ನರೇಗಲ್ಲ: ಸಮೀಪದ ಅಬ್ಬಿಗೇರಿಯಲ್ಲಿ ಅ. 3ರಿಂದ ಪ್ರಾರಂಭವಾಗಲಿರುವ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಮಹೋತ್ಸವದ ಸಿದ್ಧತೆ ಭರದಿಂದ ಸಾಗಿದೆ. ಗುರುಮನೆ ದರ್ಬಾರ್, ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಎಲ್ಲ ತಯಾರಿ ಪೂರ್ಣಗೊಂಡಿದೆ ಎಂದು ಸಿದ್ದರಬೆಟ್ಟ, ಅಬ್ಬಿಗೇರಿ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯರು ಹೇಳಿದರು.
ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಊಟಕ್ಕಾಗಿ 200 ಅಡಿ ಉದ್ದ ಮತ್ತು 110 ಅಡಿ ಅಗಲದ ಬೃಹತ್ ಊಟದ ಪೆಂಡಾಲ್ ಹಾಕಲಾಗಿದ್ದು, ಒಮ್ಮೆಗೆ ಸಹಸ್ರಾರು ಜನರು ಊಟ ಮಾಡಲು ಅನುಕೂಲವಾಗಿದೆ. ನೀರಿನ ವ್ಯವಸ್ಥೆ ಸೇರಿದಂತೆ ಸಕಲ ಸಿದ್ಧತೆಯನ್ನು ಶ್ರೀಮಠದ ಭಕ್ತರು ಮಾಡಿದ್ದಾರೆ ಎಂದರು.
ಬುಧವಾರ ಸಂಜೆ ಬಾಳೆಹೊನ್ನೂರು ರಂಭಾಪೂರಿ ಪೀಠದ ಜ. ಡಾ. ವೀರಸೋಮೇಶ್ವರ ಭಗವತ್ಪಾದರ ಪುರ ಪ್ರವೇಶವಾಗಿದೆ. ಭಕ್ತರು ಸಕಲ ವಾದ್ಯಗಳ ಮೆರವಣಿಗೆ ಮೂಲಕ ಗ್ರಾಮದ ಮಧ್ಯದಲ್ಲಿನ ಹಿರೇಮಠಕ್ಕೆ ಕರೆತಂದಿದ್ದಾರೆ. ಕುಂಭ ಹೊತ್ತ ಮಹಿಳೆಯರು ಊರಿನ ರಾಜ ಬೀದಿಗಳಲ್ಲಿ ಸಾಗುವ ಮೆರವಣಿಗೆಯೊಂದಿಗೆ ನರೇಗಲ್ಲ ರಸ್ತೆಯಲ್ಲಿನ ಹೊಸಮಠದ ರೇಣುಕಾಚಾರ್ಯ ಮಂಗಲ ಮಂದಿರಕ್ಕೆ ಸಾಗಿ ಸಂಪನ್ನಗೊಂಡಿತು ಎಂದು ತಿಳಿಸಿದರು.ಈ ವೇಳೆ ನರೇಗಲ್ಲದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ರೋಣದ ಗುಲಗಂಜಿ ಮಠದ ಗುರುಪಾದ ದೇವರು, ಶಾಸಕ ಜಿ.ಎಸ್. ಪಾಟೀಲ ಇದ್ದರು.