ವೈರಮುಡಿ ಬ್ರಹ್ಮೋತ್ಸವ ವಿಜೃಂಭಣೆಯಿಂದ ನೆರವೇರಿಸಲು ಸಿದ್ಧತೆ: ಪರಮೇಶ್ ಗೌಡ

KannadaprabhaNewsNetwork |  
Published : Feb 28, 2026, 01:45 AM IST
27ಕೆಎಂಎನ್ ಡಿ18 | Kannada Prabha

ಸಾರಾಂಶ

ಜಾತ್ರಾ ಮಹೋತ್ಸವದ ವೇಳೆ ಉತ್ಸವ ಬೀದಿ ದೇವಾಲಯದ ಹೊರ ಹಾಗೂ ಒಳ ಆವರಣಗಳು, ಸ್ಮಾರಕಗಳ ಬಳಿ ಸ್ವಚ್ಛತೆಗೆ ಆಧ್ಯತೆ ನೀಡಲಾಗಿದೆ. ಭಕ್ತರಿಗೆ ಶುದ್ಧೀಕರಿಸಿದ ಕುಡಿಯುವ ನೀರು ಒದಗಿಸಲು ಕ್ರಮ ವಹಿಸಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೇಲುಕೋಟೆಯಲ್ಲಿ ಮಾ. 23ರಿಂದ ಏಪ್ರಿಲ್ 3ರವರೆಗೆ ನಡೆಯುವ ಶ್ರೀ ಚೆಲುವನಾರಾಯಣಸ್ವಾಮಿ ಪ್ರಖ್ಯಾತ ವೈರಮುಡಿ ಬ್ರಹ್ಮೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶ್‌ಗೌಡ ಹೇಳಿದರು.

ವ್ಯವಸ್ಥಾನ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಮಾಹಿತಿ ನೀಡಿ ಮಾತನಾಡಿದ ಅವರು, ಬ್ರಹ್ಮೋತ್ಸವದ ಪ್ರಮುಖ ಉತ್ಸವವಾದ ಮಾರ್ಚ್ 28ರ ರಾತ್ರಿ ನಡೆಯುವ ವೈರಮುಡಿ ಕಿರೀಟಧಾರಣ ಮಹೋತ್ಸವ, ಮಾರ್ಚ್ 31ರ ಮಹಾರಥೋತ್ಸವ ಹಾಗೂ ಏ.1ರಂದು ರಾತ್ರಿ ಕಲ್ಯಾಣಿಯಲ್ಲಿ ನಡೆಯುವ ತೆಪ್ಪೋತ್ಸವವನ್ನು ವಿಶೇಷವಾಗಿ ಆಚರಣೆ ಹಾಗೂ ಆಕರ್ಷಕ ದೀಪಾಲಂಕಾರ ಹಾಗೂ ಪುಷ್ಪಾಲಂಕಾರ ಮಾಡಲಾಗುತ್ತದೆ ಎಂದರು.

ಚೆಲುವನಾರಾಯಣಸ್ವಾಮಿಯವರ ಉತ್ಸವ ನಡೆಯುವ ಬೀದಿಗಳ ಎರಡೂ ಕಡೆಗಳಲ್ಲಿ ಉದ್ದಕ್ಕೂ ತೆರೆದ ಚರಂಡಿಗಳಿವೆ. ಇದನ್ನು ಮುಚ್ಚಲು ಕ್ರಮವಹಿಸಿದ್ದೇವೆ. ಭಕ್ತರು ಪುಷ್ಪಾಲಂಕಾರ, ಪ್ರಸಾದ, ದೀಪಾಲಂಕಾರ ಸೇರಿದಂತೆ ಯಾವುದೇ ಸೇವೆಗಳನ್ನು ಮಾಡಬಹುದು. ಸೇವಾರ್ಥದಾರರ ಹೆಸರನ್ನು ವೈರಮುಡಿ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವ ಜೊತೆಗೆ ವಿಶೇಷ ಗೌರವ ಸಮರ್ಪಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ರತಿವರ್ಷ ಬ್ರಹ್ಮೋತ್ಸವದಲ್ಲಿ ಮಾಡುತ್ತಿದ್ದ ದೀಪಾಲಂಕಾರವನ್ನು ಬದಲಾಯಿಸಿ ಆಕರ್ಷಕವಾಗಿ ದೀಪಾಲಂಕಾರ ಮಾಡಲಾಗುತ್ತದೆ. ಕಲ್ಯಾಣಿ, ಬೆಟ್ಟ ಹಾಗೂ ರಾಜಬೀದಿ ಸ್ಮಾರಕಗಳಿಗೆ ನಯನ ಮನೋಹರ ದೀಪಾಲಂಕಾರ ಮಾಡಲಾಗುತ್ತದೆ. ಸರಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಸಹ ಆಯೋಜಿಸಲಾಗುತ್ತದೆ ಎಂದರು.

