ಕನ್ನಡಪ್ರಭ ವಾರ್ತೆ ಬೇಲೂರುಮನೆಮನೆಗೆ ಪತ್ರಿಕೆ ವಿತರಿಸುತ್ತಿದ್ದ ಯುವಕ ಭಾರತೀಯ ಸೇನೆಗೆ ಆಯ್ಕೆಯಾಗಿರುವುದು ತಾಲೂಕು ಹಾಗೂ ಪತ್ರಿಕಾ ವಿತರಕರ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ಬಿ. ಶಿವರಾಜ್ ಹೇಳಿದರು.ಭಾರತೀಯ ಸೇನೆಗೆ ಆಯ್ಕೆಯಾಗಿರುವ ಬೇಲೂರಿನ ಪತ್ರಿಕಾ ವಿತರಕ ಮಿಥುನ್ ಅವರಿಗೆ ತಾಲೂಕು ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಸಂಘದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವುದು ಸಮಾಜದ ಜವಾಬ್ದಾರಿಯಾಗಿದ್ದು, ಮಿಥುನ್ ಅವರ ಸಾಧನೆ ಇತರ ಯುವಕರಿಗೆ ಸ್ಫೂರ್ತಿಯಾಗಲಿದೆ ಎಂದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಲಕ್ಷ್ಮಣ್ ಮಾತನಾಡಿ, ಸಾಮಾನ್ಯ ಪತ್ರಿಕಾ ವಿತರಕರಾಗಿದ್ದ ಮಿಥುನ್ ಕಠಿಣ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸದಿಂದ ಭಾರತೀಯ ಸೇನೆಗೆ ಆಯ್ಕೆಯಾಗಿದ್ದು ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ದೇಶಸೇವೆಯಲ್ಲಿ ಉನ್ನತ ಸಾಧನೆ ಮಾಡಲಿ ಎಂದು ಹಾರೈಸಿದರು.ಜಿಲ್ಲಾ ಸಂಘದ ನಿರ್ದೇಶಕ ಮಲ್ಲೇಶ್ ಮಾತನಾಡಿ, ಮಿಥುನ್ ತಮ್ಮ ಪರಿಶ್ರಮದ ಮೂಲಕ ದೇಶಸೇವೆ ಮಾಡುವ ಅಪರೂಪದ ಅವಕಾಶ ಪಡೆದಿದ್ದಾರೆ. ಪತ್ರಕರ್ತರ ಸಂಘವು ಯುವಜನರಲ್ಲಿ ದೇಶಭಕ್ತಿ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಇನ್ನಷ್ಟು ಹೆಚ್ಚಿಸಲಿ ಎಂದರು. ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಬಿ.ಎಸ್. ಆರಾಧ್ಯ ಮಾತನಾಡಿ, ಪತ್ರಿಕೆ ವಿತರಣೆಯ ಜೊತೆಗೆ ವೆಲ್ಡಿಂಗ್ ಕೆಲಸ ಮಾಡಿಕೊಂಡು ಗುರಿ ಸಾಧಿಸಿರುವ ಮಿಥುನ್ ಅವರ ಪರಿಶ್ರಮ ಶ್ಲಾಘನೀಯವಾಗಿದೆ. ಭಾರತೀಯ ಸೇನೆಗೆ ಸೇರುವುದು ಸುಲಭದ ಮಾತಲ್ಲ. ದೇಶಸೇವೆಯಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.ಪತ್ರಕರ್ತ ಪೈಂಟ್ ರವಿ ಮಾತನಾಡಿ, ಪತ್ರಕರ್ತರ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಮಿಥುನ್ ಬೆಳಗ್ಗೆ ಪತ್ರಿಕೆ ವಿತರಿಸುತ್ತಾ ಪರಿಶ್ರಮದಿಂದ ಬೆಳೆದ ಅವರು ದೇಶಸೇವೆಯ ಅವಕಾಶ ಪಡೆದಿರುವುದು ಯುವಕರಿಗೆ ಪ್ರೇರಣೆಯಾಗಿದೆ. ಬೆಳಗಾವಿಯಲ್ಲಿ ನಡೆಯುವ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ದೇಶಕ್ಕೆ ಕೀರ್ತಿ ತರಲಿ ಎಂದು ಆಶಿಸಿದರು.