ರಾಜೀಸಂಧಾನದ ಮೂಲಕ ವ್ಯಾಜ್ಯ ಇತ್ಯರ್ಥ ಪಡಿಸಿಕೊಂಡರೆ ಅದರಿಂದಾಗುವ ಪ್ರಯೋಜನದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಶ್ರೇಣಿ ನ್ಯಾ. ಸಿದ್ದರಾಮ ಟಿ.ಪಿ. ಹೇಳಿದರು.
ಮಾ.8 ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ, ನಗರದ ನ್ಯಾಯಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಾರ್ಚ್ 8 ರಂದು ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಗುತ್ತಿದೆ. ರಾಜೀಸಂಧಾನದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳುವುದರಿಂದ ಸಂಬಂಧ ಉತ್ತಮವಾಗಿ ಉಳಿಯಲು ನೆರವಾಗುತ್ತದೆ ಎಂದರು.
ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿ ಆಗಬಹುದಾದ ಪ್ರಕರಣಗಳಾದ ಅಪಘಾತ, ಪರಿಹಾರ ವ್ಯಾಜ್ಯ, ಆಸ್ತಿ ಸಂಬಂಧಿತ, ಕೌಟುಂಬಿಕ ಪ್ರಕರಣ, ವಿಮೆ, ಹಣಕಾಸು ವ್ಯಾಜ್ಯ, ಸಣ್ಣ ಪುಟ್ಟ ಸಿವಿಲ್ ವ್ಯಾಜ್ಯ, ಲೇವಾದೇವಿ, ಬಾಡಿಗೆ, ಅಪಘಾತ ಪರಿಹಾರ, ವಾಹನ ವಿಮಾ ಕಂತು ಬಾಕಿ, ಭೂಮಿ ಖರೀದಿ ಸಂಬಂಧಿತ ಪ್ರಕರಣಗಳನ್ನು ರಾಜಿಗಾಗಿ ನಿಗದಿಪಡಿಸಲಾಗಿದೆ. ನ್ಯಾಯಾಲಯಕ್ಕೆ ಬರದೇ ಒಂದೇ ಒಂದು ಬಾರಿಗೆ ನ್ಯಾಯಸಮ್ಮತವಾಗಿ ರಾಜಿ ಇಲ್ಲವೆ ಸಂಧಾನದ ಮೂಲಕ ಇವುಗಳನ್ನು ಹೆಚ್ಚಿನ ಶುಲ್ಕವಿಲ್ಲದೆ ಎರಡೂ ಕಡೆಯವರು ಪರಿಹರಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳುವಂತೆ ನ್ಯಾಯಾಧೀಶರು ತಿಳಿಸಿದರು.
ಪ್ರಧಾನ ನ್ಯಾ. ಶೋಭಾ ಮಾತನಾಡಿ, ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಎಲ್ಲರೂ ಕಾರ್ಯಪ್ರವೃತ್ತರಾಗೋಣ ಎಂದರು. ಜೆಎಂಎಫ್ಸಿ ನ್ಯಾಯಾಲಯದ ನ್ಯಾ. ಬಸವರಾಜ, ಆರ್ಥಿಕ, ಸಾಮಾಜಿಕವಾಗಿ ದುರ್ಬಲರಾದವರಿಗೆ ಕಾನೂನು ನೆರವು ಹಾಗೂ ಲೋಕ ಅದಾಲತ್ ನಡೆಸುವ ಮೂಲಕ ಪ್ರಕರಣ ಶೀಘ್ರ ಇತ್ಯರ್ಥ ಪಡಿಸುವ ಕಾರ್ಯ ಮಾಡುತ್ತಿದೆ ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ಜೈಲಾಲ್ ತೋಟದಮನಿ, ಪ್ಯಾನಲ್ ವಕೀಲರಾದ ಸಿದ್ದು ಪಸ್ಪೂಲ್, ಬಿಲ್ಕಿಸ್ ಫಾತಿಮಾ, ಆಯುಷ್ ಪರ್ವೀನ್, ದೇವರಾಜ್ ಚೆಟ್ಟಿ, ಎಸ್.ಎಸ್. ಕಂಚಿ ಇದ್ದರು.
---
1ವೈಡಿಆರ್16: ಶಹಾಪುರ ನಗರದ ನ್ಯಾಯಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಸಿದ್ದರಾಮ ಟಿ.ಪಿ. ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.