ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ವಿಶೇಷ ಕಾಳಜಿ ಹಾಗೂ ಆಸಕ್ತಿಯಿಂದ ೮೦೦ಕ್ಕೂ ಹೆಚ್ಚು ಜಿಲ್ಲಾ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ೧೦ ರಿಂದ ೧೮ ವರ್ಷ ವಯಸ್ಸಿನ ಕಿಶೋರಿ ವಿದ್ಯಾರ್ಥಿನಿಯರಿಗೆ ಆರೋಗ್ಯ, ಸ್ವಚ್ಛತೆ ಕುರಿತು ಸಮಯೋಚಿತ ಮಾಹಿತಿ ನೀಡಿ ಅವರನ್ನು ಯಶಸ್ಸಿನ ದಾರಿಗೆ ಕೊಂಡೋಯ್ಯುವ ಮಹತ್ವಾಕಾಂಕ್ಷೆಯೊಂದಿಗೆ ಪ್ರಾಣಸಖಿ ಕಾರ್ಯಕ್ರಮ ರೂಪಿತವಾಗಿದೆ ಎಂದರು.
ಹದಿಹರೆಯದವರಲ್ಲಿ ಇರಬಹುದಾದ ತಪ್ಪು ಕಲ್ಪನೆಗಳನ್ನು ನಿವಾರಿಸಿ ರಕ್ತಹೀನತೆ, ಅಪೌಷ್ಠಿಕತೆ, ಮುಟ್ಟಿನ ಸಂದರ್ಭದಲ್ಲಿ ವಹಿಸಬೇಕಾದ ಸ್ವಚ್ಛತೆ, ಮಾನಸಿಕ ಆರೋಗ್ಯ, ಸ್ವಚ್ಛ ಮೂಲ ಸೌಕರ್ಯಗಳ ಬಳಕೆ ಮಾಡುವ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಅವಶ್ಯಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಆರೋಗ್ಯವನ್ನು ಸಧೃಢಗೊಳಿಸುವ ಮಹತ್ತರ ಉದ್ದೇಶದೊಂದಿಗೆ ಜಿಲ್ಲೆಯಲ್ಲಿ ಪ್ರಾಣಸಖಿ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ.ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಡಳಿತ, ವಿವಿಧ ಸಂಸ್ಥೆಗಳು ಕೈಗೊಂಡಿರುವ ಪ್ರಾಣಸಖಿ ವಿಶೇಷ ಆರೋಗ್ಯ ಯೋಜನೆಯ ಕಾರ್ಯಾಗಾರದಲ್ಲಿ ವರ್ಚುವಲ್ ಮೂಲಕ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪಾಲ್ಗೊಂಡು ಅಗತ್ಯ ಮಾರ್ಗದರ್ಶನ ಮಾಡಿದರು.
ಶಾಲಾ ಕಾಲೇಜು ಹಂತದಲ್ಲಿ ಶಿಕ್ಷಣಾಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರು, ಇನ್ನಿತರ ಸಿಬ್ಬಂದಿ ಹೆಚ್ಚು ಆಸಕ್ತಿಯಿಂದ ಹೆಣ್ಣುಮಕ್ಕಳ ಆರೋಗ್ಯ ಸ್ವಚ್ಛತೆ ಕಾಪಾಡುವ ಅತ್ಯಂತ ಮಹತ್ವದ ಪ್ರಾಣಸಖಿ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವ ಜವಾಬ್ದಾರಿ ನಿರ್ವಹಿಸಬೇಕಿದೆ. ಹದಿಹರೆಯದವರ ಸಮಗ್ರ ಆರೋಗ್ಯವನ್ನು ಸಶಕ್ತಗೊಳಿಸುವ ಗುರಿಯೊಂದಿಗೆ ಹಮ್ಮಿಕೊಂಡಿರುವ ಜಿಲ್ಲೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಯೋಜನೆಗೆ ಬೆಂಬಲ ನೀಡುವುದು ಅತ್ಯಾವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಾಮಚಂದ್ರ ರಾಜೇ ಅರಸ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪುಟ್ಟ ಗೌರಮ್ಮ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ, ವಿಜಿಕೆಕೆಯ ಡಾ. ತಾನಿಯಾ ಶೇಷಾದ್ರಿ, ಐಹೆಚ್ಸಿಆರ್ಎಫ್ ಯೋಜನೆಯ ಮಲ್ಲಿಕಾರ್ಜುನ್, ಧನಲಕ್ಷ್ಮಿ, ಇನ್ನಿತರರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.