ದ.ಕ. ಬಿಜೆಪಿ ಟಿಕೆಟ್‌ಗೆ ಹಿಂದು ಮುಖಂಡ ಸತ್ಯಜಿತ್‌ ಸುರತ್ಕಲ್‌ ಉತ್ಸಾಹ

KannadaprabhaNewsNetwork |  
Published : Feb 01, 2024, 02:07 AM IST
ಬಂಟ್ವಾಳದಲ್ಲಿ ನಡೆದ ರಹಸ್ಯ ಸಭೆಯಲ್ಲಿ ಸತ್ಯಜಿತ್‌ ಸುರತ್ಕಲ್‌ ಮಾತನಾಡುತ್ತಿರುವುದು | Kannada Prabha

ಸಾರಾಂಶ

ಫೆ. 25ರಂದು ಜಿಲ್ಲೆಯಲ್ಲಿ ಸತ್ಯಜಿತ್ ಪರವಾಗಿ ಸಮಾವೇಶ ನಡೆಸುವ ಸಾಧ್ಯತೆ ಇದೆ. ಸತ್ಯಜಿತ್‌ಗೆ ಟಿಕೆಟ್‌ ನೀಡುವಂತೆ ರಾಜ್ಯ ಬಿಜೆಪಿ ಹಾಗೂ ದೆಹಲಿಯ ವರಿಷ್ಠರಿಗೆ ಬೇಡಿಕೆ ಇರಿಸಲು ತೀರ್ಮಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಲೋಕಸಭಾ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಸಾಲಿಗೆ ಅರುಣ್‌ ಕುಮಾರ್‌ ಪುತ್ತಿಲ ಬಳಿಕ ಈಗ ಮತ್ತೊಬ್ಬ ಹಿಂದು ಮುಖಂಡನ ಹೆಸರು ಸೇರ್ಪಡೆಯಾಗಿದೆ. ಕರಾವಳಿಯ ಹಿಂದುತ್ವದ ಪ್ರಭಾವಿ ಮುಖಂಡ ಸತ್ಯಜಿತ್ ಸುರತ್ಕಲ್ ಮತ್ತೆ ಅಖಾಡಕ್ಕೆ ಇಳಿಯುವ ಸೂಚನೆ ನೀಡಿದ್ದಾರೆ. ಅಲ್ಲದೆ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಬೂತ್‌ ಮಟ್ಟದ ಸಮಿತಿ ರಚನೆಗೆ ಮಂದಾಗಿದ್ದಾರೆ. ಇದು ಕರಾವಳಿ ಬಿಜೆಪಿಗೆ ಮತ್ತೆ ತಲೆ ನೋವಾಗುತ್ತಾ ಎಂಬ ಪ್ರಶ್ನೆ ತಲೆದೋರಿದೆ.ಸತ್ಯಜಿತ್‌ ಸುರತ್ಕಲ್‌ಗೆ ಟಿಕೆಟ್ ನೀಡಬೇಕು ಎಂದು ಸತ್ಯಜಿತ್ ಅಭಿಮಾನಿ ಬಳಗ ರಹಸ್ಯ ಸಭೆ ನಡೆಸಿದೆ. ಈ ಸಭೆ ದ‌.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಮಠ ಎಂಬಲ್ಲಿ ನಡೆದಿದೆ. ಅಲ್ಲಿನ ಹಿಂದೂ ಜಾಗರಣಾ ವೇದಿಕೆ ಸಂಘಟನೆಯ ಪ್ರಮುಖರೊಬ್ಬರ ಮನೆಯಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಟಿಕೆಟ್ ಅಕಾಂಕ್ಷಿ, ಬಿಲ್ಲವ ಸಮಾಜದ ಮುಖಂಡ ಸತ್ಯಜಿತ್ ಸುರತ್ಕಲ್ ಭಾಗಿಯಾಗಿದ್ದಾರೆ.

ಫೆ.25ರಂದು ಸತ್ಯಜಿತ್‌ ಪರ ಸಮಾವೇಶ?

