ವಿಜಯನಗರ ರಾಜಧಾನಿ ಆನೆಗೊಂದಿ ಉತ್ಸವಕ್ಕೆ ಸಿದ್ಧತೆ: ಶಾಸಕ ಜನಾರ್ದನ ರೆಡ್ಡಿ

KannadaprabhaNewsNetwork | Published : Mar 5, 2024 1:35 AM

ಚಿತ್ರನಟರಾದ ಧೃವ ಸರ್ಜಾ, ಶ್ರೀಮುರುಳಿ, ಸಂಗೀತ ನಿರ್ದೇಶಕ ಹಂಸಲೇಖ ತಂಡ ರಾಮಾಯಣ ಕಾಲದ ನೃತರೂಪಕ ಹಾಗೂ ಕಥೆ ಪ್ರಸ್ತುತ ಪಡಿಸುತ್ತಾರೆ.

ಗಂಗಾವತಿ: ಆನೆಗೊಂದಿ ಉತ್ಸವ ಮಾ.11, 12ರಂದು ಆಚರಿಸುತ್ತಿದ್ದು, ಈ ಬಗ್ಗೆ ತ್ವರಿತಗತಿಯಲ್ಲಿ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.ತಾಲೂಕಿನ ಆನೆಗೊಂದಿಯ ಉತ್ಸವದ ಮುಖ್ಯ ವೇದಿಕೆ ಸ್ಥಳ ವೀಕ್ಷಿಸಿ ಮಾತನಾಡಿದ ಅವರು, ಈಗಾಗಲೇ ಬೆಂಗಳೂರ ಸನತಕುಮಾರ ತಂಡ ಹಾಗೂ ಸ್ಥಳೀಯರ ಸಹಕಾರದಿಂದ ವೇದಿಕೆ ಸಿದ್ಧಪಡಿಸಲು ಸೂಚಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ ಎಂದರು.ಚಿತ್ರನಟರಾದ ಧೃವ ಸರ್ಜಾ, ಶ್ರೀಮುರುಳಿ, ಸಂಗೀತ ನಿರ್ದೇಶಕ ಹಂಸಲೇಖ ತಂಡ ರಾಮಾಯಣ ಕಾಲದ ನೃತರೂಪಕ ಹಾಗೂ ಕಥೆ ಪ್ರಸ್ತುತ ಪಡಿಸುತ್ತಾರೆ.ಮುಖ್ಯ ವೇದಿಕೆಗೆ ಆನೆಗೊಂದಿ ಸಂಸ್ಥಾನದ ರಾಜವಂಶಸ್ಥರು ಹಾಗೂ ಮಾಜಿ ಸಚಿವ ದಿ.ಶ್ರೀರಂಗದೇವರಾಯಲು ಹೆಸರನ್ನು ಇಡಲಾಗುವುದು. ಮುಖ್ಯವೇದಿಕೆ ಹಿಂದಿನ ಸ್ಕ್ರೀನ್‌ ಮೇಲೆ ರಾಮಾಯಣ ಕಾಲದ ರಾಮ, ಸೀತಾ, ಲಕ್ಷಣ, ಆಂಜನೇಯ, ಸುಗ್ರೀವ, ಜಾಂಬವಂತ, ಪಂಪ ಸರೋವರದಲ್ಲಿ ಪಾರ್ವತಿದೇವಿ ತಪಸ್ಸು ಮಾಡಿದ ಎಲ್ಲ ಚಿತ್ರಗಳನ್ನು ಒಳಗೊಂಡ ಭವ್ಯ ವೇದಿಕೆ ಸಿದ್ಧಪಡಿಸಲಾಗುತ್ತಿದೆ ಎಂದರು.ಎರಡು ದಿನಗಳ ಕಾಲ ಬರುವ ಸರ್ವ ಜನರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗುವುದು. ಜಿಲ್ಲಾಧಿಕಾರಿಯೊಂದಿಗೆ ಎಲ್ಲ ಅಧಿಕಾರಿಗಳ ಸಭೆಯನ್ನು ಆನೆಗೊಂದಿಯಲ್ಲಿ ಕರೆಯಲಾಗುವುದು ಎಂದು ತಿಳಿಸಿದರು.ಆನೆಗೊಂದಿಯ ಗ್ರಾಮದಲ್ಲಿ ಎರಡನೇ ವೇದಿಕೆಯಲ್ಲಿ ವಿಚಾರ ಸಂಕಿರಣ, ಕವಿಗೋಷ್ಠಿ, ಮೇಗೋಟಿ ದುರ್ಗಾದೇವಿ ದೇವಸ್ಥಾನದಿಂದ ಅಂಬಾರಿ ಸಮೇತ ಭವ್ಯ ಮೆರವಣಿಗೆ ನಡೆಯುತ್ತಿದೆ ಎಂದರು.ಮಾ.9, 10ರಂದು ದೇಶಿಯ ಕ್ರೀಡೆಗಳಾದ ಕಬಡ್ಡಿ, ಕೆಸರುಗದ್ದೆ ಓಟ, ಕುಸ್ತಿ, ಮಲ್ಲಗಂಬ, ಪ್ರವಾಸೋದ್ಯಮ ಇಲಾಖೆಯಿಂದ ಜಲಕ್ರಿಡೆಗಳನ್ನು ನಡೆಸಲಾಗುವುದು. ತೋಟಗಾರಿಕೆ, ಕೃಷಿ ಇಲಾಖೆ ವಿವಿಧ ಇಲಾಖೆಗಳಿಂದ ಫಲಪುಪ್ಪ ಪ್ರದರ್ಶನ ನಡೆಸಲಾಗುವುದು ಎಂದರು.ಈ ಸಂದರ್ಭದಲ್ಲಿ ಮನೋಹರಗೌಡ, ಟಿ.ಜಿ. ಬಾಬು, ಯಮನೂರ ಚೌಡ್ಕಿ, ಜಿಲಾನಿ ಖಾದ್ರಿ, ಬಾಷಾ, ನರಸಿಂಹಲು, ತಿರುಕಪ್ಪ, ರಾಜೇಶ್ವರಿ, ಪಂಪಣ್ಣ ನಾಯಕ, ದುರುಗಪ್ಪ ದಳಪತಿ, ನಾಗರಾಜ ಚಳಗೇರಿ, ಶಿವು ಆದವಾನಿ ಉಪಸ್ಥಿತರಿದ್ದರು.