ಬಕ್ರೀದ್ ಹಬ್ಬದಲ್ಲಿ ಕಸ ವಿಲೇವಾರಿಗೆ ಸಿದ್ಧತೆ

KannadaprabhaNewsNetwork | Published : Jun 3, 2025 12:07 AM
ಹಬ್ಬದ ಹಿನ್ನೆಲೆಯಲ್ಲಿ ನಗರದ ವಾರ್ಡ್‌ಗಳ ಎಲ್ಲ ರಸ್ತೆಗಳಲ್ಲಿ ಸ್ವಚ್ಛತೆ, ಮನೆಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಬೇಕು.

ಕನ್ನಡಪ್ರಭ ವಾರ್ತೆ ರಾಮನಗರಮುಸ್ಲಿಂ ಬಾಂಧವರ ಪವಿತ್ರವಾದ ಬಕ್ರೀದ್ ಹಬ್ಬದಲ್ಲಿ ಕಸ ಸಂಗ್ರಹ, ವಿಲೇವಾರಿ ಹಾಗೂ ಸ್ವಚ್ಛತೆ ಕುರಿತು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ ಅವರು ಸೋಮವಾರ ಪರಿಸರ ಅಧಿಕಾರಿಗಳು ಹಾಗೂ ಪೌರಕಾರ್ಮಿಕರ ಮುಖ್ಯಸ್ಥರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.ನಗರಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿಯಲ್ಲಿ ಸಭೆ ನಡೆಸಿದ ಫೈರೋಜ್ ಅವರು, ಹಬ್ಬದ ಹಿನ್ನೆಲೆಯಲ್ಲಿ ನಗರದ ವಾರ್ಡ್‌ಗಳ ಎಲ್ಲ ರಸ್ತೆಗಳಲ್ಲಿ ಸ್ವಚ್ಛತೆ, ಮನೆಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಬೇಕು. ವಿಶೇಷವಾಗಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಸ್ವಚ್ಛತೆ ಕಾರ್ಯ ಮಾಡಬೇಕು ಎಂದು ಸೂಚಿಸಿದರು.

ಚೀಲಗಳ ವಿತರಣೆ:ಜೂ.7ರ ಶನಿವಾರದಿಂದ ಮಂಗಳವಾರದವರೆಗೆ ಬೆಳಿಗ್ಗೆಯಿಂದ ಸಂಜೆ 6 ರವರೆಗೆ ಕಸ ಸಂಗ್ರಹಕ್ಕೆ ಆಟೋಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ವಿಶೇಷವಾಗಿ‌ ಮನೆಗಳಿಗೆ ಚೀಲಗಳನ್ನು ಕೊಟ್ಟು ಕಸವನ್ನು‌ ಆಟೋಗಳಿಗೆ ಪಡೆಯಲು‌ ಮೇಸ್ತ್ರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ ಎಂದರು.ನಗರಸಭೆಯ ಆಟೋ ಟಿಪ್ಪರ್‌ಗಳು ವಾರ್ಡಿನಲ್ಲಿ ಸಂಚರಿಸಲಿವೆ. ಮನೆಗಳಲ್ಲಿನ ಕಸವನ್ನು ಆಟೋಗಳಿಗೆ ಹಾಕಬೇಕು. ಈ ಸಂಬಂಧ ಅಧಿಕಾರಿಗಳು ಮತ್ತು ಅವರ ಸಂಪರ್ಕ ಸಂಖ್ಯೆ ನೀಡುತ್ತೇವೆ. ಮುಸ್ಲಿಂ ಬಾಂಧವರು ಕಸವನ್ನು ಎಲ್ಲೆಂದರಲ್ಲಿ ಸುರಿಯದೆ ಸಹಕಾರ ನೀಡಬೇಕು. ಬೇರೆ ಸಮುದಾಯದವರಿಗೆ ತೊಂದರೆಯಾಗದಂತೆ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು. ಹಬ್ಬದ ದಿನದಿಂದ ನಾಲ್ಕು ದಿನಗಳ ಕಾಲ ಕಸವನ್ನು ನಗರಸಭೆ ವಾಹನಗಳಿಗೆ ನೀಡುವಂತೆ ಮಸೀದಿಗಳಲ್ಲಿ ಪ್ರಚಾರ ನಡೆಸಿ ಮುಸ್ಲಿಂ ಬಾಂಧವರಲ್ಲಿ ಅರಿವು ಮೂಡಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜನರು ಸ್ಥಳೀಯ ನಗರಸಭೆ ಸದಸ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ಫೈರೋಜ್ ಪಾಷ ಹೇಳಿದರು.ಪರಿಸರ ವಿಭಾಗದ ಎಇಇ ಸುಬ್ರಮಣಿ ಮಾತನಾಡಿ, ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಅಣಿಯಾಗಿದ್ದೇವೆ. ನಗರಸಭೆಯಲ್ಲಿ ಒಟ್ಟು 105 ಪೌರಕಾರ್ಮಿಕರು, 13 ಜನ‌ಲೋಡರ್ಸ್, 12 ಯುಜಿಡಿ‌ ಸಹಾಯಕರು, 37 ವಾಹನ ಚಾಲಕರು, 15 ಸಂಖ್ಯೆ ವೀಲ್ ಕಟರದ, 5 ಟಿಪ್ಪರ್ ಗಳು, 4 ಟ್ರ್ಯಾಕ್ಟರ್ಗಳು, 22 ಆಟೋ ಟಿಪ್ಪರ್, 2 ಕಂಪ್ಯಾಕ್ಟರ್, 1 ಜೆಸಿಬಿ, 1 ಇಟಾಚಿ, 3 ಯುಜಿಡಿ ವಾಹನಗಳಿವೆ, 2 ಡಿಸಿಲ್ಟಿಂಗ್ ವಾಹನಗಳನ್ನು ಒಳಗೊಂಡಿದ್ದು, 2 ಟನ್ ಬ್ಲೀಚಿಂಗ್ ಪೌಡರ್ ಮತ್ತು ಮೆಲಥಿಯನ್ ಪೌಡರ್ ಖರೀದಿ ಮಾಡಿ ಸ್ವಚ್ಚತೆಗಾಗಿ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಸದಸ್ಯರಾದ ಅಕ್ಲೀಂ, ಸಮದ್, ಆರೀಫ್, ನಿಜಾಮುದ್ದೀನ್ ಷರೀಫ್, ಆರೋಗ್ಯ ಶಾಖೆಯ ವಿಜಯ್ ಕುಮಾರ್, ಮೇಸ್ತ್ರಿಗಳಾದ ಕೊಲ್ಲಾಪುರಿ, ದೇವೇಂದ್ರ, ಮಾರಪ್ಪ, ಶ್ರೀನಿವಾಸ್, ನರಸಿಂಹ, ಮೋಹನ್ ಮತ್ತಿತರರು ಹಾಜರಿದ್ದರು.-----2ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷರವರು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡುವ ಕುರಿತು ಪರಿಸರ ವಿಭಾಗ, ಆರೋಗ್ಯ ಶಾಖೆ ಹಾಗೂ ಪೌರಕಾರ್ಮಿಕರ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದರು.