ದೇವಾಲಯಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ

KannadaprabhaNewsNetwork | Published : Apr 2, 2024 1:07 AM

ಸಾರಾಂಶ

ಇಂದಿನ ಒತ್ತಡದ ಜೀವನದಲ್ಲಿ ಮಾನವರಾದ ನಾವು ಮನಸ್ಸಿಗೆ ಶಾಂತಿ ನೆಮ್ಮದಿ ಪಡೆಯ ಬೇಕಾದರೆ ದೈವ ಮಾರ್ಗದಲ್ಲಿ ಸಾಗುವುದು ಅನಿವಾರ್ಯ. ನಾವು ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಬೇಕಾದರೆ ಭಗವಂತನ ನಾಮ ಸ್ಮರಣೆ ಮಾಡಿದರೆ ಖಂಡಿತವಾಗಿ ಕಾರ್ಯ ಸಾಧನೆ ಆಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಶರಣ ಶ್ರದ್ಧಾ ಕೇಂದ್ರಗಳಾಗಿರುವ ದೇವಾಲಯಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಆದಿಚುಂಚನಗಿರಿ ವಿಶ್ವಮಾನವ ಕ್ಷೇತ್ರದ ಕಾರ್ಯದರ್ಶಿ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಸಿಂಧಘಟ್ಟ ಗ್ರಾಮದೇವತೆ ಶ್ರೀಲಕ್ಷ್ಮೀದೇವಿ ಅಮ್ಮನವರ ನೂತನ ದೇವಾಲಯದ ಲೋಕಾರ್ಪಣೆ ಹಾಗೂ ನೂತನ ಶಿಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆಯಲ್ಲಿ ಆಶೀರ್ವಚನ ನೀಡಿ, ನಮ್ಮ ಸಂಸ್ಕೃತಿ ಪರಂಪರೆ ಹಾಗೂ ನೆಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ದೇವಾಲಯಗಳ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು.

ಇಂದಿನ ಒತ್ತಡದ ಜೀವನದಲ್ಲಿ ಮಾನವರಾದ ನಾವು ಮನಸ್ಸಿಗೆ ಶಾಂತಿ ನೆಮ್ಮದಿ ಪಡೆಯ ಬೇಕಾದರೆ ದೈವ ಮಾರ್ಗದಲ್ಲಿ ಸಾಗುವುದು ಅನಿವಾರ್ಯ. ನಾವು ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಬೇಕಾದರೆ ಭಗವಂತನ ನಾಮ ಸ್ಮರಣೆ ಮಾಡಿದರೆ ಖಂಡಿತವಾಗಿ ಕಾರ್ಯ ಸಾಧನೆ ಆಗುತ್ತದೆ ಎಂದರು.

ಸಿಂಧಘಟ್ಟ ಗ್ರಾಮಸ್ಥರು ಶ್ರೀಲಕ್ಷ್ಮೀದೇವಿ ಅಮ್ಮನವರ ನೂತನ ದೇವಾಲಯವನ್ನು ಅದ್ಭುತವಾಗಿ ನಿರ್ಮಾಣ ಮಾಡಿಸುವ ಮೂಲಕ ಇಡೀ ನಾಗರಿಕ ಸಮಾಜವೇ ಮೆಚ್ಚುವ ಕೆಲಸ ಮಾಡಿದ್ದಾರೆ ಎಂದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ಶ್ರೀಲಕ್ಷ್ಮಿದೇವಿ ದೇವಾಲಯ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಹಾಗೂ ಒಕ್ಕಲಿನವರು ಮತ್ತು ಸರ್ಕಾರ, ದಾನಿಗಳ ಶ್ರಮದಿಂದ ಇಂದು ದೇವಿ ಇಲ್ಲಿ ನೆಲೆಸಿದ್ದಾಳೆ. ತಾಯಿ ಲಕ್ಷ್ಮಿದೇವಿ ಕಾಲಕಾಲಕ್ಕೆ ಮಳೆ, ಬೆಳೆ ಕರುಣಿಸಿ ತನ್ನ ಭಕ್ತರನ್ನು ಸಂಕಷ್ಟದಿಂದ ದೂರಮಾಡಿ ಸುಖ ಶಾಂತಿ, ನೆಮ್ಮದಿಯಿಂದ ಸಾಮರಸ್ಯದ ಜೀವನ ನಡೆಸಲು ಎಲ್ಲರಿಗೂ ಪ್ರೇರಣೆ ನೀಡಲಿ ಎಂದು ಶುಭಕೋರಿದರು.

ಈ ವೇಳೆ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ರಾಜ್ಯ ಹಾಲು ಒಕ್ಕೂಟದ ನಿರ್ದೇಶಕ ಎಸ್.ಸಿ.ಅಶೋಕ್, ಮುಖಂಡರಾದ ಸಿಂಧಘಟ್ಟ ಅರವಿಂದ್, ಎಚ್.ಟಿ. ಲೋಕೇಶ್, ಸಿಂಧಘಟ್ಟ ಗ್ರಾಪಂ ಅಧ್ಯಕ್ಷೆ ದಿವ್ಯಾ ಗಿರೀಶ್, ಮಾಜಿ ಅಧ್ಯಕ್ಷ ರವಿಕುಮಾರ್, ಕುಮಾರಸ್ವಾಮಿ, ಮುದ್ದುಕುಮಾರ್, ಸೇರಿದಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.

ಸಾಲಿಗ್ರಾಮ ಶ್ರೀ ಸುಬ್ರಮಣ್ಯ ಜೋಯಿಸ್, ಪ್ರಧಾನ ಅರ್ಚಕರಾದ ರಮೇಶ್ ಪೂಜಾರಿ ಅವರು ಮೂರು ದಿನಗಳ ಕಾಲ ನಡೆದ ಪೂಜಾ ವಿದಿ ವಿಧಾನಗಳ ನೇತೃತ್ವ ವಹಿಸಿದ್ದರು.

Share this article