ಮೋದಿ ಆಯಸ್ಸು ವೃದ್ಧಿಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ

KannadaprabhaNewsNetwork | Published : May 3, 2024 1:00 AM

ಸಾರಾಂಶ

ರಾಮನಗರ: ಪ್ರಧಾನಿ ನರೇಂದ್ರ ಮೋದಿಯವರ ಆಯಸ್ಸು ವೃದ್ಧಿಗಾಗಿ ಪ್ರಾರ್ಥಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳು ನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ರಾಮನಗರ: ಪ್ರಧಾನಿ ನರೇಂದ್ರ ಮೋದಿಯವರ ಆಯಸ್ಸು ವೃದ್ಧಿಗಾಗಿ ಪ್ರಾರ್ಥಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳು ನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಪ್ರಧಾನಿ ಮೋದಿ ಸಾವಿನ ಕುರಿತು ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಹೇಳಿಕೆ ವಿಚಾರ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ರಾಮನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಮೋದಿಯವರ ದೀರ್ಘಾಯುಷ್ಯ ಕೋರಿ ಪ್ರಾರ್ಥಿಸಿದರು.

ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗೋದೇ ಇಲ್ವಾ ಎಂಬುದು ಶಾಸಕ ರಾಜು ಕಾಗೆ ಹೇಳಿಕೆ ಅಲ್ಲ. ರಾಹುಲ್ ಗಾಂಧಿ ಮನಸ್ಥಿತಿ ಕಾಗೆ ಬಾಯಲ್ಲಿ ಅಪಶಕುನ ನುಡಿಸಿದೆ ಎಂದು ಪದಾಧಿಕಾರಿಗಳು ಕಿಡಿಕಾರಿದರು.

ಸಾವುಗಳನ್ನೇ ಆಧರಿಸಿ ಅಧಿಕಾರ ಗಳಿಸಿದ ಕಾಂಗ್ರೆಸ್ಸಿಗರು, ಅಮೂಲ್ಯ ಜೀವಗಳ ಸಾವುಗಳಿಗಾಗಿ ಚಡಪಡಿಸುತ್ತಾರೆ. ಇದು ಕಾಂಗ್ರೆಸ್ ಪಕ್ಷದ ಹೀನ ಸಂಸ್ಕೃತಿಯ ಧ್ಯೋತಕವಾಗಿದೆ. ಇದು ರಾಜು ಕಾಗೆಯವರ ಹೇಳಿಕೆಯಂತಿಲ್ಲ. ಇದು ರಾಹುಲ್ ಗಾಂಧಿಯವರ ಮತ್ತು ಕಾಂಗ್ರೆಸ್ಸಿನ ಮನಸ್ಥಿತಿ. ಕಾಂಗ್ರೆಸ್ಸಿನ ಸಂಸ್ಕೃತಿಗೆ ಈ ಮೂಲಕ ಕೈಗನ್ನಡಿ ಹಿಡಿದಂತಾಗಿದೆ. ಅಷ್ಟಕ್ಕೂ ಮೋದಿಯವರ ಸಾವನ್ನು ಕಾಂಗ್ರೆಸ್ ಏಕೆ ಬಯಸುತ್ತಿದೆ ಎಂದು ಪ್ರಶ್ನಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಎನ್.ಪುಷ್ಪಲತಾ, 370ನೇ ವಿಧಿ ರದ್ದು ಮಾಡಿ ಜಮ್ಮು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿ ಪರಿವರ್ತಿಸಿದ್ದಕ್ಕೆ ಅವರು ಸಾಯಬೇಕೇ? ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ೬ ಸಾವಿರ ರುಪಾಯಿ ನೀಡಿ ರೈತರ ಬದುಕನ್ನು ಹಸನಾಗಿ ಮಾಡಿದ್ದಕ್ಕೆ ಅವರು ಸಾಯಬೇಕೇ? ಮಹಿಳೆಯರಿಗೆ ೩೩ ಶೇಕಡಾ ಮೀಸಲಾತಿ ಕೊಟ್ಟದ್ದಕ್ಕೆ ಅವರು ಸಾಯಬೇಕೇ? ಜನ್ ಧನ್ ಬ್ಯಾಂಕ್ ಖಾತೆಗಳ ಮೂಲಕ ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಮಾಡಿ ಕಾಂಗ್ರೆಸ್ಸಿನ ಭ್ರಷ್ಟಾಚಾರ ತಪ್ಪಿಸಿ ಪ್ರತಿಯೊಂದು ರುಪಾಯಿ ಫಲಾನುಭವಿಯ ಖಾತೆಗೆ ಸೇರುವಂತೆ ಮಾಡಿದ್ದಕ್ಕಾಗಿ ಅವರ ಸಾವನ್ನು ಕಾಂಗ್ರೆಸ್ ಬಯಸುತ್ತದೆಯೇ? ಕೋಟ್ಯಂತರ ಶೌಚಾಲಯಗಳನ್ನು ನಿರ್ಮಿಸಿಕೊಟ್ಟು ಮಹಿಳೆಯರ ಘನತೆ ಹೆಚ್ಚಿಸಿದ್ದಕ್ಕಾಗಿ ಮೋದಿಜೀ ಅವರ ಅಂತ್ಯವನ್ನು ಕಾಂಗ್ರೆಸ್ಸಿಗರು ಬಯಸುತ್ತಾರಾ? ವಿಶ್ವದ ೧೧ನೇ ಆರ್ಥಿಕ ಶಕ್ತಿಯಾಗಿದ್ದ ನಮ್ಮ ದೇಶವನ್ನು ೫ನೇ ಆರ್ಥಿಕ ಶಕ್ತಿಯಾಗಿ ಮಾಡಿದ್ದಕ್ಕಾಗಿ ಈ ಕೆಟ್ಟದ್ದನ್ನು ಕಾಂಗ್ರೆಸ್ಸಿಗರು ಬಯಸುತ್ತಾರಾ ಎಂದು ಪ್ರಶ್ನಿಸಿದರು.

