು ಹೋರಾಟ ನಡೆಸುತ್ತಿರುವ ಬಗ್ಗೆಯೂ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಹೊಂದಿರುವ ಪ್ರಜ್ವಲ್ 67 ಲಕ್ಷ ರು. ಮೌಲ್ಯದ 1 ಕೆಜಿ 100 ಗ್ರಾಂ ಚಿನ್ನ, 17.48 ಲಕ್ಷ ರು. ಮೌಲ್ಯದ 23 ಕೆಜಿ ಬೆಳ್ಳಿ ಹಾಗೂ 1.90 ಲಕ್ಷ ರು. ಮೌಲ್ಯದ ವಜ್ರದ ಆಭರಣ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಜೆಡಿಎಸ್‌ ಶಾಸಕರೊಂದಿಗೆ ಹಾಸನ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ಪ್ರಜ್ವಲ್‌ ರೇವಣ್ಣ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