ಕೋಲಾರ: ಮುಂಬರುವ ದಿನಗಳಲ್ಲಿ ಬರ ಪರಿಸ್ಥಿತಿ ಎದುರಿಸಲು ಎಲ್ಲ ಅಧಿಕಾರಿಗಳು ಸಜ್ಜಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ತಿಳಿಸಿದರು.
ಗುರುವಾರ ನಗರದ ಜಿಪಂ ಸಭಾಂಗಣದಲ್ಲಿ ಕೆಡಿಪಿ ಸಭೆಯಲ್ಲಿ ಮಾತನಾಡಿ, ಇತ್ತೀಚಿಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಬಾಲಾಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅಪರಾಧದಲ್ಲಿ ಭಾಗಿಯಾದವರ ಹಾಗೂ ಅವರಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ರಕ್ಷಣಾಧಿಕಾರಿಗೆ ತಾಕಿತು ಮಾಡಿದರು.ಜಿಲ್ಲೆಯಲ್ಲಿ ವಾಡಿಕೆಗಿಂತ ಶೇಕಡಾ ಕಡಿಮೆ ಮಳೆ ಆಗಿದೆ, ಆದರೆ ಮಳೆ ಆಗಬೇಕಾದ ಸಮಯಕ್ಕೆ ಆಗಲಿಲ್ಲ ಆದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ರಾಗಿ ಬಿತ್ತನೆ ಆಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಈಗಾಗಲೇ ಬರ ಎದುರಿಸುವ ಸಂಬಂಧ ಸಭೆ ನಡೆಸಿ ಸಂಬಂಧಿಸಿದವರಿಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ. ತಾಲೂಕುವಾರು ಟಾಸ್ಕ್ಪೋರ್ಸ್ ಸಮಿತಿ ರಚಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಜಿಲ್ಲೆಗಾಗಿ ೯ ಕೋಟಿ ರು.ಗಳ ಅನುದಾನ ಬಿಡುಗಡೆಯಾಗಿದೆ, ಜಿಲ್ಲೆಯಲ್ಲಿ ನೀರಿನ ಕೊರತೆ ಉಂಟಾದಲ್ಲಿ ಸರಿದೂಗಿಸಿಕೊಳ್ಳಲು ಅನುದಾನ ಲಭ್ಯವಿದೆ. ಇಡೀ ಜಿಲ್ಲೆಯಲ್ಲಿ ಪ್ರಸ್ತುತ ನೀರಿನ ಅಭಾವ ಇರುವುದಿಲ್ಲ. ೨-೩ ಹಳ್ಳಿಗಳಲ್ಲಿ ಮಾತ್ರ ಅಭಾವ ಉಂಟಾಗಿದ್ದು, ಆಯಾ ಹಳ್ಳಿಗಳಲ್ಲಿ ನೀರಿನ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎಂದರು.ಸುದೈವದಿಂದ ಈವರೆಗೆ ಜಿಲ್ಲೆಯಲ್ಲಿ ಯಾವುದೇ ಮಾನವ ಜೀವ ಹಾನಿಯಾಗಿಲ್ಲ. ಆದರೆ ೨ ಜಾನುವಾರು ಜೀವ ಹಾನಿಯಾಗಿದೆ. ಅದಕ್ಕಾಗಿ ಪರಿಹಾರ ವಿತರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಉಂಟಾಗಬಹುದಾದ ಕೊರತೆ ಅಂದಾಜಿಸಲಾಗಿದೆ. ಮುಂಬರುವ ಬೇಸಿಗೆಯಲ್ಲಿ ಉದ್ಭವವಾಗುವ ನೀರಿನ ಕೊರತೆಗನುಗುಣವಾಗಿ ಸಾಕಷ್ಟು ಮೇವು ಕಿಟ್, ಕುಡಿಯುವ ನೀರಿಗಾಗಿ ಅಂರ್ತಜಲ ಕೊಳೆವೆಬಾವಿಗಳನ್ನು ಗುತ್ತಿಗೆ ಪಡೆಯುವ ಯೋಜನೆ ರೂಪಿಸಿದೆ ಎಂದು ತಿಳಿಸಿದರು.ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಕಳೆದ ಸಭೆಯಲ್ಲಿ ಕೋರಿರುವ ಮಾಹಿತಿಗೆ ಸಂಬಂಧಿತ ಅಧಿಕಾರಿಗಳು ಈವರೆಗೆ ಉತ್ತರ ನೀಡಿಲ್ಲ, ಔಷಧಿ ಮಳಿಗೆಗಳಲ್ಲಿ ಅನಧಿಕೃತವಾಗಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲಾಗುತ್ತಿರುವ ವ್ಯವಸ್ಥೆಯ ವಿರುದ್ಧ ಅನಿರೀಕ್ಷಿತ ದಾಳಿಗಳನ್ನು ನಡೆಸಿ ಮಾದಕ ದ್ರವ್ಯಗಳನ್ನು ಜಪ್ತಿ ಮಾಡಬೇಕು ಎಂದು ಸೂಚಿಸಿದರು.
ಅನೈತಿಕ ಚಟುವಟಿಕೆಗಳಿಗೆ ಕೆಲ ಪೊಲೀಸ್ ಅಧಿಕಾರಿಗಳ ಕುಮ್ಮಕ್ಕು ಇದೆ ಎಂಬ ಅಪಾಧನೆಗೆ ಸಚಿವರು ಮುಳಬಾಗಿಲು ಮತ್ತು ಕೆಜಿಎಫ್ ತಾಲೂಕುಗಳ ೨೭ ಸ್ಟೇಷನ್ಗಳ ಅಧಿಕಾರಿ ಸಿಬ್ಬಂದಿಗಳನ್ನು ಸ್ಥಳ ಬದಲಾವಣೆ ಮಾಡುವಂತೆ ಸೂಚಿಸಿದರು.ಜಿಲ್ಲೆಯಲ್ಲಿ ಬಾರ್ ಮತ್ತು ವೈನ್ ಶಾಪ್ಗಳು ನಿಗದಿತ ಅವಧಿಯ ನಂತರವೂ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದ್ದು ಅಬಕಾರಿ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಯಾವುದೇ ಹೊಸ ಸಿ.ಎಲ್ ೭ ಸ್ಥಾವರಗಳಿಗೆ ಅನುಮತಿ ನೀಡಲಾಗುವುದಿಲ್ಲ, ಈಗಾಗಲೇ ಅನುಮತಿ ಪಡೆದಿರುವ ಸಿ.ಎಲ್ ೭ ಸ್ಥಾವರಗಳನ್ನು ಅಬಕಾರಿ ಅಧಿಕಾರಿಗಳೇ ಬೇನಾಮಿ ಹೆಸರಿನಲ್ಲಿ ನಡೆಸುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಬಕಾರಿ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ೧೫ ದಿನಗಳೂಳಗಾಗಿ ಸುದೀರ್ಘ ವರದಿ ನೀಡುವಂತೆ ತಿಳಿಸಿದರು. ಜಿಲ್ಲೆಯ ಯುವ ಜನತೆಗೆ ಮಾದಕ ದ್ರವ್ಯಗಳ ಪರಿಣಾಮದ ಬಗ್ಗೆ ಅಬಕಾರಿ ಇಲಾಖೆಯಿಂದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ, ಈಗಾಗಲೇ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ೫೩ಸಾವಿರ ಹೆಕ್ಟೇರ್ ಜಮೀನಿನಲ್ಲಿ ಪ್ರಮುಖ ಬೆಳೆಯಾದ ರಾಗಿ ಬಿತ್ತನೆ ಮಾಡಲಾಗಿದೆ. ಶೇ.೫೨ ರಷ್ಟು ಬಿತ್ತನೆ ಆಗಿದೆ, ಹಿಂಗಾರು ಹಂಗಾಮಿನಲ್ಲಿ ೨೬೦೦ ಹೆಕ್ಟೇರ್ ಹುರುಳಿ ಬಿತ್ತನೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ೪.೭ ಕೋಟಿ ಬೆಳೆ ಪರಿಹಾರ ೧೦೭೦೦ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ನ.೧೫ರಂದು ೨೦.೯೨ ಕೋಟಿ ಮೊತ್ತದ ಅನುದಾನ ೯೨೦೦೦ ಫಲಾನುಭವಿಗಳ ಖಾತೆಗೆ ನೇರವಾಗಿ ವಿತರಿಸಲಾಗಿದೆ ಎಂದು ಸಭೆಗೆ ತಿಳಿಸಿದರು.ಸಚಿವರು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಆಲೂಗಡ್ಡೆ ಬೆಳೆಗೆ ಕಳಪೆ ಬೀಜ ಸರಬರಾಜು ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅಕ್ರಮ ಮರಳು ಸಾಗಣಿಕೆ ವಿಷಯವಾಗಿ ಕೇವಲ ಕೃಷಿ ಉದ್ದೇಶಕ್ಕೆ ಪಿಡಿಓಗಳಿಂದ ಅನುಮತಿ ಪಡೆದುಕೊಂಡು ಕೆರೆಗಳಲ್ಲಿ ಮಣ್ಣು ತೆಗೆಯಲು ಸುತ್ತೋಲೆ ಹೊರಡಿಸಲು ಸಿಇಓಗೆ ಸೂಚಿಸಿದರು.ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಈಗಾಗಲೇ ೨ನೇ ಕಂತು ಹಣ ಬಿಡುಗಡೆ ಮಾಡಲಾಗಿದ್ದು ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಿ ಉಳಿದ ೨೫೦೦೦ ಫಲಾನುಭವಿಗಳಿಗೆ ಹಣ ತಲುಪುವಂತೆ ಕ್ರಮ ವಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಗೆ ಸೂಚಿಸಿದರು.
