ಬೆಲೆ ಏರಿಕೆ ನಡುವೆ ಸಂಕ್ರಾಂತಿ ಹಬ್ಬಕ್ಕೆ ಸಿದ್ಧತೆ

KannadaprabhaNewsNetwork |  
Published : Jan 15, 2026, 01:30 AM IST
0000 | Kannada Prabha

ಸಾರಾಂಶ

ಗ್ರಾಮೀಣ ಸೊಗಡಿನ ಪ್ರತೀಕವಾಗಿರುವ ಸುಗ್ಗಿಹಬ್ಬ ಮಕರ ಸಂಕ್ರಾಂತಿಯನ್ನು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಿರುವ ಜನಸಾಮಾನ್ಯರಿಗೆ ಹೂವು, ಹಣ್ಣು, ಕಡಲೆಕಾಯಿ, ಕಬ್ಬು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಆದರೂ ಕಂಗೆಡದೆ ಸುಗ್ಗಿ ಹಬ್ಬವನ್ನು ನಗರ, ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲು ಭರದ ಸಿದ್ದತೆಗಳು ನಡೆದಿವೆ.

ಕನ್ನಡಪ್ರಭ ವಾರ್ತೆ ತುಮಕೂರು ಗ್ರಾಮೀಣ ಸೊಗಡಿನ ಪ್ರತೀಕವಾಗಿರುವ ಸುಗ್ಗಿಹಬ್ಬ ಮಕರ ಸಂಕ್ರಾಂತಿಯನ್ನು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಿರುವ ಜನಸಾಮಾನ್ಯರಿಗೆ ಹೂವು, ಹಣ್ಣು, ಕಡಲೆಕಾಯಿ, ಕಬ್ಬು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಆದರೂ ಕಂಗೆಡದೆ ಸುಗ್ಗಿ ಹಬ್ಬವನ್ನು ನಗರ, ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲು ಭರದ ಸಿದ್ದತೆಗಳು ನಡೆದಿವೆ. ಮಕರ ಸಂಕ್ರಾಂತಿ ಹಬ್ಬ ಅನ್ನದಾತರ ಸುಗ್ಗಿ ಕಾಲದ ಸಂಕೇತ. ಆದರೆ ಈ ಬಾರಿ ಕೊಂಚ ಮಳೆ ಕೊರತೆ ಉಂಟಾಗಿದ್ದು, ಈ ನಡುವೆಯೂ ರೈತರು ಸೇರಿದಂತೆ ಜನಸಾಮಾನ್ಯರು ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸರ್ವ ಸನ್ನದ್ಧರಾಗಿದ್ದು, ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಕಬ್ಬು, ಕಡ್ಲೆಕಾಯಿ, ಆವರೆಕಾಯಿ, ಗೆಣಸು ಬೆಲೆ ಗಗನಕ್ಕೇರಿದ್ದರೂ ಸಹ ಕಂಗೆಡದೆ ಎಲ್ಲವನ್ನು ಖರೀದಿಸಿ ಹಬ್ಬ ಆಚರಿಸುವ ಸಂಭ್ರಮದಲ್ಲಿದ್ದಾರೆ.

ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡು ಎಂಬ ಗಾದೆ ಮಾತಿದೆ. ಈ ಗಾದೆ ಮಾತು ಸಂಕ್ರಾಂತಿ ಹಬ್ಬದಂದು ಪ್ರಚಲಿತಕ್ಕೆ ಬರುತ್ತದೆ. ಎಳ್ಳು-ಬೆಲ್ಲ ಸಂಕ್ರಾಂತಿ ಹಬ್ಬದ ಪ್ರತೀಕವಾಗಿದೆ. ಹಾಗಾಗಿ ಅಂಗಡಿ ಮುಂಗಟ್ಟುಗಳಲ್ಲಿ ಎಳ್ಳು-ಬೆಲ್ಲದ ಮಾರಾಟವೂ ಬಲು ಜೋರಾಗಿಯೇ ನಡೆದಿದೆ.

ಹಳ್ಳಿಗಳಲ್ಲಿ ಕಾಣದ ಸಂಭ್ರಮಸಂಕ್ರಾಂತಿ ಹಬ್ಬ ಬಂತೆಂದರೆ ಹಳ್ಳಿಗಳಲ್ಲಿ ಸಂಭ್ರಮ, ಸಡಗರ ಎದ್ದು ಕಾಣುತ್ತಿತ್ತು. ಎತ್ತುಗಳಿಂದ ಜಮೀನು ಉಳುಮೆ ಮಾಡಿ ಹದಗೊಳಿಸಿ ಬಿತ್ತನೆ ಮಾಡಿ ಕಳೆ ಕಿತ್ತು ಫಸಲು ಬಂದ ಮೇಲೆ ಒಕ್ಕಣೆ ಮಾಡಿ ಬೆಳೆ ರಾಶಿ ಹಾಕಿ ಪೂಜೆ ಸಲ್ಲಿಸಿ ಮನೆಗೆ ತರುವುದೇ ಒಂದು ಸಂಭ್ರಮ. ಆದರೆ ಆಧುನಿಕತೆ ಬೆಳೆದಂತೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಯಂತ್ರಮಯವಾಗಿ ಬಿಟ್ಟಿದೆ. ಎತ್ತುಗಳಿಂದ ಜಮೀನು ಉಳುಮೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಈಗ ಜಮೀನು ಉಳುಮೆ ಮಾಡುವುದರಿಂದ ಹಿಡಿದು ಮನೆಗೆ ರಾಗಿ ರಾಶಿ ತರುವವರೆಗೂ ಯಂತ್ರಗಳನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಬೆಳೆದ ಬೆಳೆ ಒಕ್ಕಣೆ ಮಾಡಲು ಕಣವೂ ಇಲ್ಲ, ರಾಶಿಯೂ ಇಲ್ಲ, ಅದಕ್ಕೆ ಪೂಜೆನೂ ಮಾಡುವವರಿಲ್ಲದಂತಾಗಿದೆ.

ಆದರೆ ರಾಜ್ಯ ಸರ್ಕಾರ ಎಲ್ಲ ಜಿಲ್ಲಾ ಕೇಂದ್ರ ಹಾಗೂ ರಾಜಧಾನಿಯಲ್ಲಿ ಸಿರಿಧಾನ್ಯ ಮೇಳ ನಡೆಸುವ ಮೂಲಕ ಸುಗ್ಗಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ಹಳ್ಳಿಗಳಲ್ಲಿ ರೈತರು ರಾಶಿ ಹಾಕುತ್ತಾರೋ, ಬಿಡುತ್ತಾರೋ, ಸಿರಿಧಾನ್ಯ ಮೇಳದ ನೆಪದಲ್ಲಾದರೂ ರಾಗಿ ರಾಶಿಗಳನ್ನು ನೋಡುವಂತಹ ಭಾಗ್ಯ ಜನರಿಗೆ ದೊರೆಯುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