ಕನ್ನಡಪ್ರಭ ವಾರ್ತೆ ಹನೂರು
ಪತ್ರಿಕಾ ಪ್ರತಿನಿಧಿಗಳು ವಿತರಕರು ಇ- ಶ್ರಮ ಯೋಜನೆಯಡಿ ನೊಂದಾಯಿಸಿಕೊಂಡರೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ವಿವಿಧ ಸೌಲಭ್ಯಗಳನ್ನು ಪಡೆಯಬಹುದು ಎಂದು ತಾಲೂಕು ಕಾರ್ಮಿಕ ನಿರೀಕ್ಷಕರಾದ ವಿ.ಎಲ್.ಪ್ರಸಾದ್ ತಿಳಿಸಿದರು.ಪಟ್ಟಣದ ಕಾರ್ಮಿಕ ನಿರೀಕ್ಷಕರ ಕಚೇರಿ, ಕಾರ್ಮಿಕ ಇಲಾಖೆ ಕಚೇರಿಯಲ್ಲಿ ತಾಲೂಕು ಪತ್ರಿಕಾ ಪ್ರತಿನಿಧಿಗಳು ಹಾಗೂ ಇತರರಿಗೆ ಹಮ್ಮಿಕೊಳ್ಳಲಾಗಿದ್ದ ಇ-ಶ್ರಮ್ ನೋಂದಣಿ ಮತ್ತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಪತ್ರಕರ್ತರು ಪತ್ರಿಕಾ ಪ್ರತಿನಿಧಿಗಳು ವಿತರಕರು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರುತ್ತಾರೆ. ಹೀಗಾಗಿ ಅವರ ಕೋರಿಕೆ ಮೇರೆಗೆ ಇ-ಶ್ರಮ್ ಕಾರ್ಡ್ ನೋಂದಣಿ ಮಾಡಿಸಲಾಗುತ್ತಿದೆ, ಪ್ರತಿಯೊಬ್ಬರು ನೋಂದಾವಣೆ ಮಾಡಿಸುವುದರಿಂದ ಅಪಘಾತದಿಂದ ಮರಣ ಹೊಂದಿದ್ದಲ್ಲಿ ವಿಮಾ ಪರಿಹಾರ 2 ಲಕ್ಷ , ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ 2 ಲಕ್ಷ ರು. ಪರಿಹಾರ, ಅಪಘಾತ ಅಥವಾ ಮಾರಣಾಂತಿಕ ಖಾಯಿಲೆ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚ ಮರುಪಾವತಿ 1 ಲಕ್ಷ ರು. ಆಸ್ಪತ್ರೆ ವೆಚ್ಚ ಮರುಪಾವತಿ ಮಾಡಲಾಗುವುದು. ಇದಲ್ಲದೆ ಪ್ರತ್ಯೇಕವಾಗಿ ಜೀವ ವಿಮಾ ನೋಂದಾವಣೆ ಮಾಡಿಸಿಕೊಂಡರೆ ಎರಡು ಲಕ್ಷ ರು. ಪರಿಹಾರ ಸಿಗಲಿದೆ ಎಂದರು.ಕಟ್ಟಡ ನಿರ್ಮಾಣ ಕಾರ್ಮಿಕರಲ್ಲದವರು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಪಡೆದುಕೊಂಡಿರುವ ಲೇಬರ್ ಕಾರ್ಡ್ಗಳನ್ನು ಶೀಘ್ರವೇ ಇಲಾಖೆಗೆ ವಾಪಸ್ ನೀಡಬೇಕು, ಹನೂರು ತಾಲೂಕಿನಲ್ಲಿಯೂ ನಕಲಿ ದಾಖಲೆಗಳನ್ನು ನೀಡಿ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಗೆ ಪಡೆದುಕೊಂಡಿದ್ದಾರೆ. ನೋಂದಣಿಯಾಗಿ ಲೇಬರ್ ಕಾರ್ಡ್ ಪಡೆದಿದ್ದು ಅವರಲ್ಲಿ ಬಹುತೇಕರು ಪ್ರಸ್ತುತವಾಗಿ ನಿಗದಿತ ಕೆಲಸದಲ್ಲಿ ತೊಡಗಿಸಿಕೊಂಡಿಲ್ಲ ಅಂತವರ ವಿರುದ್ಧ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾದೇಶ್ ಮಾತನಾಡಿ, ಸದಾ ಒತ್ತಡದಲ್ಲಿಯೇ ಸುದ್ದಿ ಸಂಗ್ರಹಿಸುವ ಪತ್ರಕರ್ತರಿಗೆ ಹಾಗೂ ವಿತರಕರಿಗೆ ಯಾವುದೇ ಭದ್ರತೆ ಇರಲಿಲ್ಲ. ಇದೀಗ ಅಸಂಘಟಿತ ಕಾರ್ಮಿಕರ ವರ್ಗದಡಿ ಪತ್ರಕರ್ತರಿಗೂ ಸೌಲಭ್ಯ ನೀಡಿರುವುದು ಸಂತಸದ ವಿಚಾರ, ಪ್ರತಿಯೊಬ್ಬ ಪತ್ರಕರ್ತರು ಇ-ಶ್ರಮ ಕಾರ್ಡ್ ಪಡೆಯುವ ಮೂಲಕ ಸರ್ಕಾರದ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕ ಇಲಾಖೆ ಶ್ರೀಧರ್, ಸುನೀಲ್ ಪತ್ರಕರ್ತರುಗಳು ವಿತರಕರು ಹಾಜರಿದ್ದರು.