ಕನ್ನಡಪ್ರಭ ವಾರ್ತೆ ಬೇಲೂರು
ಕಳೆದ ೧೦ ತಿಂಗಳಿನಿಂದ ಅಧ್ಯಕ್ಷರಾಗಿ ಆಡಳಿತ ನಡೆಸುತ್ತಿದ್ದ ಗೀತಾ ಲಕ್ಷ್ಮಣ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ನೂತನ ಅಧ್ಯಕ್ಷೀಯ ಸ್ಥಾನಕ್ಕೆ ಜಿ.ಆರ್ ಪ್ರವೀಣ್ ಗೌಡ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಗುರುಮೂರ್ತಿಯವರು ಅಧ್ಯಕ್ಷರನ್ನಾಗಿ ಘೋಷಿಸಿದ್ದರಿಂದ ಅವಿರೋಧ ಆಯ್ಕೆಯಾದರು.
ಈ ವೇಳೆ ಅಧ್ಯಕ್ಷ ಜಿ.ಆರ್ ಪ್ರವೀಣ್ ಗೌಡ ಮಾತನಾಡಿ, ನಾನು ಎರಡನೇ ಬಾರಿಗೆ ನಿರ್ದೇಶಕನಾಗಿ ಆಯ್ಕೆಯಾಗಿ ಈ ಬಾರಿ ಪ್ರಥಮ ಬಾರಿಗೆ ಅಧ್ಯಕ್ಷನಾಗಿದ್ದೇನೆ. ಹಿರಿಯ ನಿರ್ದೇಶಕರು ಹಾಗೂ ನಿಕಟಪೂರ್ವ ಅಧ್ಯಕ್ಷರ ಸಹಕಾರ ಪಡೆದು ರೈತರ ಪರವಾಗಿ ನಿಷ್ಕಲ್ಮಷ ಮನಸ್ಸಿನಿಂದ ಕಾರ್ಯಭಾರ ಮಾಡುತ್ತೇನೆ ಎಂದರು.ನಿರ್ದೇಶಕ ಕೃಷ್ಣಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೆಲೆ ಏರಿಕೆಯಂತಹ ಸಮಸ್ಯೆ ರೈತರನ್ನು ಜರ್ಜರಿತರನ್ನಾಗಿ ಮಾಡಿದೆ. ಆದ್ದರಿಂದ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ, ಕೃಷಿ ಸಂಬಂಧ ದೊರಕುವ ಯೋಜನೆಗಳನ್ನು ಸಮರ್ಪಕವಾಗಿ ರೈತರಿಗೆ ತಲುಪಿಸುವ ಕಾರ್ಯವನ್ನು ನೂತನ ಅಧ್ಯಕ್ಷರ ಜೊತೆಗೂಡಿ ಮಾಡುತ್ತೇವೆ ಎಂದರು.