ಹಾವೇರಿ: ಪ್ರಧಾನಿ ನರೇಂದ್ರ ಮೋದಿಯವರು ಬಲಿಷ್ಠ ನಾಯಕರಾಗಿದ್ದು, ಭಾರತ ದಾನ ಮಾಡುವ ದೇಶ ಎಂದು ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ. ಮೋದಿಯವರು ರಾಜಕೀಯ ರಂಗದ ಪವರ್ ಸ್ಟಾರ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಸವಣೂರು ತಾಲೂಕಿನ ಕಳಸೂರು, ಹಿರೇಮಗದೂರು, ಡೊಂಬರಮತ್ತೂರು, ಹಿರೇಮರಳಿಹಳ್ಳಿ, ಇಚ್ಚಂಗಿ, ಹೆಸರೂರು ಗ್ರಾಮಗಳಲ್ಲಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿ ಅವರು ಮಾತನಾಡಿದರು.ಬಲಿಷ್ಠ ದೇಶಕ್ಕೆ ಬಲಿಷ್ಠ ನಾಯಕತ್ವ ಬೇಕು. ಬಿಜೆಪಿ ಜಗತ್ತಿನ ಅತಿ ದೊಡ್ಡ ಪಕ್ಷ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಬಲಿಷ್ಠ ನಾಯಕರಾಗಿದ್ದಾರೆ ಎಂದು ಹೇಳಿದರು.ಮೋದಿಯವರು ಪ್ರಧಾನಿ ಆಗುವ ಮೊದಲು ಗುಜರಾತ್ ಸಿಎಂ ಆಗಿದ್ದರು. ಅವರಿಗೆ ದೇಶದ ಚುಕ್ಕಾಣಿ ಹಿಡಿಯಲು ಅವಕಾಶ ಕಲ್ಪಿಸಲಾಯಿತು. ಅವರು ಏಕ ಭಾರತ ಶ್ರೇಷ್ಠ ಭಾರತ ಎಂದು ಸಾರಿದರು. ಇದು ಬಲಿಷ್ಠ ರಾಷ್ಟ್ರ ಎನ್ನುವ ಸಂದೇಶ ಸಾರಿದರು. ವಿದೇಶಗಳಿಗೆ ನಾವು ಭಿಕ್ಷೆ ಬೇಡುವವರಲ್ಲ, ದಾನ ಕೊಡುವವರು ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ಆರ್ಥಿಕ ಪರಿಸ್ಥಿತಿ ದಿವಾಳಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆಡಳಿತ ಪಕ್ಷದ ಶಾಸಕರು ಅನುದಾನಕ್ಕೆ ಪತ್ರ ಕೊಟ್ಡರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಈ ವರ್ಷ ಪತ್ರ ಕೊಡಬೇಡಿ ಹಣ ಇಲ್ಲ ಎಂದು ಹೇಳಿದ್ದಾರೆ. ಅವರು ಪ್ರತಿಪಕ್ಷದವರಿಗೆ ಬೇಡ ಅವರ ಪಕ್ಷದ ಶಾಸಕರಿಗೆ ಅನುದಾನ ಕೊಡಲಿ ಎಂದರು. ನಾನು ಸಿಎಂ ಆಗಿದ್ದಾಗ ಪ್ರತಿ ಪಕ್ಷದ ಶಾಸಕರ ಕ್ಷೇತ್ರಗಳಿಗೂ 25 ಕೋಟಿ ರು. ಅನುದಾನ ನೀಡಿದ್ದೆ. ಗ್ರಾಮ ಪಂಚಾಯತಿಗಳಿಗೆ ವಿಶೇಷ ಅನುದಾನ ನೀಡಿದ್ದೆ. ಇದು ಬಡವರ, ದಲಿತರ ವಿರೋಧಿ ಸರ್ಕಾರ. ಬರಗಾಲ ಬಂದರೂ ಒಂದು ಬೋರ್ವೆಲ್ ಕೊರೆಯಲು ಹಣ ಕೊಡುತ್ತಿಲ್ಲ. ಈ ಚುನಾವಣೆಯಲ್ಲಿ ನನ್ನನ್ನು ಈ ಕ್ಷೇತ್ರದ ಸಂಸದನನ್ನಾಗಿ ಆಯ್ಕೆ ಮಾಡಿದರೆ, ನಿಮ್ಮ ಸೇವೆಯನ್ನು ಸಂಸತ್ತಿನಲ್ಲಿ ಸಿಂಹ ಘರ್ಜನೆ ರೀತಿಯಲ್ಲಿ ಮಾಡುತ್ತೇನೆ ಎಂದು ಹೇಳಿದರು.