ನೇಹಾ ಹಿರೇಮಠರ ಭೀಕರ ಹತ್ಯೆ ಕರ್ನಾಟಕಕ್ಕೆ ಕಪ್ಪು ಚುಕ್ಕಿ. ಇದನ್ನು ಮಹಿಳೆಯರು ಸಹಿಸಲಸಾಧ್ಯ. ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯ ವಿವಸ್ತ್ರ ಪ್ರಕರಣ, ಹಾವೇರಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತರಲ್ಲ ಎಂದು ತೋರಿಸಿದೆ ಎಂದು ಹೇಳಿದರು.

ರಾಜ್ಯದ ಕಾಂಗ್ರೆಸ್ ಸಚಿವ ಆರ್.ಬಿ.ತಿಮ್ಮಾಪುರ ಅವರು ಪ್ರಜ್ವಲ್ ರೇವಣ್ಣ ಮತ್ತು ಭಗವಾನ್ ಶ್ರೀಕೃಷ್ಣರನ್ನು ಹೋಲಿಸಿ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅಯೋಧ್ಯೆಯ ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನಪತ್ರವನ್ನು ತಿರಸ್ಕರಿಸಿ ಅಪಮಾನ ಮಾಡಿತ್ತು. ಇದೀಗ ಭಗವಾನ್ ಶ್ರೀಕೃಷ್ಣನಿಗೆ ಅವಮಾನ ಮಾಡುವಂತೆ ಮಾತನಾಡುತ್ತಿದೆ. ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಎಂದು ಟೀಕಿಸಿದರು.

ರಾಹುಲ್ ಗಾಂಧಿಯವರು ಪಾಕಿಸ್ತಾನದ ಪರವಾಗಿ ಮಾತನಾಡುತ್ತಿದ್ದಾರೆ. ಇದು ಪಾಕಿಸ್ತಾನದ ಮಾಜಿ ಸಚಿವ ಫಹಾದ್ ಹುಸೇನ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಮೂಲಕ ವೈರಲ್ ಆಗಿದೆ. ಕಾಂಗ್ರೆಸ್ ಕಾ ಹಾತ್ ಪಾಕಿಸ್ತಾನ್ ಕೇ ಸಾಥ್ ಎಂಬುದು ಇದರಿಂದ ಸ್ಪಷ್ಟ. ಪಾಕ್ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ತೋರಿಸುವ ಪಕ್ಷ ಕಾಂಗ್ರೆಸ್ ಎಂಬುದು ಸ್ಪಷ್ಟವಾಗಿದೆ ಎಂದು ಪುಷ್ಪಲತಾ ಟೀಕಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಸಾನ್ವಿ ಗುರು, ಮಹದೇವಿ, ಗಿರಿಜಾ ಪ್ರಸಾದ್ , ಮೀನಾ, ಸಂಗೀತಾ, ಯಲ್ಲಮ್ಮ, ದೇವಿಕಾ, ಜಯಶೀಲಾ, ಶಿವಾನಂದ, ಸಿದ್ದಲಿಂಗಮೂರ್ತಿ ಮತ್ತಿತರರು ಹಾಜರಿದ್ದರು.

ಪೊಟೋ ೨ಕೆಆರ್ ಎಂಎನ್೧ .ಜೆಪಿಜಿ: ರಾಮನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಪ್ರಧಾನಿ ಮೋದಿ ಆಯಸ್ಸು ವೃದ್ಧಿಗಾಗಿ ಪ್ರಾರ್ಥಿಸಿ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿದರು.

Share this article