- ಈ ಬಾರಿ 20 ಅಡಿ ಎತ್ತರದ ಲಾಲ್ಬಾಗ್ ಕಾ ರಾಜಾ ಗಣಪತಿ: ಶ್ರೀನಿವಾಸ್ ಮಾಹಿತಿ
- - -ಕನ್ನಡಪ್ರಭ ವಾರ್ತೆ ಹರಿಹರ
ನಗರದ ಗಾಂಧಿ ಮೈದಾನದಲ್ಲಿ ಶ್ರೀ ಸಾರ್ವಜನಿಕ ವಿನಾಯಕ ಸಂಘ ವತಿಯಿಂದ 63ನೇ ವರ್ಷದ ವಿನಾಯಕ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಉತ್ಸವ ಸಮಿತಿ ಗೌರವ ಅಧ್ಯಕ್ಷ ಎನ್.ಎಚ್. ಶ್ರೀನಿವಾಸ್ ನಂದಿಗಾವಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಆ.27 ರಿಂದ ಸೆ.6ರವರೆಗೆ 11 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಬ್ಬದ ನಿಮಿತ್ತ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಗಣೇಶೋತ್ಸವ ಸಮಿತಿ ಗೌರವ ಅಧ್ಯಕ್ಷರಾಗಿ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್, ಎಸ್.ರಾಮಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ನೇತೃತ್ವದಲ್ಲಿ ನಡೆಯಲಿದೆ ಎಂದರು.ಉತ್ಸವ ಸಮಿತಿ ಅಧ್ಯಕ್ಷ ಎಂ.ಬಿ. ಅಣ್ಣಪ್ಪ ಮಾತನಾಡಿ, ಹರಿಹರ ನಗರದಲ್ಲಿ ಗಣೇಶೋತ್ಸವ ಆಚರಣೆ ವೇಳೆ ಪರಿಸರಕ್ಕೆ ಧಕ್ಕೆ ಆಗದಂತೆ ಮತ್ತು ಸಾರ್ವಜನಿಕರಿಗೆ ಹೃದಯ ರೋಗ ತಪಾಸಣೆ, ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಯಲಿದೆ ಎಂದರು.
ಈ ಬಾರಿ ಸುಮಾರು 20 ಅಡಿ ಎತ್ತರದ ಲಾಲ್ಬಾಗ್ ಕಾ ರಾಜಾ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ವಿಸರ್ಜನೆ ಸಮಯದಲ್ಲಿ ಡಿ.ಜೆ. ಸೌಂಡ್ ಸಿಸ್ಟಂ ಬದಲು ರಾಜ್ಯದ ವಿವಿಧ ನಗರದ ಕಲಾ ತಂಡಗಳನ್ನು ಕರೆಸಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಲೆಕ್ಕಪತ್ರದ ವರದಿ ಮಂಡಿಸಲಾಯಿತು. ನಗರಸಭೆ ಸದಸ್ಯ ಕೆ.ಜಿ. ಸಿದ್ದೇಶ್, ನಗರಸಭೆ ನಾಮನಿರ್ದೇಶನ ಸದಸ್ಯರಾದ ಕೆ.ಬಿ. ರಾಜಶೇಖರ್, ದಿವಾಕರ್, ಜಿ.ವಿ. ಪ್ರವೀಣ್, ಸಚ್ಚಿನ್ ಕೊಂಡಜ್ಜಿ, ಕೊತ್ವಾಲ್ ಹನುಮಂತಪ್ಪ, ಕಾಂತ್ ರಾಜ್, ಕಲಾಲ್ ಎಂಜಿನಿಯರ್, ವಿಶ್ವಜಿತ್, ನಾರಾಯಣ, ಮಂಜುನಾಥ್, ವೆಂಕಟೇಶ್ ಶೆಟ್ಟಿ, ಶಶಿಕುಮಾರ್, ಪವರ್ ಇತರರು ಹಾಜರಿದ್ದರು.
- - -(ಬಾಕ್ಸ್) ಗಣೇಶೋತ್ಸವ ಆಚರಣೆ ಉತ್ಸವ ಸಮಿತಿ ಅಧ್ಯಕ್ಷರಾಗಿ ಎಂ.ಬಿ. ಅಣ್ಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಚಿದಾನಂದ ಕಂಚಿಕೇರಿ, ಖಜಾಂಚಿಯಾಗಿ ಕೆ.ಬಿ. ರಾಜಶೇಖರ್, ಅಲಂಕಾರ ಸಮಿತಿ ಅಧ್ಯಕ್ಷರಾಗಿ ಸಚ್ಚಿನ್ ಕೊಂಡಜ್ಜಿ, ಪೂಜಾ ಸಮಿತಿ ಅಧ್ಯಕ್ಷರಾಗಿ ಜಿ.ವಿ. ಪ್ರವೀಣ್ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಟಿ ಇನಾಯತ್ ಉಲ್ಲಾ, ಆಹಾರ ಸಮಿತಿ ಅಧ್ಯಕ್ಷರಾಗಿ ನಾರಯಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಗೌರವ ಅಧ್ಯಕ್ಷ ಎನ್.ಎಚ್. ನಂದಿಗಾವಿ ಶ್ರೀನಿವಾಸ್ ತಿಳಿಸಿದರು.
- - --16ಎಚ್ಆರ್ಆರ್02:
ಹರಿಹರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉತ್ಸವ ಸಮಿತಿ ಗೌರವ ಅಧ್ಯಕ್ಷ ಎನ್.ಎಚ್. ಶ್ರೀನಿವಾಸ್ ಮಾತನಾಡಿದರು.