ಈ ಸಭೆಯಲ್ಲಿ ದ.ಕ. ಜಿಲ್ಲೆಯ ಎಂಟು ಅಸೆಂಬ್ಲಿ ಕ್ಷೇತ್ರದ ಪ್ರಮುಖರ ಸಭೆ ನಡೆಸಲಾಗಿದೆ. ಫೆ. 25ರಂದು ಜಿಲ್ಲೆಯಲ್ಲಿ ಸತ್ಯಜಿತ್ ಪರವಾಗಿ ಸಮಾವೇಶ ನಡೆಸುವ ಸಾಧ್ಯತೆ ಇದೆ. ಸತ್ಯಜಿತ್‌ಗೆ ಟಿಕೆಟ್‌ ನೀಡುವಂತೆ ರಾಜ್ಯ ಬಿಜೆಪಿ ಹಾಗೂ ದೆಹಲಿಯ ವರಿಷ್ಠರಿಗೆ ಬೇಡಿಕೆ ಇರಿಸಲು ತೀರ್ಮಾನಿಸಲಾಗಿದೆ. ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ತಾಲೂಕು ಹಾಗೂ ವಾರ್ಡ್ ಕಮಿಟಿಗಳ ರಚನೆಗೆ ನಿರ್ಧರಿಸಲಾಗಿದ್ದು, ಬಳಿಕ ಜಿಲ್ಲಾ ವಾರ್ಡ್, ತಾಲೂಕು ವಾರ್ಡ್ ಮತ್ತು ಗ್ರಾಮ ಮಟ್ಟದ ವಾರ್ಡ್‌ಗಳಿಗೆ ಸಂಚಾಲಕರ ನೇಮಕಗೊಳಿಸುವುದು, ಅ ಮೂಲಕ ಸಭೆಗಳನ್ನು ನಡೆಸಿ ಕಾರ್ಯಕರ್ತರ ಸಂಘಟನೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ.

ಹಿಂಜಾವೇ ಕಾರ್ಯಕರ್ತರು, ಬೇರೆ ಬೇರೆ ಸಂಘಟನೆಯ ಕಾರ್ಯಕರ್ತರು, ಬಿಲ್ಲವ ಪ್ರಮುಖರನ್ನು ಗುರುತಿಸಿ ಕಮಿಟಿ ರಚಿಸುವುದಲ್ಲದೆ, ಪ್ರಚಾರದ ದೃಷ್ಟಿಯಿಂದ ಸೋಷಿಯಲ್‌ ಮೀಡಿಯಾ ತಂಡ ರಟಿಸಲೂ ನಿರ್ಧರಿಸಲಾಗಿದೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದು ಮುಖಂಡ ಸತ್ಯಜಿತ್‌ ಸುರತ್ಕಲ್‌ ಅಖಾಡಕ್ಕೆ ಇಳಿದಿದ್ದಾರೆ. ಹಿಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಸತ್ಯಜಿತ್‌ ಸುರತ್ಕಲ್‌ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಮುನಿಸಿಕೊಂಡಿದ್ದರು. ಬಿಲ್ಲವ ಸಮಾಜದ ಪ್ರಭಾವಿ ಹಿಂದು ಮುಖಂಡರಾಗಿರುವ ಸತ್ಯಜಿತ್‌ ಸುರತ್ಕಲ್‌ ಅವರು ಈ ಬಾರಿ ಮತ್ತೆ ಲೋಕಸಭಾ ಟಿಕೆಟ್‌ ಫೈಟ್‌ಗೆ ಮುಂದಾಗಿದ್ದಾರೆ. ಇನ್ನೊಂದೆಡೆ ಪುತ್ತೂರಿನ ಹಿಂದು ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಪರವಾಗಿ ಪುತ್ತಿಲ ಪರಿವಾರ ಕೂಡ ಟಿಕೆಟ್‌ಗೆ ಬೇಡಿಕೆ ಇರಿಸಿದೆ. ಪುತ್ತೂರಿನ ಹಿಂದೂ ಮುಖಂಡ ಅರುಣ್ ಪುತ್ತಿಲ ಮಧ್ಯೆ ಸತ್ಯಜಿತ್‌ ಹೆಸರು ಕೂಡ ಈಗ ಕಾಣಿಸಿದೆ. ಟಿಕೆಟ್‌ಗೆ ಹಿಂದು ಮುಖಂಡರ ಸ್ಪರ್ಧಾಕಾಂಕ್ಷೆ ಕರಾವಳಿ ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇನ್‌ಸ್ಪೆಕ್ಟರ್‌ಗೆ ಜಾನಪದ ಅಕಾಡೆಮಿ ಪ್ರಶಸ್ತಿ!
ರಂಗಮಂಟಪದ ಮೇಲೆ ಮೂಡಿ ಬಂದ ಗುರು–ಶಿಷ್ಯ ಪರಂಪರೆಯ ಜೀವಂತ ರಂಗಾನುಭವ