ಪೊಲೀಸರು ವಾಟ್ಸಾಪಲ್ಲಿ ನೋಟಿಸ್‌ ಕೊಡುವಂತಿಲ್ಲ! - ಬೆಂಗಳೂರು ಪೊಲೀಸರು ನೀಡಿದ್ದ ನೋಟಿಸ್‌ ಹೈಕೋರ್ಟಲ್ಲಿ ರದ್ದು

Published : Mar 01, 2025, 11:54 AM IST
KSRP

ಸಾರಾಂಶ

ಹಣಕಾಸು ವಂಚನೆ ಆರೋಪ ಎದುರಿಸುತ್ತಿರುವ ವಿದ್ಯಾರ್ಥಿಯೊಬ್ಬನಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿ ಪೊಲೀಸರು ವಾಟ್ಸಾಪ್‌ ಮೂಲಕ ಜಾರಿಗೊಳಿಸಿದ್ದ ನೋಟಿಸ್ ಅ​ನ್ನು ಹೈಕೋರ್ಟ್ ರದ್ದುಪಡಿಸಿದೆ.

 ಬೆಂಗಳೂರು : ಹಣಕಾಸು ವಂಚನೆ ಆರೋಪ ಎದುರಿಸುತ್ತಿರುವ ವಿದ್ಯಾರ್ಥಿಯೊಬ್ಬನಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿ ಪೊಲೀಸರು ವಾಟ್ಸಾಪ್‌ ಮೂಲಕ ಜಾರಿಗೊಳಿಸಿದ್ದ ನೋಟಿಸ್ ಅ​ನ್ನು ಹೈಕೋರ್ಟ್ ರದ್ದುಪಡಿಸಿದೆ.

ವಾಟ್ಸಾಪ್‌ ಮೂಲಕ ತಮಗೆ ನಗರದ ಆಡುಗೋಡಿ ಠಾಣಾ ಪೊಲೀಸರು ನೀಡಿದ್ದ ನೋಟಿಸ್‌ ಪ್ರಶ್ನಿಸಿ ತಮಿಳುನಾಡು ಮೂಲದ ವಿದ್ಯಾರ್ಥಿ ಪವನ್​ ಕುಮಾರ್​ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಸ್​.ಆರ್​ .ಕೃಷ್ಣಕುಮಾರ್​ ಅವರ ಪೀಠ, ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 (ಬಿಎನ್ಎಸ್ಎಸ್) ಅಥವಾ ಹಿಂದಿನ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ವಾಟ್ಸಾಪ್‌ ಮೂಲಕ ನೋಟಿಸ್ ಜಾರಿ ಮಾಡುವುದಕ್ಕೆ ಅವಕಾಶವಿಲ್ಲ. ಈ ಕುರಿತು ಸುಪ್ರೀಂಕೋರ್ಟ್ ಆದೇಶಿಸಿದೆ ಎಂದು ಸ್ಪಷಪಡಿಸಿದೆ.

ಅಲ್ಲದೆ, ಅರ್ಜಿದಾರನಿಗೆ ವಾಟ್ಸಾಪ್‌ ಮೂಲಕ ಜಾರಿ ಮಾಡಿದ ನೋಟಿಸ್‌ ರದ್ದುಪಡಿಸಿರುವ ನ್ಯಾಯಪೀಠ, ಪ್ರಕರಣ ಸಂಬಂಧ ಹೊಸದಾಗಿ ವಿಚಾರಣಾ ಪ್ರಕ್ರಿಯೆ ಆರಂಭಿಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಿದೆ.

ಪ್ರಕರಣದ ವಿವರ:

ಆಡುಗೋಡಿಯಲ್ಲಿ ವಾಸವಿರುವ ಶ್ರೀನಿವಾಸ್​ ರಾವ್​ ಎಂಬುವರಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ಅರ್ಜಿದಾರ ಸಲಹೆ ನೀಡಿದ್ದರು. ಅದಕ್ಕಾಗಿ ಒಂದು ವಾಟ್ಸಾಪ್‌ ಗ್ರೂಪ್​ಗೆ ಸೇರಿದ ಬಳಿಕ ಕೆಲವು ಲಿಂಕ್ ಕಳುಹಿಸಿ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದರು. ಸುಮಾರು 4.35 ಲಕ್ಷ ರು.ಗಳನ್ನು ಶ್ರೀನಿವಾಸ್‌ ಅವರಿಂದ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ ಅರ್ಜಿದಾರ, ನಂತರ ಆ ಹಣ ಹಿಂದಿರುಗಿಸದೆ ವಂಚಿಸಿದ್ದ.

ಈ ಕುರಿತು ಆಡುಗೋಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ‘ಇತರರ ಗುರುತು ಕಳವು ಮಾಡಿ ಕಂಪ್ಯೂಟರ್​ ಉಪಕರಣ ಬಳಸಿ ಹಣ ಪಡೆದು ವಂಚಿಸಿದ’ ಆರೋಪದಡಿ ಎಫ್​ಐಆರ್​ ದಾಖಲಿಸಿಕೊಂಡಿದ್ದರು. ಈ ಸಂಬಂಧ ಕಳೆದ ಫೆ.14ರಂದು ಅರ್ಜಿದಾರನಿಗೆ ವಾಟ್ಸಾಪ್‌ ಮೂಲಕ ನೋಟಿಸ್​ ಜಾರಿಗೊಳಿಸಿ, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಪುರಸ್ಕರಿಸಿರುವ ಹೈಕೋರ್ಟ್‌, ಬಿಎನ್ಎಸ್ಎಸ್ ಸೆಕ್ಷನ್​ 35 ಅಥವಾ ಸಿಆರ್‌ಪಿಸಿ ಸೆಕ್ಷನ್ 41(ಎ) ಪ್ರಕಾರ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಯನ್ನು ಬಂಧಿಸುವ ಅಗತ್ಯವಿಲ್ಲದ ಸಂದರ್ಭದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಬಹುದಾಗಿದೆ. ಆದರೆ, ಆರೋಪಿಗಳಿಗೆ ನೋಟಿಸ್​ ನೀಡುವಲ್ಲಿ ಪೊಲೀಸರು ವಾಟ್ಸಾಪ್‌ ಅಥವಾ ಇತರ ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿ ಕಳೆದ ತಿಂಗಳಿನಲ್ಲಿ ಸುಪ್ರಿಂ ಕೋರ್ಟ್‌ ತೀರ್ಪು ಹೊರಡಿಸಿದೆ. ಹಾಗಾಗಿ, ಈ ಪ್ರಕ್ರಿಯೆಯನ್ನು ಅನುಮತಿಸಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