ವ್ಯವಸ್ಥಾಪನಾ ಸಮಿತಿ ಸದಸ್ಯ ವಕೀಲ ಕಾಡೇನಹಳ್ಳಿ ಸತೀಶ್ ಮಾತನಾಡಿ, ದೇವಾಲಯದ ಮುಂಭಾಗದ ಚಪ್ಪರವನ್ನು ಆಕರ್ಷಕವಾಗಿ ಶಾಶ್ವತವಾಗಿ ನಿರ್ಮಾಣ ಮಾಡಲಾಗುತ್ತದೆ. ದೇಗುಲದ ಮುಂಭಾಗ ಹಳೆಯ ಬ್ಯಾರಿಕೇಡ್‌ಗಳನ್ನು ತೆಗೆದು ಎಸ್.ಎಸ್ ಬ್ಯಾರಿಕೇಡ್ ಹಾಕಲಾಗುತ್ತದೆ. ಅನಗತ್ಯ ನಾಮಫಲಕಗಳು, ಕಬ್ಬಿಣದ ಕಂಬಗಳನ್ನು ತೆಗೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಬ್ರಹ್ಮೋತ್ಸವ ವೇಳೆ ಉತ್ಸವ ಬೀದಿಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗುತ್ತದೆ. ಕೋತಿಗಳ ಹಾವಳಿ, ಬೀಡಾಡಿ ದನಗಳು, ಆಡುಗಳ ಕಾಟ ತಪ್ಪಿಸಲಾಗುವುದು. ಈ ವರ್ಷ ವೈರಮುಡಿ ಜಾತ್ರೆ ಆಹ್ವಾನ ಪತ್ರಿಕೆ ವಿನ್ಯಾಸವನ್ನು ಹೊಸತನಕ್ಕೆ ಬದಲಾಯಿಸಿ ಆಕರ್ಷಕವಾಗಿ ಮುದ್ರಿಸಲಾಗುತ್ತದೆ ಎಂದು ತಿಳಿಸಿದರು.

ಜಾತ್ರಾ ಮಹೋತ್ಸವದ ವೇಳೆ ಉತ್ಸವ ಬೀದಿ ದೇವಾಲಯದ ಹೊರ ಹಾಗೂ ಒಳ ಆವರಣಗಳು, ಸ್ಮಾರಕಗಳ ಬಳಿ ಸ್ವಚ್ಛತೆಗೆ ಆಧ್ಯತೆ ನೀಡಲಾಗಿದೆ. ಭಕ್ತರಿಗೆ ಶುದ್ಧೀಕರಿಸಿದ ಕುಡಿಯುವ ನೀರು ಒದಗಿಸಲು ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ ಹಿರಿಯ ಸದಸ್ಯರಾದ ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಡಾ.ವೆಂಕಟರಾಮೇಗೌಡ ವೈರಮುಡಿ ಜಾತ್ರೆ ಬಗ್ಗೆ ಹಲವು ಪ್ರಮುಖ ಸಲಹೆಗಳನ್ನು ನೀಡಿದರು. ಸದಸ್ಯರಾದ ಶೋಭಾ, ಡಾ.ಪ್ರೀತಿ ಮಹದೇವ್, ವೆಂಕಟೇಶ್, ರಾಜು ಕೆ.ಎಚ್. ಪುಟ್ಟಸ್ವಾಮಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಭಾಗವಹಿಸಿದ್ದರು.

ಸಾಮಾನ್ಯ ಭಕ್ತರ ಒತ್ತಾಯಕ್ಕೆ ಮನ್ನಣೆ ನೀಡಿ ಕಲ್ಯಾಣಿ ಪೂಜೆಗೆ ನಿಗಧಿ ಮಾಡಿದ್ದ ₹20 ಶುಲ್ಕವನ್ನು ರದ್ದು ಮಾಡಲಾಗಿದೆ. ಜಾತ್ರೆ ವೇಳೆ ವಿಶೇಷ ದರ್ಶನಕ್ಕೆ ಸಾವಿರ ರು. ಶುಲ್ಕ ನಿಗಧಿ ಮಾಡಲಾಗಿದೆ. ದೇವಾಲಯದ ಚಿನ್ನದ ಗೋಪುರದ ಬಳಿ ವಿಶೇಷ ಹುಂಡಿ ಇಡಲು ತೀರ್ಮಾನಿಸಿದೆ ಎಂದು ಪರಮೇಶ್ ಗೌಡ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಲ್ಯವಿವಾಹ ತಡೆಗೆ ಇಲಾಖೆಗಳ ಮಧ್ಯೆ ಸಮನ್ವಯ ಅಗತ್ಯ
ನೌಕರಿ ಮೇಳ: 1290ರಲ್ಲಿ 190 ಮಂದಿಗೆ ಉದ್ಯೋಗ