2021ರ ಸೆ. 24ರಂದು ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೆರಂಗಡಿಯಲ್ಲಿ ವಾಸವಿರುವ ಆರೋಪಿಗಳು, ಮುಕ್ಸಿದ್ ತಂದೆ ಗಫೂರ್ ಮಹಮ್ಮದ್ ಸಾಬ್ ಎಂಬ ಮಗುವಿನ ಅಸಲಿ ಜನನ ಪ್ರಮಾಣಪತ್ರದಲ್ಲಿ ಹೆಸರು, ತಂದೆಯ ಹೆಸರು ಹಾಗೂ ಅಡ್ಡ ಹೆಸರನ್ನು ಮುಕ್ಸಿದ್ ರಫೀಕ್ ಅಹ್ಮದ್ ಸಾಬ ಅಷ್ಕಾರ್ ಎಂದು ಅಕ್ರಮವಾಗಿ ತಿದ್ದುಪಡಿ ಮಾಡಿದ್ದರು.
ಹೊನ್ನಾವರ: ನಕಲಿ ಸೀಲು ಹಾಗೂ ಸಹಿ ಬಳಸಿ ನಕಲಿ ಜನನ ಪ್ರಮಾಣಪತ್ರ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಹಿರಿಯ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ 3 ತಿಂಗಳ ಜೈಲು ಶಿಕ್ಷೆ ಹಾಗೂ ತಲಾ ₹18,000 ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಆರೋಪಿಗಳಾದ ರುಬಿನಾ ರಫಿಕ್ ಅಪಕಾರ(1ನೇ ಆರೋಪಿ) ಹಾಗೂ ಮತೀನ ಅಹ್ಮದ ಅಪಕಾರ(2ನೇ ಆರೋಪಿ) ಶಿಕ್ಷೆಗೆ ಗುರಿಯಾದವರಾಗಿದ್ದಾರೆ. ಪ್ರಕರಣದಲ್ಲಿದ್ದ ಮತ್ತೊಬ್ಬ ಆರೋಪಿ(3ನೇ ಆರೋಪಿ) ಕಿರಣ್ ಲಾರನ್ನ ಫರ್ನಾಂಡಿಸ್ ತನಿಖೆಯ ಅವಧಿಯಲ್ಲೇ ಮೃತಪಟ್ಟಿದ್ದಾರೆ. ನ್ಯಾಯಾಧೀಶರಾದ ಭಾರತಿ ಶಿವಪುತ್ರ ರಾಯಣ್ಣನವರ್ ಅವರು ಪ್ರಕರಣದ ವಿಚಾರಣೆ ನಡೆಸಿ ಈ ಮಹತ್ವದ ಆದೇಶ ಹೊರಡಿಸಿದ್ದಾರೆ.ಪ್ರಕರಣದ ಹಿನ್ನೆಲೆ: 2021ರ ಸೆ. 24ರಂದು ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೆರಂಗಡಿಯಲ್ಲಿ ವಾಸವಿರುವ ಆರೋಪಿಗಳು, ಮುಕ್ಸಿದ್ ತಂದೆ ಗಫೂರ್ ಮಹಮ್ಮದ್ ಸಾಬ್ ಎಂಬ ಮಗುವಿನ ಅಸಲಿ ಜನನ ಪ್ರಮಾಣಪತ್ರದಲ್ಲಿ ಹೆಸರು, ತಂದೆಯ ಹೆಸರು ಹಾಗೂ ಅಡ್ಡ ಹೆಸರನ್ನು ಮುಕ್ಸಿದ್ ರಫೀಕ್ ಅಹ್ಮದ್ ಸಾಬ ಅಷ್ಕಾರ್ ಎಂದು ಅಕ್ರಮವಾಗಿ ತಿದ್ದುಪಡಿ ಮಾಡಿದ್ದರು.ಇದಕ್ಕಾಗಿ ನಕಲಿ ರೌಂಡ್ ಸೀಲ್, ನಕಲಿ ಸಹಿ ಹಾಗೂ ಡಿಜಿಟಲ್ ಬಾರ್ ಕೋಡ್ಗಳನ್ನು ಬಳಸಿ ನಕಲಿ ದಾಖಲೆಯನ್ನು ಸೃಷ್ಟಿಸಲಾಗಿತ್ತು. ಬಳಿಕ, ಈ ನಕಲಿ ಜನನ ಪ್ರಮಾಣಪತ್ರವನ್ನು ಹೊನ್ನಾವರ ಪಟ್ಟಣ ಪಂಚಾಯಿತಿಯಿಂದಲೇ ಪಡೆದಿದ್ದಾಗಿ ಬಿಂಬಿಸಿ, ಮಗುವಿನ ಹೆಸರು ಹಾಗೂ ತಂದೆಯ ಹೆಸರು ತಿದ್ದುಪಡಿ ಮಾಡುವಂತೆ ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಸರ್ಕಾರಕ್ಕೆ ವಂಚಿಸಲು ಯತ್ನಿಸಿದ್ದರು.ಪೊಲೀಸ್ ತನಿಖೆ ಮತ್ತು ವಿಚಾರಣೆ: ಈ ವಂಚನೆ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2022ರಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಾದ ಗಣೇಶ ಎಸ್. ನಾಯ್ಕ, ಮಂಜೇಶ್ವರ ಚಂದಾವರ ಹಾಗೂ ಸಾವಿತ್ರಿ ಎ. ನಾಯಕ ಅವರು ಪ್ರಕರಣದ ಸುದೀರ್ಘ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಸಿಸಿ ನಂಬರ್ 01/2024ರಡಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಿಎಚ್ಸಿ 496 ಪ್ರಶಾಂತ ಅಡಪೆಕರ ಅವರು ಕೋರ್ಟ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದರು.ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಸೀತಾರಾಮ ಹರಿಕಾಂತರ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಲಯವು ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.