ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಗುರುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಸನ್ಮಾನ ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತದ ದಿನಮಾನಗಳಲ್ಲಿ ಪ್ರಕಟವಾಗುವ ಸುದ್ದಿಗಳ ಬಗ್ಗೆ ಪರಾಮರ್ಶೆ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ ಎಂದರು.
ಪತ್ರಿಕಾರಂಗ ದೃಶ್ಯ ಮಾಧ್ಯಮದ ಬಂದ ನಂತರ ಬದಲಾವಣೆಗಳನ್ನು ಕಂಡಿದೆ. ಪ್ರಸ್ತುತ ಡಿಜಿಟಲ್ ಯುಗದಿಂದ ಪ್ರತಿಕ್ಷಣ ಅಂಗೈಯಲ್ಲಿ ಸುದ್ದಿ ಪ್ರಸಾರ ಆಗುತ್ತಿದೆ. ವಿಪರ್ಯಾಸವೆಂದರೆ ಪತ್ರಿಕೆಗಳು ಇಂದು ಡಿಜಿಟಲ್ ಯುಗದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ಮಾಧ್ಯಮ ವ್ಯಾಪಾರ ವ್ಯವಸ್ಥೆಯಲ್ಲಿ ಬಂಡವಾಳ ಶಾಹಿ ಹಿಡಿತಕ್ಕೆ ಸಿಲುಕಿ ಗೌನವಾಗಿದೆ. ಸರ್ಕಾರ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್, ಸಂಜೀವಿನಿ ಹಾಗೂ ನಿವೃತ್ತ ಪತ್ರಕರ್ತರಿಗೆ ಪಿಂಚಣಿಯ ಕಠಿಣ ನಿಯಮಾವಳಿ ಸರಳಿಕರಣವಾಗಬೇಕಿದೆ ಎಂದರು.ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಅವರು ವೇಗವಾಗಿರುವ ಸೋಶಿಯಲ್ ಮೀಡಿಯಾದಿಂದ ಪತ್ರಿಕಾರಂಗದಲ್ಲಿ ಬದಲಾವಣೆ ಆಗಿದೆ. ವೇಗದ ಭರಾಟೆಯಲ್ಲಿ ಸುದ್ದಿ ಸತ್ಯಾಸತ್ಯತೆ ಮರೆಮಾಚುವ ಕಾರ್ಯ ಆಗಬಾರದು. ಸತ್ಯ, ನ್ಯಾಯದ ಅಡಿಯಲ್ಲಿ ಮಾಹಿತಿ ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ಅವಸರದ ಸುದ್ದಿ ಪ್ರಸಾರ ಮಾಡದೇ ಪತ್ರಕರ್ತರು ಸರಿಯಾದ ಮಾಹಿತಿಯನ್ನು ಬಿತ್ತರಿಸಬೇಕು. ಜಿಲ್ಲೆಯ ಪತ್ರಕರ್ತರು ಮಾಹಿತಿ ಪಡೆದು ಸುದ್ದಿ ಪ್ರಸಾರದ ಕಾರ್ಯಮಾಡುತ್ತಿರುವುದು ಕಾರ್ಯವನ್ನು ಶ್ಲಾಘಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದಲ್ಲಿ ಎಲ್ಲರೂ ಸಮಾನರು. ಮಾಧ್ಯಮ ಮುಂದೆ ಎಲ್ಲರೂ ಒಂದೇ. ಹೊಸ ಹೊಸ ಸಮಸ್ಯೆಗಳನ್ನು ಪತ್ರಿಕಾರಂಗ ಎದುರುಸುತ್ತಿದೆ. ವೇಗವಾಗಿ ಮಾಧ್ಯಮ ಬೆಳೆಯುತ್ತಿದೆ. ಪೊಲೀಸರ ಜನಜಾಗೃತಿ ಕಾರ್ಯಕ್ಕೆ ಸಹಕಾರ ನೀಡಿದನ್ನು ಸ್ಮರಿಸಿದರು.
ಎಸ್.ಎಸ್.ಎಲ್.ಸಿ ಹಾಗೂ ಪಿ.ಯುಸಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ರಾಜ್ಯ ಕಾನಿಪದ ಕಾರ್ಯಕಾರಣಿ ಸದಸ್ಯ ಮಹೇಶ ಅಂಗಡಿ, ಜಿಲ್ಲಾ ಕಾನಿಪದ ಅಧ್ಯಕ್ಷ ಆನಂದ ದಲಭಂಜನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಕಸ್ತೂರಿ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.