ಅರ್ಚಕನ ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ

KannadaprabhaNewsNetwork |  
Published : Sep 04, 2026, 02:45 AM IST
 | Kannada Prabha

ಸಾರಾಂಶ

ಆಸ್ತಿ ವಿವಾದಕ್ಕೆ ಸಂಬಂಧಿಸಿ 2018ರ ಅ. 16ರಂದು ಈ ಕೊಲೆ ಪ್ರಕರಣವು ನಡೆದಿತ್ತು. ಮೃತ ವಿಶ್ವೇಶ್ವರ ಭಟ್ ಅವರ ದೂರದ ಸಂಬಂಧಿ ಮಂಜುನಾಥ ಈಶ್ವರ ಹೆಗಡೆ, ಆತನ ತಂಗಿಯ ಮಗ ಹರೀಶ್ ಹೆಗಡೆ ಹಾಗೂ ಸೊರಬ ಮೂಲದ ಧನಂಜಯ ನಾಯ್ಕ ಅಪರಾಧಿಗಳು.

ಕಾರವಾರ: ಕುಮಟಾದ ಕುಂಬೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಬಿ. ತೀರ್ಪು ನೀಡಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿ 2018ರ ಅ. 16ರಂದು ಈ ಕೊಲೆ ಪ್ರಕರಣವು ನಡೆದಿತ್ತು. ಮೃತ ವಿಶ್ವೇಶ್ವರ ಭಟ್ ಅವರ ದೂರದ ಸಂಬಂಧಿ ಮಂಜುನಾಥ ಈಶ್ವರ ಹೆಗಡೆ, ಆತನ ತಂಗಿಯ ಮಗ ಹರೀಶ್ ಹೆಗಡೆ ಹಾಗೂ ಸೊರಬ ಮೂಲದ ಧನಂಜಯ ನಾಯ್ಕ ಅಪರಾಧಿಗಳು.ಕುಟುಂಬದ ಆಸ್ತಿ ವಿಚಾರವಾಗಿ ವಿಶ್ವೇಶ್ವರ ಭಟ್ ಅವರೊಂದಿಗೆ ಉಂಟಾಗಿದ್ದ ಕಲಹದಿಂದ ಆಕ್ರೋಶಗೊಂಡಿದ್ದ ಮಂಜುನಾಥ ಈಶ್ವರ ಹೆಗಡೆ, ಹರೀಶ್ ಹೆಗಡೆ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

ಈ ಹಿಂದೆ ಮತ್ತೊಂದು ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಹರೀಶ್ ಹೆಗಡೆಗೆ ಧನಂಜಯ ನಾಯ್ಕನ ಪರಿಚಯವಾಗಿದ್ದು, ಬಳಿಕ ವಿಶ್ವೇಶ್ವರ ಭಟ್ ಅವರ ಕೊಲೆ ಪ್ರಕರಣದಲ್ಲೂ ಧನಂಜಯ ಭಾಗಿಯಾಗಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು.ವಿಶ್ವೇಶ್ವರ ಭಟ್ ಅವರಿಗೆ ಧನಂಜಯ ಪರಿಚಯವಿಲ್ಲದ ಹಿನ್ನೆಲೆಯಲ್ಲಿ ಪೂಜೆಯ ನೆಪವೊಡ್ಡಿ ಮೂರೂರಿನಲ್ಲಿ ಜಮೀನು ಪೂಜೆ ಇದೆ ಎಂದು ಹೇಳಿ ಅವರನ್ನು ಆರೋಪಿಗಳು ಮೋಸದಿಂದ ಕರೆದುಕೊಂಡು ಹೋಗಿದ್ದರು. ಬಳಿಕ ಕೂಜಳ್ಳಿಯಲ್ಲಿರುವ ಮಂಜುನಾಥ ಹೆಗಡೆ ಅವರ ತೋಟದಲ್ಲಿ ವಿಶ್ವೇಶ್ವರ ಭಟ್ ಅವರ ತಲೆಗೆ ಕಾಯಿ ಸುಲಿಯುವ ಆಯುಧದಿಂದ ಹೊಡೆದು ಕೊಲೆ ಮಾಡಲಾಗಿತ್ತು. ಬಳಿಕ ಶವವನ್ನು ಅದೇ ತೋಟದಲ್ಲಿ ಹೂತು ಹಾಕಲಾಗಿತ್ತು. ವಿಶ್ವೇಶ್ವರ ಭಟ್ ಅವರ ಬೈಕ್‌ನ್ನು ತೋಟದ ಬಾವಿಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು.ವಿಶ್ವೇಶ್ವರ ಭಟ್ ನಾಪತ್ತೆಯಾಗಿರುವ ಕುರಿತು ಅವರ ಪತ್ನಿ ಸರಸ್ವತಿ ಭಟ್ ಅವರು ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಅಂದಿನ ಸಿಪಿಐ ಸಂತೋಷ ಶೆಟ್ಟಿ ಹಾಗೂ ಪಿಎಸ್‌ಐ ಸಂಪತ್ ಅವರ ನೇತೃತ್ವದ ತಂಡ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿತ್ತು.ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪಪಟ್ಟಿಯ ಆಧಾರದ ಮೇಲೆ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ವಾದ-ಪ್ರತಿವಾದಗಳನ್ನು ಆಲಿಸಿ ಗುರುವಾರ ಮೂವರು ಅಪರಾಧಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ದೂರುದಾರರ ಪರವಾಗಿ ಎಪಿಪಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ಜನನ ಪ್ರಮಾಣಪತ್ರ ಸೃಷ್ಟಿಸಿ ವಂಚನೆ: ಇಬ್ಬರಿಗೆ ಶಿಕ್ಷೆ
ಮನುಷ್ಯನಿಗೆ ಅರಿವಿನ ಬದುಕು ಅಗತ್ಯ: ರಾಘವೇಶ್ವರ ಭಾರತೀ ಶ್ರೀ