ಬಿಸಿಯೂಟ ತಯಾರಿಕರ ಬೇಡಿಕೆ ಈಡೇರಿಸಲು ಸಿಎಂ ಮೇಲೆ ಒತ್ತಡ

KannadaprabhaNewsNetwork | Published : Mar 3, 2025 1:47 AM

ಸಾರಾಂಶ

ಚಳ್ಳಕೆರೆ ತಾಲೂಕು ಮಟ್ಟದ ಬಿಸಿಯೂಟ ಮುಖ್ಯ ಹಾಗೂ ಸಹಾಯಕ ಅಡುಗೆ ತಯಾರಿಕರಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು.

ಬಿಸಿಯೂಟ ಅಡುಗೆ ತಯಾರಿಕೆ ತರಬೇತಿ ಕಾರ್ಯಗಾರದಲ್ಲಿ ಶಾಸಕ ಟಿ.ರಘುಮೂರ್ತಿ ಭರವಸೆ ಕನ್ನಡಪ್ರಭ ವಾರ್ತೆ ಚಳ್ಳಕೆರೆ

ರಾಜ್ಯ ಸರ್ಕಾರ ಪ್ರತಿನಿತ್ಯ ಶಾಲೆಗೆ ಕಲಿಯಲು ಬರುವ ಎಲ್ಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಮೂಲಕ ಅವರ ಹಸಿವನ್ನು ತಣಿಸುತ್ತಾ ಬಂದಿದೆ. ಅಕ್ಷರ ಜ್ಞಾನದ ಜೊತೆಗೆ ಅನ್ನದಾಸೋಹ ನೀಡುವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ಮಾಡುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಭಾನುವಾರ ನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲಾ ಆವರಣದಲ್ಲಿ ತಾಲೂಕು ಮಟ್ಟದ ಬಿಸಿಯೂಟ ಮುಖ್ಯ ಹಾಗೂ ಸಹಾಯಕ ಅಡುಗೆ ತಯಾರಿಕರಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಹಲವು ದಶಕಗಳಿಂದ ಬಿಸಿಯೂಟ ತಯಾರಕರು ಸೇವಾ ಭದ್ರತೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಾ ಬಂದಿದ್ದಾರೆ. ಎಐಟಿಯುಸಿ ನೇತೃತ್ವದ ಸಂಘಟನೆ ಇದರ ಜವಾಬ್ದಾರಿ ಹೊತ್ತಿದೆ. ನಾನು ಸಹ ಬಿಸಿಯೂಟ ತಯಾರಿಕರ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತೇನೆ. ಈ ಬಾರಿಯ ಆಯವ್ಯಯ ಮಂಡನೆ ವೇಳೆ ನಿಮ್ಮ ಬೇಡಿಕೆಗಳ ಈಡೇರಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ ಮಾತನಾಡಿ, ಪ್ರಧಾನಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ ಮಧ್ಯಾಹ್ನ ಉಪಹಾರ ಯೋಜನೆ, ಶಾಲಾ ಶಿಕ್ಷಣ ಇಲಾಖೆ, ತಾಪಂ ಸಹಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರತಿ ವರ್ಷವೂ ಕ್ಷೇತ್ರದ ಶಾಸಕರ ಮಾರ್ಗದರ್ಶನದಲ್ಲಿ ಮುಖ್ಯ ಮತ್ತು ಸಹಾಯಕ ಅಡುಗೆ ತಯಾರಿಕರಿಗೆ ಒಂದು ದಿನದ ತರಬೇತಿ ನೀಡಿ ಅವರು ನಿರ್ವಹಿಸುವ ಜವಾಬ್ದಾರಿ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಪ್ರತಿಯೊಬ್ಬಮುಖ್ಯ ಮತ್ತು ಅಡುಗೆ ಸಹಾಯಕ ಜವಾಬ್ದಾರಿಗೆ ಗೌರವಿದೆ. ಕಾರಣ ಪ್ರತಿನಿತ್ಯವೂ ಮಕ್ಕಳಿಗೆ ಗುಣಮಟ್ಟದ ಆಹಾರವನ್ನು ಸರಿಯಾದ ಸಮಯಕ್ಕೆ ನೀಡಬೇಕಿದೆ. ತಾಲೂಕಿನಾದ್ಯಂತ ಒಟ್ಟು 446 ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ನಡೆಯುತ್ತಿದೆ. 439 ಮುಖ್ಯ ಅಡುಗೆ ತಯಾರಕರು, 549 ಸಹಾಯಕ ಅಡುಗೆ ತಯಾರಕರು, ಒಟ್ಟು 993 ಅಡುಗೆ ತಯಾರಿಕರು ತಾಲೂಕಿನಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಎಐಟಿಯುಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ವೈ.ಶಿವರುದ್ರಪ್ಪ ಮಾತನಾಡಿ, ಪ್ರತಿನಿತ್ಯ ಮುಗ್ದ ಮಕ್ಕಳ ಹಸಿವನ್ನು ನೀಗಿಸುವ ಕಾರ್ಯವನ್ನು ಉತ್ತಮವಾಗಿ ಅಡುಗೆ ತಯಾರಿಸಿ ನೀಡುವ ಬಿಸಿಯೂಟ ತಯಾರಿಕೆ ಸಮಸ್ಯೆಗಳ ನಿವಾರಣೆಗೆ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲವೆಂದರು.

ಕಾರ್ಯಕ್ರಮದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

Share this article