ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಲಾಗುವುದು ಎಂದು ಭೀಮ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಮಿತಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಪರ್ವತಯ್ಯ, ಭೀಮ ಕೋರೆಗಾಂವ್ ವಿಜಯೋತ್ಸವದ 207ನೇ ಶೌರ್ಯ ದಿವಸ್ ಆಚರಣೆ ಮಾಡುತ್ತಿದ್ದು ನಗರದ ತಾಲೂಕು ಕಚೇರಿ ಮುಂಭಾಗದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ನಂತರ ನಗರದ ನೆಹರೂ ನಗರ ರಾಷ್ಟ್ರೀಯ ಹೆದ್ದಾರಿ ಬಸವೇಶ್ವರ ವೃತ್ತದ ಮೂಲಕ ನಾಸಿಕ್ ಡೋಲ್, ಡೊಳ್ಳು ಕುಣಿತ, ವೀರಗಾಸೆ, ಡಿ.ಜೆ ಸೇರಿದಂತೆ ಮೈಸೂರಿನ ಪೆದ್ದಿ ಮಠದ ಶ್ರೀಗಳಾದ ಜ್ಞಾನಪ್ರಕಾಶ್ ಸ್ವಾಮೀಜಿಗಳು ಮತ್ತು ಖ್ಯಾತ ಚಲನಚಿತ್ರ ನಟ ದುನಿಯಾ ವಿಜಯ್ ಸೇರಿದಂತೆ ವಿವಿಧ ಗಣ್ಯರು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಜೂನಿಯರ್ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆ ಜರುಗಲಿದೆ. ಕಾರ್ಯಕ್ರಮಕ್ಕೆ ಸಮಾಜದ ಹಿರಿಯ ನಾಯಕರು ಎಲ್ಲಾ ಪಕ್ಷದ ನಾಯಕರು ದಲಿತ ಸಂಘಟನೆಗಳ ಒಕ್ಕೂಟದ ಎಲ್ಲಾ ಮುಖಂಡರುಗಳು ನೌಕರರು ವಿದ್ಯಾರ್ಥಿಗಳು ಯುವ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು. ಭೀಮ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಮಿತಿಯ ಉಪಾಧ್ಯಕ್ಷ ಚಿಕ್ಕ ಬ್ಯಾಡ್ಗೆರೆ ಮಂಜುನಾಥ್ ಮಾತನಾಡಿ, 500 ಮಹರ್ ವೀರರು 28,000 ಪೇಶ್ವೆ ಸೈನಿಕರನ್ನು ಮಣಿಸಿದ ದಿನವನ್ನು ಭೀಮ ಕೋರೆಗಾಂವ್ ವಿಜಯೋತ್ಸವ ದಿನವಾಗಿ ಆಚರಿಸುತ್ತಿದ್ದು ಭೀಮ ಕೋರೆಗಾಂವ್ ವಿಜಯೋತ್ಸವ ದಿನದ ಅಂಗವಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಪಣತೊಡೋಣ. ನಮ್ಮ ಸಂವಿಧಾನದ ಪ್ರಜಾಪ್ರಭುತ್ವವನ್ನು ಹಾಗೂ ಅಂಬೇಡ್ಕರ್ ಅವರ ಅವಿರತ ಹೋರಾಟದ ಫಲವಾಗಿ ದಕ್ಕಿಸಿಕೊಂಡಿರುವ ನಮ್ಮ ಎಲ್ಲಾ ಹಕ್ಕು ಹಾಗೂ ಅವಕಾಶಗಳನ್ನು ಉಳಿಸಿಕೊಳ್ಳುವ ಶಪಥ ಮಾಡೋಣ ಪ್ರಬುದ್ಧ ಭಾರತವನ್ನು ಕಟ್ಟೋಣ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪೋಷಕರಾದ ಮತ್ತು ದಲಿತ ಮುಖಂಡರಾದ ಮರಿಯಪ್ಪ, ಸಮಿತಿಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ಖಜಾಂಚಿ ಶಂಭುಗನಹಳ್ಳಿ ಬಾಬು ಸೇರಿದಂತೆ ವಿವಿಧ ದಲಿತ ಮುಖಂಡರು ಹಾಜರಿದ್ದರು.