-ಬರಗಾಲ ಘೋಷಣೆ ನಿಯಮ ಸರಳಗೊಳಿಸಲು ಒತ್ತಾಯ
ಕನ್ನಡಪ್ರಭ ವಾರ್ತೆ ಕಲಬುರಗಿ
ದಿಲ್ಲಿಗೆ ತೆರಳಿ ಬರಗಾಲ ನಿರ್ವಹಣೆಗಾಗಿ ಹಣ ತರುವುದರ ಜತೆಗೆ ಬರಗಾಲ ಘೋಷಣೆಗೆ ಇರುವ ನಿಯಮಗಳ ಕುರಿತು ಮಾತನಾಡುವುದು ಹೊರತುಪಡಿಸಿ ದಿನವೂ ಬಿಜೆಪಿಯವರು ರಸ್ತೆಗಿಳಿದು ಆರ್ಭಟಿಸಿ ಗದ್ದಲ ಎಬ್ಬಿಸುತ್ತಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರ್ಕಾರದಲ್ಲಿದ್ದಂತಹ ಬರಗಾಲ ಘೋಷಣೆಯ ಮಾನದಂಡಗಳನ್ನು ಎನ್ಡಿಎ ಸರ್ಕಾರ ಬದಲಾಯಿಸಿದೆ. ಹೀಗಾಗಿ ರಾಜ್ಯದ ಪಾತ್ರ ಈಗ ಏನೂ ಇಲ್ಲ. ಎನ್ಡಿಆರ್ಎಫ್ ಮಾನದಂಡಗಳ ಪ್ರಕಾರವೇ ಎಲ್ಲಾ ನಡೆಯಬೇಕಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ನಿಯಮ ಸರಳೀಕರಣಗೊಳಿಸಲಿ ಎಂದು ಸಚಿವ ಖರ್ಗೆ ಸಲಹೆ ನೀಡಿದರು.
ಬಿ.ನಾಗೇಂದ್ರಗೆ ಮಂತ್ರಿಗಿರಿ: ಖರ್ಗೆ ಸಮರ್ಥನೆಬಿ ನಾಗೇಂದ್ರ ಕಳಂಕಿತರಾಗಿದ್ದು, ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದು ತಪ್ಪು ಎಂಬ ಬಿಜೆಪಿಯ ಆರೋಪಗಳ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಹೇಳಿದಾಕ್ಷಣ ನಾಗೇಂದ್ರ ಅವರು ಕಳಂಕಿತರಲ್ಲ. ಹಿಂದೆ ರೆಡ್ಡಿ ಗ್ರೂಪ್ ಸಹಿತ ಅನೇಕರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ಇಂತಹ ಆರೋಪಗಳು ಬಿಜೆಪಿ ಮಾಡೋದು ಬಿಟ್ಟು ಕೇಂದ್ರದ ಮೇಲೆ ಒತ್ತಡ ಹೇರಿ ಪರಿಹಾರ ತರಿಸಬೇಕು. ಬಿಜೆಪಿಯ ಬಹುಸಂಖ್ಯಾತ ಸಂಸದರು ರಾಜ್ಯಕ್ಕೆ ತೆರಿಗೆ ಅನ್ಯಾಯವಾದಾಗ ಧ್ವನಿ ಎತ್ತಿಲ್ಲ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಯವರು ಸದಾ ಮೌನಿಗಳಾಗಿರುತ್ತಾರೆ ಎಂದು ಸಚಿವ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