ಎಂ.ಆರ್.ಐ ಯಂತ್ರಕ್ಕೆ ಪ್ರಸ್ತಾವನೆ ಸಲ್ಲಿಸಿಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕೆ.ಜಿ.ಎಫ್ ನಲ್ಲಿ ಎಂ.ಆರ್.ಐ ಯಂತ್ರ ಸ್ಥಾಪಿಸಲು ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮಂಜೂರು ಮಾಡಿಸಲಾಗುವುದು, ಖಾಲಿ ಇರುವ ವೈದ್ಯರ ಹುದ್ದೆಗಳನ್ನು ತಕ್ಷಣವೇ ತುಂಬುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ಅಗತ್ಯವಿರುವ ಕಡೆ ಹೊಸ ನಮ್ಮ ಕ್ಲಿನಿಕ್ಗಳನ್ನು ಆರಂಭಿಸಲು ಕ್ರಮ ವಹಿಸುವಂತೆ ಸೂಚಿಸಿದರು.ಯರಗೊಳ್ ಕುಡಿಯುವ ನೀರು ಯೋಜನೆಯಡಿಯಲ್ಲಿ ಕೋಲಾರ ತಾಲೂಕಿನ ೨೫೦೦ ಮನೆಗಳಿಗೆ ಇನ್ನೂ ಕುಡಿಯುವ ನೀರು ಬರುತ್ತಿಲ್ಲ. ಮುಂದಿನ ೪೫ ದಿನಗಳಲ್ಲಿ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡಲು ಸೂಕ್ತ ಕ್ರಮ ವಹಿಸುವಂತೆ ಹಾಗೂ ಮಾಲೂರು ತಾಲೂಕಿಗೆ ಸರಬರಾಜು ಮಾಡಲಾಗುವ ಮಾರ್ಗ ಮಧ್ಯೆ ಪೈಪ್ಲೈನ್ಗಳ ಸೋರಿಕೆ ತಡೆಗಟ್ಟಲು ಕೂಡಲೇ ಕ್ರಮ ವಹಿಸುವಂತೆ ತಿಳಿಸಿದರು.ಸಭೆಯಲ್ಲಿ ಸಂಸದ ಎಸ್.ಮುನಿಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ಕೆ.ವೈ ನಂಜೇಗೌಡ, ಸಮೃದ್ಧಿ ಮಂಜುನಾಥ್, ಜಿ.ಕೆ.ವೆಂಕಟಶಿವಾರೆಡ್ಡಿ, ಎಂಎಲ್ಸಿಗಳಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ಜಿಪಂ ಆಡಳಿತಾಧಿಕಾರಿ ಡಾ.ಏಕ್ರೂಪ್ಕೌರ್, ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ರಕ್ಷಣಾಧಿಕಾರಿ ಎಂ.ನಾರಾಯಣ, ಕೆ.ಜಿ.ಎಫ್ ಪೊಲೀಸ್ ಅಧೀಕ್ಷಕ ಎಸ್.ಶಾಂತರಾಜು, ಜಿಪಂ ಸಿಇಓ ಪದ್ಮ ಬಸವಂತಪ್ಪ, ಜಿಲ್ಲಾ ಉಪ ಅರಣ್ಯ ವಿಭಾಗಧಿಕಾರಿ ಏಡುಕೊಂಡಲು ಇದ್ದರು.