ಪ್ರಧಾನಿ ಮೋದಿ ಆಸಕ್ತಿಯಿಂದ ದೇಶಿ ಕ್ರೀಡೆಗಳಿಗೆ ಕಳೆ: ಶಾಸಕ ಅರವಿಂದ ಬೆಲ್ಲದ

KannadaprabhaNewsNetwork | Published : Feb 12, 2024 1:32 AM

ಸಾರಾಂಶ

ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ಕೊಡುವ ಉದ್ದೇಶದಿಂದ ಖೇಲೋ ಇಂಡಿಯಾ ಮೂಲಕ ಪ್ರತಿಭೆಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ಶಾಸಕ ಬೆಲ್ಲದ ಹೇಳಿದರು.

ಕುಂದಗೋಳ: ಭಾರತದ ಸಂಸ್ಕೃತಿ, ಕ್ರೀಡೆ, ಕಲೆ ಉಳಿಯಬೇಕು ಎಂಬುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಸೆ. ಇಂತಹ ಗ್ರಾಮೀಣ ಕ್ರೀಡೆಗಳು ಪ್ರಧಾನಿಗಳ ಆಸಕ್ತಿಯಿಂದಲೇ ಮತ್ತೇ ಚಿಗುರೊಡೆದಿವೆ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ, ಶಾಸಕ ಅರವಿಂದ ಬೆಲ್ಲದ ಹೇಳಿದರು.

ಪಟ್ಟಣದ ಹರಭಟ್ ಕಾಲೇಜು ಮೈದಾನದಲ್ಲಿ ಸಂಸದರ ಕ್ರೀಡಾ ಮಹೋತ್ಸವ ಹಾಗೂ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ನಡೆದ ಕುಂದಗೋಳ ವಿಧಾನಸಭಾ ಕ್ಷೇತ್ರದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ಕೊಡುವ ಉದ್ದೇಶದಿಂದ ಖೇಲೋ ಇಂಡಿಯಾ ಮೂಲಕ ಆಟಗಳಿಗೆ ಉಪಯೋಗವಾಗುವ ಮೈದಾನ, ಮ್ಯಾಟ್, ಲೈಟಿಂಗ್ ಉತ್ತಮ ವ್ಯವಸ್ಥೆ ಮೂಲಕ ಪ್ರತಿಭೆಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಬೆಂಗಳೂರು ನಗರದಲ್ಲಿ ಇರುವ ಕ್ರೀಡಾಂಗಣದ ರೀತಿ 21 ಬೇರೆ ಬೇರೆ ಆಟಗಳಿಗೆ ವ್ಯವಸ್ಥೆ ಇರುವ ಉತ್ತರ ಕರ್ನಾಟಕದ ಭಾಗಗಳಿಗೆ ನಮ್ಮ ಹುಬ್ಬಳ್ಳಿಯಲ್ಲಿ ಸಂಸದ ಪ್ರಹ್ಲಾದ ಜೋಶಿ ಅವರ ಪ್ರಯತ್ನದಿಂದ ₹188 ಕೋಟಿ ವೆಚ್ಚದಲ್ಲಿ 2025ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.

ಕ್ರೀಡಾ ಜ್ಯೋತಿ ಬೆಳಗಿಸಿ, ಪಾರಿವಾಳ ಹಾರಿ ಬಿಡುವ ಮೂಲಕ ಕ್ರೀಡೆಗೆ ಚಾಲನೆ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಅನೇಕ ಪ್ರತಿಭೆಗಳಿದ್ದು, ಅವರಿಗೆ ಉತ್ತಮ ವೇದಿಕೆಯ ನೀಡುವ ಮೂಲಕ ಗುರುತಿಸುವ ಕೆಲಸ ಮಾಡುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕಾರ್ಯ ಶ್ಲಾಘನೀಯ ಎಂದರು.

ಶಾಸಕ ಎಂ.ಆರ್. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣದ ಕಲ್ಯಾಣಪುರ ಮಠದ ಬಸವಣ್ಣಜ್ಜನವರು ಹಾಗೂ ಶಿತಿಕಂಠೇಶ್ವರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ನೇತಾಜಿ ಹಾರೋಗೇರಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಬಿ. ಗಂಗಾಧರಮಠ, ಈರಣ್ಣ ಜಡಿ, ಡಿ.ವೈ. ಲಕ್ಕನಗೌಡ್ರ, ಅರವಿಂದ್ ಕಟಗಿ, ಉಮೇಶ ಹೆಬಸೂರ, ಮಹಾಂತೇಶ ಶ್ಯಾಗೋಟಿ, ರವಿಗೌಡ ಪಾಟೀಲ, ಪ್ರಕಾಶ ಕೂಬಿಹಾಳ, ಪ್ರತಾಪ ಪಾಟೀಲ ಸೇರಿದಂತೆ ಹಲವರಿದ್ದರು.

Share this article