ಕಳ್ಳಸಾಗಣೆ ತಡೆಗಟ್ಟುವ ದೃಷ್ಟಿಯಿಂದ ಬೆಲೆ ಏರಿಕೆ: ರಾಯರಡ್ಡಿ

KannadaprabhaNewsNetwork | Published : Jun 23, 2024 2:04 AM

ಸಾರಾಂಶ

ರಾಜ್ಯದ ಗಡಿಭಾಗದಲ್ಲಿ ಪೆಟ್ರೋಲ್, ಡೀಸೆಲ್ ಕಳ್ಳಸಾಗಣೆ ತಡೆಗಟ್ಟುವ ದೃಷ್ಟಿಯಿಂದ ಅನ್ಯರಾಜ್ಯಗಳ ಅಪೇಕ್ಷೆ ಮೆರೆಗೆ ಬೆಲೆ ಏರಿಕೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಕುಕನೂರು

ರಾಜ್ಯದ ಗಡಿಭಾಗದಲ್ಲಿ ಪೆಟ್ರೋಲ್, ಡೀಸೆಲ್ ಕಳ್ಳಸಾಗಣೆ ತಡೆಗಟ್ಟುವ ದೃಷ್ಟಿಯಿಂದ ಅನ್ಯರಾಜ್ಯಗಳ ಅಪೇಕ್ಷೆ ಮೆರೆಗೆ ಬೆಲೆ ಏರಿಕೆ ಮಾಡಲಾಗಿದೆ. ಅಲ್ಲದೆ ಅಲ್ಲಿ ಕಡಿಮೆ ಇದ್ದುದರಿಂದ ಹೈ ಬ್ರ್ಯಾಂಡ್ ಮದ್ಯದ ಬೆಲೆ ನಮ್ಮಲ್ಲಿ ಇಳಿಕೆ ಮಾಡಲಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಇಲ್ಲಿನ ತಾಪಂ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಸಮಿತಿಯ ಕೊಠಡಿ ಉದ್ಘಾಟಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರೋಧ ಪಕ್ಷ ಆಗಿದ್ದರಿಂದ ಸಹಜವಾಗಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆಯನ್ನು ಮೊದಲೇ ನಾವು ಏರಿಸುತ್ತಿದ್ದೆವು. ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ನಮಗಿಂತ ಹೆಚ್ಚಿದೆ. ಇದರಿಂದ ನಮ್ಮ ರಾಜ್ಯದ ಗಡಿಯಲ್ಲಿ ಔರಾದ್‌ನಿಂದ ಹಿಡಿದು ಕುಪ್ಪಂನ ಮಾಲೂರುವರೆಗೆ, ಔರಾದ್‌ನಿಂದ ಖಾನಾಪೂರದವರೆಗೂ ಮಹಾರಾಷ್ಟ್ರದ ಗಡಿಯಲ್ಲಿ ನಮ್ಮ ರಾಜ್ಯಕ್ಕೆ ಬಂದು ತೈಲವನ್ನು ಆ ರಾಜ್ಯದವರು ತೆಗೆದುಕೊಂಡು ಹೋಗುತ್ತಿದ್ದರು. ಇದರಿಂದ ಗಡಿಭಾಗದಲ್ಲಿ ಬೆಲೆ ಕಡಿಮೆ ಹಿನ್ನೆಲೆ ಬ್ಲಾಕ್ ದಂಧೆ ಶುರುವಾಗಿತ್ತು.

ಬೇರೆ ರಾಜ್ಯ ಹಾಗೂ ನಮ್ಮಲ್ಲಿ ಸಮವಾಗಿ ಬೆಲೆ ಇರಲಿ ಎಂದು ಬೆಲೆ ಏರಿಸಿದ್ದೇವೆ ಹೊರತು ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಅಲ್ಲದೆ ಹೈ ಬ್ರ್ಯಾಂಡ್ ಮದ್ಯದ ಬೆಲೆ ಕಡಿಮೆ ಮಾಡಿದ್ದೇವೆ. ಬೇರೆ ಬೇರೆ ಕಡೆ ಬೇರೆ ಬೇರೆ ಬೆಲೆ ಇತ್ತು, ಕರ್ನಾಟಕದಲ್ಲಿ ಹೆಚ್ಚಿತ್ತು. ಹಾಗಾಗಿ ಸಮವಾಗಿರಲಿ ಎಂದು ರಾಜ್ಯದಲ್ಲಿ ಬೆಲೆ ಕಡಿಮೆ ಮಾಡಿದ್ದೇವೆ. ಸಹಜವಾಗಿ ನಮಗೆ ₹3 ರಿಂದ 4 ಸಾವಿರ ಕೋಟಿ ಹೆಚ್ಚಿನ ಆದಾಯ ಬೇಕು. ಅದು ಸಾರ್ವಜನಿಕರ ಅಭಿವೃದ್ಧಿಗೆ ಬಳಕೆ ಮಾಡಲು ನೀಡುತ್ತಿದ್ದೇವೆ ಎಂದರು.

ಬಸ್ ಟಿಕೆಟ್ ಬೆಲೆ ಹೆಚ್ಚಾಗಬಹುದು ಇಲ್ಲವೇ ಆಗದೆ ಇರಬಹುದು. ಅದನ್ನು ರಾಜ್ಯ ಸರ್ಕಾರ ನಿರ್ಣಯಿಸುತ್ತದೆ. ಬಿಜೆಪಿ ಇದ್ದಾಗ ಸಹ ಬೆಲೆ ಏರಿಕೆ ಆಗಿತ್ತು. ಅದನ್ನು ಪರಿಸ್ಥಿತಿಗೆ ಅನುಗುಣವಾಗಿ ಮಾಡಬೇಕಾಗುತ್ತದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನಗೆ ಸಚಿವ ಸ್ಥಾನ ಕೊಟ್ಟರೆ ಕೊಡಲಿ, ಬಿಟ್ಟರೆ ಬಿಡಲಿ ಎಂದರು.

Share this article