- ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಬನದ ಹುಣ್ಣಿಮೆ ಕಾರ್ಯಕ್ರಮ: ಸನ್ಮಾನ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಂಗೀತ ಕಲೆಗಳನ್ನು ಶಾಸ್ತ್ರೀಯವಾಗಿ ಕಲಿತು, ಸೂಕ್ತ ರೀತಿಯಲ್ಲಿ ಬೆಳೆಸುವ ನಿಟ್ಟಿನಲ್ಲಿ ಕೆಲಸವಿರಬೇಕು. ಮುಂದೆ ನೀವೆಲ್ಲರೂ ಪರಮಪೂಜ್ಯ ಪುಟ್ಟಯ್ಯಜ್ಜ ಅವರ ಹೆಸರುಗಳನ್ನ ಉಳಿಸಿಕೊಂಡು ಆಶ್ರಮಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು. ಇನ್ನೂ ಹೆಚ್ಚಿನ ರೀತಿಯಲ್ಲಿ ಅಂಧ ಅನಾಥ ಮಕ್ಕಳು ನಮ್ಮ ಆಶ್ರಮಕ್ಕೆ ಬರಬೇಕು. ಇದು ನನ್ನ ಆಸೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.ನಗರದ ಬಾಡಾ ಕ್ರಾಸ್ನಲ್ಲಿರುವ ಡಾ. ಪಂ.ಪುಟ್ಟರಾಜ ಕವಿ ಗವಾಯಿಯವರ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಇತ್ತೀಚೆಗೆ ನಡೆದ 299ನೇ ಬನದ ಹುಣ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕಸಾಪ ಜಿಲ್ಲಾ ಕೋಶಾಧ್ಯಕ್ಷ ರಾಘವೇಂದ್ರ ನಾಯರಿ ಮಾತನಾಡಿ, 2006 ರಿಂದಲೂ ಶ್ರೀ ವೀರೇಶ್ವರ ಪುಣ್ಯಾಶ್ರಮದ ನಂಟಿ ಹೊಂದಿದ್ದೇನೆ. ಗುರುಗಳ ಬಗ್ಗೆ ಅಪಾರ ಅಭಿಮಾನ ಹೊಂದಿ, ಸಹಾಯ ಮಾಡುತ್ತ ಬಂದಿದ್ದೇವೆ. ಸಮಾಜದಲ್ಲಿ ಏನೂ ಸಾಧಿಸಲು ಆಗದಿದ್ದರೆ ಕೊನೆಪಕ್ಷ ಹೆತ್ತ ತಂದೆ- ತಾಯಿಯನ್ನಾಧರೂ ಚೆನ್ನಾಗಿ ನೋಡಿಕೊಳ್ಳಿ. ಅದೇ ನಿಜವಾದ ಧರ್ಮದ ಕಾರ್ಯ. ಅಂಧರ ಬಾಳಿನ ಸೂರ್ಯ-ಚಂದ್ರರಂತೆ ಯಾರಾದರು ಈ ಪ್ರಪಂಚದಲ್ಲಿ ಇದ್ದಾರೆಂದರೆ ಅದು ಪಂಚಾಕ್ಷರಿ ಅಜ್ಜನವರು ಹಾಗೂ ಪುಟ್ಟರಾಜ ಅಜ್ಜನವರು ಎಂದು ಹೇಳಿದರು.
ಅಭಾವೀಲಿಂ ಮಹಾಸಭಾ ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರ, ಆಶ್ರಮದ ಕಾರ್ಯದರ್ಶಿ ಎ.ಎಚ್. ಸಿದ್ದಲಿಂಗ ಸ್ವಾಮಿ, ಅಮರಯ್ಯ ಸ್ವಾಮಿ, ಚೆನ್ನವೀರಯ್ಯ ಸ್ವಾಮಿ, ಭಕ್ತರು ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಸಂಗೀತ ಸೇವೆಯನ್ನು ನಂದಿತಾ ಉಪಾಧ್ಯಾಯ, ಪಂ.ರವಿ ಆಳಂದ, ಸುರೇಶ ಹಡಪದ, ಮಹಾಂತೇಶ ಕಿರಿಟಗೆರೆ ನಡೆಸಿಕೊಟ್ಟರು.
- - --6ಕೆಡಿವಿಜಿ34:
ದಾವಣಗೆರೆಯ ವೀರೇಶ್ವರ ಪುಣ್ಯಾಶ್ರಮದಲ್ಲಿ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಬನದ ಹುಣ್ಣಿಮೆ ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.