ಬೀದರ್: ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಆಯೋಜಿಸಲಾಗುತ್ತಿರುವ ಬಸವ ಸಂಸ್ಕೃತಿ ಅಭಿಯಾನದಲ್ಲಿ ನಾಡಿನ ನೂರಾರು ಮಠಾಧೀಶರು, ಶರಣ ಸಂತರು ಸೇರಿದಂತೆ ಸುಮಾರು 50ಸಾವಿರ ಬಸವ ಭಕ್ತರ ಆಗಮನವನ್ನು ನಿರೀಕ್ಷಿಸಲಾಗಿದೆ ಎಂದು ಬಸವ ಸಂಸ್ಕೃತಿ ಅಭಿಯಾನ ಸಮಿತಿಯ ಅಧ್ಯಕ್ಷ ಬಸವರಾಜ ಧನ್ನೂರ್ ತಿಳಿಸಿದರು.
ವಚನಕಾರರು ವೇದ, ಶಾಸ್ತ್ರ, ಪುರಾಣ, ಆಗಮ ಇತ್ಯಾದಿಗಳನ್ನು ನಂಬದೆ ಶರಣರ ಪುರಾತನ ಸಂಸ್ಕೃತಿಯನ್ನು ನಂಬಿ ಬದುಕನ್ನು ಕಟ್ಟಿಕೊಂಡವರು. ಇದರಿಂದಾಗಿಯೇ ಆಗ ರಕ್ತ ಕ್ರಾಂತಿಯಾಯ್ತು. ಇಂದು ಸಹ ಅಂದಿನ ಪರಿಸ್ಥಿತಿ ಪೂರ್ಣ ಬದಲಾಗಿದೆ ಎಂದು ಹೇಳಲಾಗದು ಹೀಗಾಗಿ ಬಸವ ಪಥದ ಮಾರ್ಗದಲ್ಲಿ ನಡೆದು ಅವರ ಸತ್ಯ, ನೀತಿ, ಪ್ರಾಮಾಣಿಕತೆ, ದಯೆ, ಕಾಯಕ ಶ್ರದ್ಧೆ, ದಾಸೋಹ ಪ್ರಜ್ಞೆ, ಏಕದೇವ ನಿಷ್ಠೆಯ ಆದರ್ಶಗಳಂತೆ ನಡೆಯುವುದಕ್ಕಾಗಿ ಬಸವ ತತ್ವವನ್ನು ಪ್ರತಿಯೊಬ್ಬರ ಮನ, ಬುದ್ಧಿ, ಭಾವದಲ್ಲಿ ಬಿತ್ತಬೇಕಾಗಿದೆ ಅದಕ್ಕಾಗಿಯೇ ಈ ಕಾರ್ಯಕ್ರಮ ಎಂದರು.
ಜನರಲ್ಲಿ ವೈದಿಕ ಪರಂಪರೆಯ ಬೇರುಗಳು ಆಳವಾಗಿವೆ, ಕಿತ್ತೆಸೆಯಬೇಕಿದೆ :ಜನರಲ್ಲಿ ವೈದಿಕ ಪರಂಪರೆಯ ಬೇರುಗಳು ಆಳವಾಗಿವೆ. ಅವು ಹೊಸದೇನನ್ನೂ ಪಡೆಯುವ ಸ್ವೀಕರಿಸಲು ಬಿಡುತ್ತಿಲ್ಲ, ಅವುಗಳನ್ನು ಕಿತ್ತೆಸೆದು ಬಸವ ಚಿಂತನೆಯ ಸಸಿಗಳನ್ನು ನೆಟ್ಟು ಬೆಳೆಸಿ ಅವುಗಳಿಂದ ಸೂಕ್ತ ಫಲವನ್ನು ಪಡೆಯುವ ಇಚ್ಛಾಶಕ್ತಿಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಈ ಅಭಿಯಾನದಲ್ಲಿ ಸೆ. 3ರ ಬುಧವಾರ ಬೆಳಿಗ್ಗೆ 11ಕ್ಕೆ ಇಲ್ಲಿನ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಜೊತೆ ವಚನ ಸಂವಾದವನ್ನು ಸಾಣೇಹಳ್ಳಿ ಶ್ರೀಗಳು, ನಾಡೋಜ ಚನ್ನಬಸವ ಪಟ್ಟದ್ದೇವರು ಸೇರಿದಂತೆ ಮತ್ತಿತರ ಮಠಾಧೀಶರು ನಡೆಸಿಕೊಡಲಿದ್ದಾರೆ.
ಇಲ್ಲಿನ ಬಸವೇಶ್ವರ ವೃತ್ತದಿಂದ ಸಂಜೆ 4 ಗಂಟೆಗೆ ಬಿವಿ ಭೂಮರೆಡ್ಡಿ ಕಾಲೇಜು ಆವರಣದವರೆಗೆ ಬಸವಾದಿ ಶರಣರ ಭಿತ್ತಿ ಚಿತ್ರಗಳಿರುವ ''''''''ಬಸವ'''''''' ರಥದ ಮೆರವಣಿಗೆ ಜೊತೆಗೆ ನಮ್ಮ ಪರಂಪರೆಯ ಸಂಸ್ಕೃತಿಯಂತೆ 1000 ಮಹಿಳೆಯಯರು ಇಳಕಲ್ಲ ಸೀರೆ ಧರಿಸಿ ಹಾಗೂ 1000 ಪುರುಷರು ಧೋತರ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಅಭಿಯಾನಕ್ಕೆ ಬಸವ ಪರ ಮಠಗಳು, ಸಂಘ, ಸಂಘಟನೆಗಳು ಕೈಜೋಡಿಸಿದ್ದು, ಸರ್ವ ಶರಣ ಸಮಾಜದ ಸಂಘ ಸಂಸ್ಥೆಗಳು, ನೀಲಮ್ಮನ ಬಳಗಗಳು, ಮಹಿಳಾ ಸಂಘಟನೆಗಳು, ಬಸವತತ್ವ ಪ್ರೇಮಿಗಳು, ಸರ್ವ ಶರಣ ಬಂಧುಗಳು, ಪ್ರಗತಿಪರರು ಇದರಲ್ಲಿ ಭಾಗವಹಿಸುವರು.
ಈ ಅಭಿಯಾನವು ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿಯಿಂದ ಸೆ. 1ರಂದು ಪ್ರಾರಂಭವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕ್ರಮ ಮಾಡುತ್ತ ರಾಜಧಾನಿ ಬೆಂಗಳೂರಲ್ಲಿ ಅಕ್ಟೋಬರ್ 5ರಂದು ಕೊನೆಗೊಳ್ಳುವುದು ಎಂದು ಬಸವರಾಜ ಧನ್ನೂರ್ ತಿಳಿಸಿದರು.